‘ಮೋಡ ಕವಿದ ವಾತಾವರಣ’: ಹೊಸ ಹೀರೋ ಪರಿಚಯಕ್ಕೆ ಟೀಸರ್ ತೋರಿಸಿದ ಸಿಂಪಲ್ ಸುನಿ
‘ಮೋಡ ಕವಿದ ವಾತಾವರಣ’ ಸಿನಿಮಾದ ಮೂಲಕ ನಿರ್ದೇಶಕ ಸಿಂಪಲ್ ಸುನಿ ಅವರು ತಮ್ಮ ಗರಡಿಯ ಹುಡುಗ ಶೀಲಮ್ ಅವರನ್ನು ಚಿತ್ರರಂಗಕ್ಕೆ ಹೀರೋ ಆಗಿ ಪರಿಚಯ ಮಾಡುತ್ತಿದ್ದಾರೆ. ಶೀಲಮ್ ಅವರಿಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ಅಭಿನಯಿಸಿದ್ದಾರೆ. ಜೂನ್ 26ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ.

ನಿರ್ದೇಶಕ ಸಿಂಪಲ್ ಸುನಿ (Simple Suni) ಅವರ ಸಿನಿಮಾಗಳಲ್ಲಿ ಒಂದಲ್ಲಾ ಒಂದು ವಿಶೇಷತೆ ಇದ್ದೇ ಇರುತ್ತದೆ ಎಂಬ ನಂಬಿಕೆ ಅಭಿಮಾನಿಗಳಿಗೆ ಇದೆ. ಪ್ರತಿ ಸಿನಿಮಾದಲ್ಲಿ ಸುನಿ ಅವರ ಆ ನಂಬಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಸ್ಟಾರ್ ಸಿನಿಮಾ ಆಗಿರಲಿ, ಹೊಸಬರ ಸಿನಿಮಾ ಆಗಿರಲಿ, ಸುನಿ ನಿರ್ದೇಶನದಲ್ಲಿ ಪ್ರೇಕ್ಷಕರಿಗೆ ಮನರಂಜನೆ ಗ್ಯಾರಂಟಿ. ಈಗ ಅವರು ‘ಮೋಡ ಕವಿದ ವಾತಾವರಣ’ (Moda Kavida Vaatavarana) ಸಿನಿಮಾದಲ್ಲಿ ಹೊಸ ನಟ ಶೀಲಮ್ ಅವರನ್ನು ಹೀರೋ ಆಗಿ ಲಾಂಚ್ ಮಾಡುತ್ತಿದ್ದಾರೆ. ಈ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆ ಆಯಿತು.
‘ಒಂದು ಸರಳ ಪ್ರೇಮಕಥೆ’, ‘ಗತ ವೈಭವ’ ಸಿನಿಮಾಗಳ ಬಳಿಕ ಸಿಂಪಲ್ ಸುನಿ ಅವರ ನಿರ್ದೇಶನದಲ್ಲಿ ಬರುತ್ತಿರುವ ಮತ್ತೊಂದು ಸೊಗಸಾದ ಪ್ರೇಮ ಕಥೆಯ ಚಿತ್ರವೇ ‘ಮೋಡ ಕವಿದ ವಾತಾವರಣ’. ಶೀರ್ಷಿಕೆಯಿಂದಲೇ ಈ ಸಿನಿಮಾ ಗಮನ ಸೆಳೆಯುತ್ತಿದೆ. ಈ ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಪ್ರಚಾರದ ಭಾಗವಾಗಿ ಟೀಸರ್ ರಿಲೀಸ್ ಆಗಿದೆ.
ಟೀಸರ್ ಬಿಡುಗಡೆ ಬಳಿಕ ಸುನಿ ಅವರು ಸಿನಿಮಾ ಮತ್ತೆ ಮಾತನಾಡಿದರು. ‘ಮೋಡ ಕವಿದ ವಾತಾವರಣ ನನ್ನ ಜೀವನದ ಸ್ಪೆಷಲ್ ಸಿನಿಮಾ. ನಾನು ಟ್ರೇಲರ್ ಚೆನ್ನಾಗಿ ಕಟ್ ಮಾಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಈ ಸಿನಿಮಾ ಚಾಲೆಂಜ್ ಏನೆಂದರೆ ಟ್ರೇಲರ್ ಕಟ್ ಚೆನ್ನಾಗಿ ಮಾಡಲು ಆಗುವುದಿಲ್ಲ. ಚಿತ್ರದ ಅರ್ಧ ಪಾರ್ಟ್ ನಾನು ಚಿತ್ರಮಂದಿರದಲ್ಲೇ ರಿವೀಲ್ ಮಾಡುವುದು. ಸಿನಿಮಾದಲ್ಲಿ ಏನೋ ಒಂದು ಅಂಶವಿದೆ. ಅದನ್ನು ಥಿಯೇಟರ್ನಲ್ಲೇ ನೋಡಬೇಕು. ಹೀಗಾಗಿ ಅರ್ಧ ಸಿನಿಮಾದಲ್ಲಿ ಟ್ರೇಲರ್ ಕಟ್ ಮಾಡಿದ್ದೇವೆ’ ಎಂದು ಅವರು ಹೇಳಿದರು.
‘ಮೋಡ ಕವಿದ ವಾತಾವರಣ’ ಸಿನಿಮಾದ ಟೀಸರ್:
ಹೀರೋ ಆಗಿದ್ದಕ್ಕೆ ನಟ ಶೀಲಮ್ ಅವರಿಗೆ ಸಖತ್ ಖುಷಿ ಇದೆ. ಈ ಕುರಿತು ಅವರು ಮಾತನಾಡಿದ್ದಾರೆ. ‘ಎಲ್ಲರೂ ಹೀರೋ ಆಗಲು ಸಾಧ್ಯವಿಲ್ಲ. ಎಷ್ಟೇ ದುಡ್ಡಿದ್ದರೂ, ಎಷ್ಟೇ ನಟನೆ ಗೊತ್ತಿದ್ದರೂ, ನೋಡಲು ಚೆನ್ನಾಗಿದ್ದರೂ ಆಗಲ್ಲ. ಎಲ್ಲವನ್ನೂ ದಾಟಿ ಪವಾಡ ಆಗಬೇಕು. ನನ್ನ ಜೀವನದಲ್ಲಿ ಅದು ಆಗಿದೆ. ಇದಕ್ಕೆ ಕಾರಣ ಸುನಿ ಸರ್. ನಿರ್ಮಾಪಕ ರಮೇಶ್ ಸರ್ ಈ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಾಕಷ್ಟು ಭಿನ್ನವಾಗಿ ‘ಮೋಡ ಕವಿದ ವಾತಾವರಣ’ ಸಿನಿಮಾದ ಪ್ರಚಾರ ಮಾಡಿದ ಸಿಂಪಲ್ ಸುನಿ
ಜೂನ್ 26ಕ್ಕೆ ‘ಮೋಡ ಕವಿದ ವಾತಾವರಣ’ ಸಿನಿಮಾ ಬಿಡುಗಡೆ ಆಗಲಿದೆ. ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ‘ರಾಮ್ ಮೂವೀಸ್’ ಈಗ ಈ ಸಿನಿಮಾವನ್ನು ನಿರ್ಮಿಸಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ, ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ. ಸಂತೋಷ್ ರೈ ಪಾತಾಜೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಜೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನ ಮತ್ತು ಆದಿತ್ಯ ಕಶ್ಯಪ್ ಅವರ ಸಂಕಲನ ಈ ಚಿತ್ರಕ್ಕಿದೆ. ಈ ಸಿನಿಮಾದಲ್ಲಿ ಸೈಂಟಿಫಿಕ್ ಫಿಕ್ಷನ್ ಲವ್ ಸ್ಟೋರಿ ಇದೆ ಎಂದು ಚಿತ್ರತಂಡ ಹೇಳಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




