ಬೆಳ್ಳಿತೆರೆಯಲ್ಲಿ ಯಕ್ಷಗಾನ; ಏಪ್ರಿಲ್ 18ಕ್ಕೆ ಬಿಡುಗಡೆ ಆಗಲಿದೆ ‘ವೀರ ಚಂದ್ರಹಾಸ’ ಸಿನಿಮಾ

ಇದೇ ಮೊದಲ ಬಾರಿಗೆ ಯಕ್ಷಗಾನದ ಕಥೆಯನ್ನು ಇಟ್ಟುಕೊಂಡು ‘ವೀರ ಚಂದ್ರಹಾಸ’ ಸಿನಿಮಾ ಮೂಡಿಬಂದಿದೆ. ರವಿ ಬಸ್ರೂರು ನಿರ್ದೇಶನದ ಈ ಸಿನಿಮಾದಲ್ಲಿ ನಿಜವಾದ ಯಕ್ಷಗಾನ ಕಲಾವಿದರು ನಟಿಸಿದ್ದಾರೆ. 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಪ್ರಿಲ್ 18ರಂದು ಈ ಸಿನಿಮಾ ತೆರೆಕಾಣಲಿದೆ. ಟ್ರೇಲರ್ ಬಿಡುಗಡೆ ವೇಳೆ ಚಿತ್ರತಂಡದವರು ಮಾತನಾಡಿದರು.

ಬೆಳ್ಳಿತೆರೆಯಲ್ಲಿ ಯಕ್ಷಗಾನ; ಏಪ್ರಿಲ್ 18ಕ್ಕೆ ಬಿಡುಗಡೆ ಆಗಲಿದೆ ‘ವೀರ ಚಂದ್ರಹಾಸ’ ಸಿನಿಮಾ
Veera Chandrahasa Movie Team

Updated on: Apr 09, 2025 | 4:08 PM

ಖ್ಯಾತ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು (Ravi Basrur) ಅವರು ಸಿನಿಮಾ ನಿರ್ದೇಶನದಲ್ಲೂ ಆಸಕ್ತಿ ಹೊಂದಿದ್ದಾರೆ. ಈಗ ಅವರು ‘ವೀರ ಚಂದ್ರಹಾಸ’ (Veera Chandrahasa) ಸಿನಿಮಾಗೆ ಆ್ಯಕ್ಷನ್​-ಕಟ್ ಹೇಳಿದ್ದಾರೆ. ಈ ಸಿನಿಮಾ ಏಪ್ರಿಲ್ 18ರಂದು ಬಿಡುಗಡೆ ಆಗಲಿದೆ. ದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ ಪ್ರತೀಕವಾದ‌ ಯಕ್ಷಗಾನ (Yakshagana) ಕಲೆಯ ಹಿರಿಮೆಯನ್ನು ಜಗತ್ತಿಗೆ ಹೇಳಲು ಈ ಸಿನಿಮಾ ಮಾಡಿದ್ದಾರೆ. ಯಕ್ಷಗಾನ ಪ್ರಸಂಗ ಆಧಾರಿತವಾಗಿ ‘ವೀರ ಚಂದ್ರಹಾಸ’ ಸಿನಿಮಾ ಮೂಡಿಬಂದಿದೆ. ಎನ್​.ಎಸ್. ರಾಜ್​ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ಈ ಸಿನಿಮಾ ಬಿಡುಗಡೆ ಆಗುತ್ತಿದೆ.

ಇತ್ತೀಚೆಗೆ ‘ವೀರ ಚಂದ್ರಹಾಸ’ ಸಿನಿಮಾದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮ ಕುಂದಾಪುರದ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ನಡೆಯಿತು. ಈ ವೇಳೆ ಯಕ್ಷಗಾನ ಕಲಾವಿದರನ್ನು ಗೌರವಿಸಲಾಯಿತು. ಈ ವೇಳೆ ರವಿ ಬಸ್ರೂರು ಅವರು ಮಾತನಾಡಿದರು. ‘ಇದು ನನ್ನ ಅನೇಕ ವರ್ಷಗಳ ಕನಸು. ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆಂದು ಈ ಸಿನಿಮಾ ಮಾಡಲು ಹೊರಟಾಗ ನಾಗರಾಜ್ ನೈಕಂಬ್ಳಿ, ನವೀನ್ ಶೆಟ್ಟಿ ಅವರು ನನ್ನ ಬೆಂಬಲಕ್ಕೆ ನಿಂತರು. ಚಂದ್ರಹಾಸನಾಗಿ ಶಿಥಿಲ್ ಶೆಟ್ಟಿ ನಟಿಸಿದ್ದಾರೆ. ದುಷ್ಟಬುದ್ಧಿ ಪಾತ್ರದಲ್ಲಿ ಪ್ರಸನ್ನ ಶೆಟ್ಟಿಗಾರ್ ಅಭಿನಯಿಸಿದ್ದಾರೆ. ಎಲ್ಲ ಪಾತ್ರಗಳನ್ನು ನಿಜವಾದ ಯಕ್ಷಗಾನ ಕಲಾವಿದರೇ ಮಾಡಿರುವುದು ವಿಶೇಷ. ಅಂದಾಜು 500 ಯಕ್ಷಗಾನ ಕಲಾವಿದರು ನಟಿಸಿದ್ದಾರೆ. ಹಿನ್ನೆಲೆ ಸಂಗೀತಕ್ಕಾಗಿ 600ರಿಂದ 700 ಮ್ಯೂಸಿಕ್ ಟ್ರ್ಯಾಕ್ಸ್ ಬಳಸಿದ್ದೇವೆ‌’ ಎಂದು ರವಿ ಬಸ್ರೂರು ಹೇಳಿದರು.

‘ಜೈಮಿನಿ ಭಾರತದ ಒಂದು ಭಾಗವಾದ ವೀರ ಚಂದ್ರಹಾಸನ ಕಥೆಯನ್ನು ಈ ಸಿನಿಮಾದಲ್ಲಿ ಬಳಸಿಕೊಂಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಗಂಡು ಕಲೆಯನ್ನು ರವಿ ಬಸ್ರೂರು ಅವರು ತೆರೆಮೇಲೆ ತೋರಿಸುತ್ತಿದ್ದಾರೆ. ಈ ಸಿನಿಮಾವನ್ನು ಶಕ್ತಿಯಿಂದ ಮಾಡಿಲ್ಲ, ಭಕ್ತಿಯಿಂದ ಮಾಡಿದ್ದೇವೆ’ ಎಂದು ಚಿತ್ರತಂಡದವರಾದ ನಾಗರಾಜ್ ನೈಕಂಬ್ಳಿ ಹೇಳಿದರು.

ಇದನ್ನೂ ಓದಿ
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ನಟ ಶಿಥಿಲ್ ಶೆಟ್ಟಿ ಮಾತನಾಡಿ, ‘ರವಿ ಬಸ್ರೂರು ಅವರು ಪ್ರತಿಭೆ ಇರುವವರನ್ನು ಕರೆದು ಅವಕಾಶ ನೀಡಿದ್ದಾರೆ. ಎಲ್ಲಿಯೂ ಲೋಪವಾಗದ ರೀತಿಯಲ್ಲಿ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾಗಾಗಿ ಅವರ ಡೆಡಿಕೇಶನ್ ದೊಡ್ಡದು. ನಾವೆಲ್ಲ ಕುದುರೆ ಸವಾರಿ ಕಲಿತು ಅಭಿನಯಿಸಿದ್ದೇವೆ’ ಎಂದರು. ದುಷ್ಟಬುದ್ಧಿ ಪಾತ್ರಧಾರಿ ಪ್ರಸನ್ನ ಶೆಟ್ಟಿಗಾರ್ ಮಾತನಾಡಿ, ‘ಈಗಾಗಲೇ ದುಷ್ಟಬುದ್ಧಿ ಪಾತ್ರ ಮಾಡಿ ಖ್ಯಾತರಾದವರನ್ನು ಬಿಟ್ಟು, ರವಿ ಬಸ್ರೂರು ಅವರು ನನ್ನಿಂದ ಅದನ್ನು ಮಾಡಿಸಿದ್ದಾರೆ. ಅವರಲ್ಲಿ ಬೆಳಗ್ಗೆ ಇರುವ ಉತ್ಸಾಹವೇ ಸಂಜೆ 6 ಗಂಟೆಗೂ ಇರುತ್ತಿತ್ತು. ಯಕ್ಷಗಾನಕ್ಕೆ ಸಿಕ್ಕಂಥ ದೊಡ್ಡ ಕೊಡುಗೆ ಇದು’ ಎಂದು ಹೇಳಿದರು.

ಇದನ್ನೂ ಓದಿ: ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಪ್ರಮೋದ್ ಮೊಗಬೆಟ್ಟು ಅವರು ‘ವೀರ ಚಂದ್ರಹಾಸ’ ಸಿನಿಮಾಗಾಗಿ 60ರಿಂದ 70 ಹಾಡುಗಳನ್ನು ಬರೆದಿದ್ದಾರೆ. ‘ಒಂದೇ ಚಿತ್ರಕ್ಕಾಗಿ ಇಷ್ಟೊಂದು ಹಾಡುಗಳನ್ನು ಯಾರೂ ಬರೆದಿದ್ದಿಲ್ಲ. ಇದನ್ನು ಗಿನ್ನಸ್ ದಾಖಲೆಗೆ ಕಳಿಸುತ್ತಿದ್ದೇವೆ’ ಎಂದು ರವಿ ಬಸ್ರೂರ್ ಮಾಹಿತಿ ನೀಡಿದರು. ಈ ಸಿನಿಮಾದಲ್ಲಿ ನಟ ಶಿವರಾಜಕುಮಾರ್ ಕೂಡ ಒಂದು ಪಾತ್ರ ಮಾಡಿದ್ದಾರೆ. ಹಾಗಾಗಿ ಕೌತುಕ ಹೆಚ್ಚಾಗಿದೆ. ಚಂದನ್ ಶೆಟ್ಟಿ, ಗರುಡ ರಾಮ್, ಪುನೀತ್ ಅವರ ಪಾತ್ರಗಳು ಪ್ರಮುಖ ಘಟ್ಟದಲ್ಲಿ ಬರುತ್ತವೆ ಎಂದು ರವಿ ಬಸ್ರೂರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us