‘ಉಪೇಂದ್ರ’ ಸಿನಿಮಾ ಮರುಬಿಡುಗಡೆ: ಸರಿಯಾದ ಉತ್ತರ ನೀಡಿದರೆ 1 ಕೋಟಿ ರೂ. ಬಹುಮಾನ

‘ಉಪೇಂದ್ರ’ ಸಿನಿಮಾ ಮೂಲಕ ಬುದ್ಧಿವಂತ ಪ್ರೇಕ್ಷಕರಿಗೆ ಪ್ರಶ್ನೆ ಕೇಳಲಾಗುತ್ತದೆ. ಸರಿ ಉತ್ತರ ನೀಡಿದರೆ ಕೋಟ್ಯಂತರ ರೂಪಾಯಿ ಬಹುಮಾನ ಸಿಗಲಿದೆ. ಕೋಟ್ಯಾಧಿಪತಿ ಆಗುವ ಅವಕಾಶ ಯಾರಿಗೆ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ‘ಉಪೇಂದ್ರ’ ಸಿನಿಮಾದ ಮರು ಬಿಡುಗಡೆ ಪ್ರಯುಕ್ತ ಈ ಆಫರ್ ನೀಡಲಾಗಿದೆ.

‘ಉಪೇಂದ್ರ’ ಸಿನಿಮಾ ಮರುಬಿಡುಗಡೆ: ಸರಿಯಾದ ಉತ್ತರ ನೀಡಿದರೆ 1 ಕೋಟಿ ರೂ. ಬಹುಮಾನ
Parameshwar, Upendra Movie Poster

Updated on: May 11, 2026 | 7:23 PM

ಕನ್ನಡ ಚಿತ್ರರಂಗದಲ್ಲಿ ಡಿಫರೆಂಟ್ ಸಿನಿಮಾ ಎನಿಸಿಕೊಂಡ ‘ಉಪೇಂದ್ರ’ (Upendra) ಚಿತ್ರ ಈಗ ಮತ್ತೆ ಸುದ್ದಿಯಲ್ಲಿದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ ಈ ಸಿನಿಮಾ ಮತ್ತೆ ತೆರೆಗೆ ಬರಲಿದೆ. ಇತ್ತೀಚೆಗೆ ಹಳೆಯ ಸಿನಿಮಾಗಳನ್ನು ಮರುಬಿಡುಗಡೆ ಮಾಡುವ ಟ್ರೆಂಡ್ ಜೋರಾಗಿದೆ. ಆದ್ದರಿಂದ ‘ಉಪೇಂದ್ರ’ ಸಿನಿಮಾವನ್ನು ಮರು ಬಿಡುಗಡೆ ಮಾಡಲು ಪ್ಲ್ಯಾನ್ ಸಿದ್ಧವಾಗಿದೆ. ಈ ಬಾರಿ ಪ್ರೇಕ್ಷಕರಿಗೆ ನಗದು ರೂಪದಲ್ಲಿ ಭರ್ಜರಿ ಬಹುಮಾನ ಸಿಗಲಿದೆ ಎಂಬುದು ವಿಶೇಷ.

ಈ ಬಾರಿ ಸಿನಿಮಾ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ‘ISH MYRA Producer’ ಕಂಪನಿಯ ಪರಮೇಶ್ವರ್ ಬಿ. ಅವರು ಪ್ರೇಕ್ಷಕರಿಗೆ ಬಂಪರ್ ಆಫರ್ ನೀಡಿದ್ದಾರೆ. ಜೂನ್ 4ರಂದು ರಾಜ್ಯದಾದ್ಯಂತ ಸುಮಾರು 100 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರ ನೋಡುವ ಪ್ರೇಕ್ಷಕರಿಗೆ ಪ್ರತಿ ಶೋ ಮುಗಿದ ನಂತರ 10 ನಿಮಿಷಗಳ ಕಾಲ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದೆ.

ಆಯಾ ಶೋನಲ್ಲಿ ಕೇಳಲಾಗುವ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ ಪ್ರೇಕ್ಷಕರಿಗೆ, ಆ ನಿರ್ದಿಷ್ಟ ಶೋನ ಒಟ್ಟು ಕಲೆಕ್ಷನ್ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ. ಸಿನಿಮಾ ಪ್ರದರ್ಶನದ 25ನೇ ದಿನದಂದು ಕೇಳಲಾಗುವ ಪ್ರಶ್ನೆಗೆ ನಿಖರ ಉತ್ತರ ನೀಡುವ ಒಬ್ಬ ಅದೃಷ್ಟಶಾಲಿ ಪ್ರೇಕ್ಷಕನಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಪರಮೇಶ್ವರ್ ಘೋಷಿಸಿದ್ದಾರೆ.

ಈ ಸಾಹಸಮಯ ಯೋಜನೆಯ ಹಿಂದಿರುವ ಪ್ರಮುಖ ಉದ್ದೇಶಗಳನ್ನು ಕೂಡ ಪರಮೇಶ್ವರ್ ಹಂಚಿಕೊಂಡಿದ್ದಾರೆ. ಪ್ರಸ್ತುತ ಸಂಕಷ್ಟದಲ್ಲಿರುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಮರಳಿ ಕರೆತರುವುದು. ಇಂದಿನ ತಲೆಮಾರಿನ ಪ್ರೇಕ್ಷಕರಿಗೆ ಹಾಗೂ ಯುವ ಸಿನಿಮಾ ಮೇಕರ್‌ಗಳಿಗೆ ಕನ್ನಡ ಚಿತ್ರರಂಗದ ಮೈಲಿಗಲ್ಲು ಚಿತ್ರಗಳನ್ನು ಪರಿಚಯಿಸುವುದು. ಸಿನಿಮಾ ಬಿಡುಗಡೆಯಿಲ್ಲದ ಸಮಯದಲ್ಲಿ ಚಿತ್ರಮಂದಿರಗಳಿಗೆ ಚೈತನ್ಯ ತುಂಬುವುದು ಉದ್ದೇಶ ಎಂದು ಹೇಳಲಾಗಿದೆ.

ಇದನ್ನೂ ಓದಿ: ‘ಕತ್ತರಿಗುಪ್ಪೆಯಲ್ಲಿ ನಾನು ಚುನಾವಣೆಗೆ ನಿಲ್ಲಬಹುದು’: ಏನಿದು ಉಪೇಂದ್ರ ಪ್ಲ್ಯಾನ್?

ಈ ವಿಶೇಷ ಮರುಬಿಡುಗಡೆಗೆ ‘ಉಪೇಂದ್ರ’ ಚಿತ್ರದ ಮೂಲ ನಿರ್ಮಾಪಕರಾದ ಶಿಲ್ಪಾ ಶ್ರೀನಿವಾಸ್ ಅವರು ಸಮ್ಮತಿ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಮತ್ತೊಂದು ಸುದ್ದಿಗೋಷ್ಠಿಯಲ್ಲಿ ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ಮಾಪಕರು ಭಾಗವಹಿಸಿ, ಯೋಜನೆಯ ಸಂಪೂರ್ಣ ನಿಯಮ ಮತ್ತು ವಿವರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us