ಕಡುಕಷ್ಟ ಕಾಲದಲ್ಲಿ ಹಿರಿಯ ಕಲಾವಿದರ ಕೈ ಹಿಡಿದ ಉಪೇಂದ್ರ; ಮನಸಾರೆ ಹರಸಿದ ಜೀವಗಳು

ಎಲ್ಲೆಡೆ ಲಾಕ್​ಡೌನ್​ ಇರುವುದರಿಂದ ಮನೆಯಿಂದ ಹೊರಬಂದು ಅಗತ್ಯ ವಸ್ತುಗಳನ್ನು ಖರೀದಿಸುವುದು ಹಿರಿಯ ನಾಗರಿಕರಿಗೆ ಕಷ್ಟ ಆಗುತ್ತದೆ. ಈ ಸಂದರ್ಭದಲ್ಲಿ ಉಪೇಂದ್ರ ಸಹಾಯ ಮಾಡುತ್ತಿರುವುದರಿಂದ ಅನೇಕ ಕಲಾವಿದರು ನಿಟ್ಟುಸಿರು ಬಿಡುವಂತಾಗಿದೆ.

ಕಡುಕಷ್ಟ ಕಾಲದಲ್ಲಿ ಹಿರಿಯ ಕಲಾವಿದರ ಕೈ ಹಿಡಿದ ಉಪೇಂದ್ರ; ಮನಸಾರೆ ಹರಸಿದ ಜೀವಗಳು
ಸ್ಯಾಂಡಲ್​ವುಡ್​ನ ಹಿರಿಯ ಕಲಾವಿದರಿಗೆ ನೆರವಾದ ಉಪೇಂದ್ರ

Updated on: May 23, 2021 | 1:45 PM

ನಟ, ನಿರ್ದೇಶಕ ಉಪೇಂದ್ರ ಅವರು ಲಾಕ್​ಡೌನ್​ ಸಮಯದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ತಂಡದವರ ಜೊತೆ ಸೇರಿಕೊಂಡು ಸಾವಿರಾರು ಜನರಿಗೆ ಅವರು ನೆರವು ನೀಡುತ್ತಿದ್ದಾರೆ. ಕೊರೊನಾ ವೈರಸ್​ ನಿಯಂತ್ರಿಸಲು ಸರ್ಕಾರ ಲಾಕ್​ಡೌನ್​ ಜಾರಿ ಮಾಡಿರುವುದರಿಂದ ಅನೇಕರಿಗೆ ಕೆಲಸ ಇಲ್ಲದೆ ಜೀವನ ಸಾಗಿಸುವುದು ಕಷ್ಟ ಆಗಿದೆ. ಪ್ರತಿ ದಿನ ಸಿನಿಮಾ ಚಟುವಟಿಕೆಗಳನ್ನೇ ನಂಬಿಕೊಂಡಿದ್ದ ಬಡ ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಅದರಲ್ಲೂ ಕೆಲವು ಹಿರಿಯ ಕಲಾವಿದರು ಕಣ್ಣೀರಿನಲ್ಲಿ ದಿನ ದೂಡುತ್ತಿದ್ದಾರೆ. ಅಂಥವರ ನೆರವಿಗೆ ರಿಯಲ್​ ಸ್ಟಾರ್​ ಉಪೇಂದ್ರ ಧಾವಿಸಿದ್ದಾರೆ.

ಹಲವು ವರ್ಷಗಳಿಂದ ಸಿನಿಮಾವನ್ನೇ ಜೀವನಾಧಾರವಾಗಿ ನಂಬಿದ್ದ ಹಿರಿಯ ಕಲಾವಿದರಿಗೆ ಇಂದು ಚಿತ್ರರಂಗದಲ್ಲಿ ಸರಿಯಾಗಿ ಅವಕಾಶಗಳು ಸಿಗುತ್ತಿಲ್ಲ. ಲಾಕ್​ಡೌನ್​ ಸಂದರ್ಭದಲ್ಲಿ ಅಂಥವರ ಕಷ್ಟ ಇನ್ನಷ್ಟು ಹೆಚ್ಚಿದೆ. ಅದನ್ನು ಮನಗಂಡಿರುವ ಉಪೇಂದ್ರ ಅವರು ಸ್ಯಾಂಡಲ್​ವುಡ್​ನ ಅನೇಕ ಹಿರಿಯ ನಟ-ನಟಿಯರಿಗೆ ನೆರವು ನೀಡಿದ್ದಾರೆ. ದಿನಸಿ ಸಾಮಗ್ರಿ ಮತ್ತು ಅಗತ್ಯ ವಸ್ತುಗಳಲ್ಲಿ ಅವರವರ ಮನೆಗಳಿಗೆ ಕಳಿಸಿಕೊಟ್ಟಿದ್ದಾರೆ.

ಸದ್ಯ ಎಲ್ಲೆಲ್ಲೂ ಲಾಕ್​ಡೌನ್​ ಇರುವುದರಿಂದ ಮನೆಯಿಂದ ಹೊರಬಂದು ಅಗತ್ಯ ವಸ್ತುಗಳನ್ನು ಖರೀದಿಸುವುದು ಹಿರಿಯ ನಾಗರಿಕರಿಗೆ ಕಷ್ಟ ಆಗುತ್ತದೆ. ಈ ಸಂದರ್ಭದಲ್ಲಿ ಉಪೇಂದ್ರ ಸಹಾಯ ಮಾಡುತ್ತಿರುವುದರಿಂದ ಅನೇಕ ಕಲಾವಿದರು ನಿಟ್ಟುಸಿರು ಬಿಡುವಂತಾಗಿದೆ. ಅವರು ಮಾಡುತ್ತಿರುವ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉಪೇಂದ್ರ ಅವರ ಮುಂದಾಳತ್ವಕ್ಕೆ ಸಾಥ್​ ನೀಡಿರುವ ಹಲವಾರು ಜನರು ದೇಣಿಗೆ ನೀಡಿದ್ದಾರೆ. ಆ ಹಣದಿಂದ ಉಪೇಂದ್ರ ಸಾವಿರಾರು ಜನರಿಗೆ ಪ್ರತಿ ದಿನ ಸಹಾಯ ಮಾಡುತ್ತಿದ್ದಾರೆ.

ಮೋಹನ್​​​ ಜುನೇಜಾ, ಶ್ರೀಲಲಿತಾ, ಕಾಮಿನಿಧರನ್​, ಬೆಂಗಳೂರು ನಾಗೇಶ್​, ಎಟಿ ರಘು, ಉಮೇಶ್​ ಮುಂತಾದವರ ಮನೆಗೆ ಉಪೇಂದ್ರ ಅವರು ದಿನಸಿ ಕಿಟ್​ಗಳನ್ನು ಕಳಿಸಿದ್ದಾರೆ. ಅದನ್ನು ಸ್ವೀಕರಿಸಿರುವ ಈ ಹಿರಿಯ ಜೀವಗಳು ಉಪೇಂದ್ರ ಅವರಿಗೆ ಮನಸಾರೆ ಆಶೀರ್ವಾದ ಮಾಡಿವೆ. ‘ಇಷ್ಟು ದಿನ ನಿಮ್ಮ ಕಾರ್ಯವನ್ನು ಟಿವಿಯಲ್ಲಿ ನೋಡುತ್ತಿದ್ದೆವು. ಇಂದು ನಾನು ಪ್ರತ್ಯಕ್ಷವಾಗಿ ನೋಡಿದೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಧನ್ಯವಾದ ಅರ್ಪಿಸುತ್ತೇನೆ. ನಿಮಗೆ ಒಳ್ಳೆಯದಾಗಲಿ’ ಎಂದು ಹಿರಿಯ ನಟ ಉಮೇಶ್​ ಹೇಳಿದ್ದಾರೆ.

ಲಾಕ್​ಡೌನ್​ ಸಂದರ್ಭದಲ್ಲಿ ರೈತರು ಕೂಡ ಕಷ್ಟದಲ್ಲಿದ್ದಾರೆ. ಹಗಲಿರುಳು ಕಷ್ಟಪಟ್ಟು ಬೆಳೆದ ಬೆಳೆ ಮಾರಾಟ ಆಗದಿದ್ದರೆ ರೈತರ ಶ್ರಮ ವ್ಯರ್ಥವಾಗುತ್ತದೆ. ಹಾಗಾಗಿ ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿಸಿ, ಅದನ್ನು ಅಗತ್ಯ ಇರುವವರಿಗೆ ವಿತರಿಸುವ ಕಾಯಕವನ್ನು ಕೂಡ ಉಪೇಂದ್ರ ಮಾಡುತ್ತಿದ್ದಾರೆ.

ಇದನ್ನೂ ಓದಿ:

‘ನಾನು ಮುಖ್ಯಮಂತ್ರಿ ಆಗ್ಬೇಕು; ನೀವು ನನ್ನ ಗೆಲ್ಲಿಸ್ತೀರಾ?’; ಉಪೇಂದ್ರ ಕೇಳಿದ ಪ್ರಶ್ನೆಗೆ ಜನ ಕೊಟ್ಟ ಉತ್ತರ ಏನು?

ಉಪೇಂದ್ರ ಮಾಡುತ್ತಿರುವ ಪುಣ್ಯದ ಕೆಲಸಕ್ಕೆ ಕೈ ಜೋಡಿಸಿದ ಸಾಧುಕೋಕಿಲ, ಸರೋಜಾದೇವಿ ಮುಂತಾದ ಸೆಲೆಬ್ರಿಟಿಗಳು

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us