ಸಸ್ಪೆನ್ಸ್​ ಥ್ರಿಲ್ಲರ್​ ಕಥೆ ಇರುವ ‘ಅನರ್ಥ’ ಸಿನಿಮಾದ ಹಾಡು, ಟೀಸರ್ ರಿಲೀಸ್​

|

Updated on: May 21, 2024 | 2:49 PM

‘ಅನರ್ಥ’ ಸಿನಿಮಾದ ಟೀಸರ್​ ಮತ್ತು ಸಾಂಗ್​ ಬಿಡುಗಡೆ ಆಗಿದೆ. ಕಿರುತೆರೆ ಸೀರಿಯಲ್​ಗಳ ನಿರ್ದೇಶನದಲ್ಲಿ ಅನುಭವ ಹೊಂದಿರುವ ರಮೇಶ್​ ಕೃಷ್ಣ ಅವರು ಈ ಸಿನಿಮಾಗೆ ಡೈರೆಕ್ಷನ್​ ಮಾಡಿದ್ದಾರೆ. ಶ್ರೀಧರ್ ಎನ್.ಸಿ. ಅವರು ಬಂಡವಾಳ ಹೂಡಿದ್ದಾರೆ. ವಿಶಾಲ್ ಮತ್ತು ವಿಹಾನಿ ಅವರು ‘ಅನರ್ಥ’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

ಸಸ್ಪೆನ್ಸ್​ ಥ್ರಿಲ್ಲರ್​ ಕಥೆ ಇರುವ ‘ಅನರ್ಥ’ ಸಿನಿಮಾದ ಹಾಡು, ಟೀಸರ್ ರಿಲೀಸ್​
‘ಅನರ್ಥ’ ಸಿನಿಮಾ ಸುದ್ದಿಗೋಷ್ಠಿ
Follow us on

ಕ್ರೂರತನ ಮತ್ತು ಬಲಹೀನತೆಗೆ ಸಂಬಂಧಿಸಿದ ಫಿಲಾಸಫಿಯನ್ನು ಪ್ರಧಾನವಾಗಿ ಇಟ್ಟುಕೊಂಡು ‘ಅನರ್ಥ’ ಸಿನಿಮಾ (Anartha Movie) ಮಾಡಲಾಗಿದೆ. ಈ ಸಿನಿಮಾಗೆ ಸೆನ್ಸಾರ್​ ಪ್ರಕ್ರಿಯೆ ಮುಗಿದಿದೆ. ಈಗ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಹಿರಿಯ ಪತ್ರಕರ್ತರಿಂದ ಟೀಸರ್ ಬಿಡುಗಡೆ ಮಾಡಿಸಲಾಯಿತು. ಸಹ ನಿರ್ಮಾಪಕಿ ಜೆ. ಅಂಜಲಿ ಅವರ ಪುತ್ರಿಯರಾದ ಜಯಕೀರ್ತಿ ಮತ್ತು ಜಯಕನ್ನಿಕಾ ಅವರು ಹಾಡನ್ನು ರಿಲೀಸ್​ ಮಾಡಿದರು. ರಮೇಶ್​ ಕೃಷ್ಣ ಅವರು ‘ಅನರ್ಥ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಕಿರುತೆರೆಯಲ್ಲಿ ರಮೇಶ್​ ಕೃಷ್ಣ ಅವರು ಅನುಭವ ಹೊಂದಿದ್ದಾರೆ. ‘ಅರ್ಧ ಸತ್ಯ’ ಸೀರಿಯಲ್​ ನಿರ್ದೇಶನಕ್ಕೆ ಅವರು ಪ್ರಶಸ್ತಿ ಪಡೆದಿದ್ದರು. ಬಳಿಕ ‘ಗುಪ್ತಗಾಮಿನಿ’, ‘ಪ್ರೀತಿ ಇಲ್ಲದ ಮೇಲೆ’, ‘ಶಿವ’, ‘ಲಕುಮಿ’, ‘ಕದನ’, ‘ಚುಕ್ಕಿ’, ‘ಗೋಕುಲದಲ್ಲಿ ಸೀತೆ’ ಧಾರಾವಾಹಿಗಳ ತೆರೆಹಿಂದೆ ಕೆಲಸ ಮಾಡಿದ್ದಾರೆ. ‘ಮೆಲ್ಲುಸಿರೇ ಸವಿಗಾನ’ ಸಿನಿಮಾದ ನಿರ್ದೇಶನ ಮಾಡಿದ ಅವರು ಈಗ ‘ಅನರ್ಥ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

‘ಅನರ್ಥ’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕೂಡ ರಮೇಶ್ ಕೃಷ್ಣ ಬರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಸಿನಿಮಾ ಬಗ್ಗೆ ಮಾತನಾಡಿದರು. ‘ಅವಕಾಶ್ ಮತ್ತು ಆಕೃತಿ ಎನ್ನುವ 2 ಪಾತ್ರಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಇದರಲ್ಲಿ ಊಹಿಸಲಾಗದ ಟ್ವಿಸ್ಟ್​ಗಳು ಇವೆ. ಕ್ಲೈಮಾಕ್ಸ್‌ನಲ್ಲಿ ಹೀಗೂ ಆಗಬಹುದು ಎಂಬ ದೃಶ್ಯ ಇದೆ. ಎಲ್ಲ ಕಮರ್ಷಿಯಲ್ ಅಂಶಗಳು ಈ ಸಿನಿಮಾದಲ್ಲಿವೆ. ಅದರ ಜೊತೆಗೆ ಒಂದು ಅಂಶ ಭಿನ್ನವಾಗಿದೆ. ಅದೇನು ಎಂಬುದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು’ ಎಂದು ಅವರು ಹೇಳಿದರು.

ಇದನ್ನೂ ಓದಿ: ಅಕ್ಷತಾ ಪಾಂಡವಪುರ ನಟನೆಯ ಹೊಸ ಸಿನಿಮಾ ‘ಕೌಮುದಿ’; ಸರಳವಾಗಿ ನಡೆಯಿತು ಮುಹೂರ್ತ

ನಿರ್ಮಾಪಕ ಶ್ರೀಧರ್ ಎನ್.ಸಿ. ಹೊಸಮನೆ ಅವರು ಅವರು ಈ ಮೊದಲು ಹೀರೋ ಆಗುವ ಕನಸು ಕಂಡಿದ್ದರು. ಬಳಿಕ ಉದ್ಯಮದಲ್ಲಿ ಯಶಸ್ಸು ಕಂಡರು. ಈಗ ಅವರು ‘ತೇಜಸ್ ಸಿನಿ ಕ್ರಿಯೇಶನ್ಸ್’ ಸಂಸ್ಥೆಯ ಮೂಲಕ ನಿರ್ಮಾಪಕರಾಗಿದ್ದಾರೆ. ಮಂಡ್ಯ ರಮೇಶ್ ಅವರ ಬಳಿ ತರಬೇತಿ ಪಡೆದುಕೊಂಡು ಬಂದಿರುವ ವಿಶಾಲ್ ಮಣ್ಣೂರು ಅವರು ಈ ಸಿನಿಮಾಗೆ ಹೀರೋ ಆಗಿದ್ದಾರೆ. ಮೆಡಿಕಲ್ ವಿದ್ಯಾರ್ಥಿನಿ ವಿಹಾನಿ ಅವರು ‘ಅನರ್ಥ’ ಚಿತ್ರಕ್ಕೆ ನಾಯಕಿ. ಈ ಮೊದಲು ಕಿರುಚಿತ್ರಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ.

‘ಅನರ್ಥ’ ಸಿನಿಮಾ ಟೀಸರ್:

‘ಅನರ್ಥ’ ಸಿನಿಮಾಗೆ ವಿ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ, ಸಂಗೀತ ನೀಡಿದ್ದಾರೆ. ಕುಮಾರ್‌ ಗೌಡ ಅವರು ಛಾಯಾಗ್ರಹಣ ಮಾಡಿದ್ದಾರೆ. ನಿಷಿತ್‌ ಪೂಜಾರಿ ಹಾಗೂ ವಿನಯ್ ಅವರು ಸಂಕಲನ ಮಾಡಿದ್ದಾರೆ. ಕುಂಗ್​ ಫೂ ಚಂದ್ರು ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ವಿತರಕ ಎಂ. ರಮೇಶ್ ಅವರ ‘ಅಕ್ಷರ ಫಿಲ್ಮ್ಸ್​’ ಮೂಲಕ ಈ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ. ವಿಶಾಲ್, ವಿಹಾನಿ ಜೊತೆ ಸಿ. ವಿಜಯ್‌ ಕುಮಾರ್, ಗಣೇಶ್, ರಕ್ಷಿತ್, ಪ್ರಸನ್ನ ಬಾಗೀನ, ಅರ್ಪಿತಾ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.