ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿದ್ದು ಹೇಗೆ? ಕೊಲೆಯಾದಾಗ ಸ್ಥಳದಲ್ಲಿ ಇದ್ದವರ್ಯಾರು?

|

Updated on: Jun 11, 2024 | 12:52 PM

ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ತೂಗುದೀಪ ಹಾಗೂ ಸಹಚರರ ಬಂಧಿಸಲಾಗಿದೆ. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದು ಹೇಗೆ? ಹಲ್ಲೆ ನಡೆದಿದ್ದು ಎಲ್ಲಿ? ಹಲ್ಲೆ ನಡೆಯುವಾಗ ಯಾರ್ಯಾರಿದ್ದರು? ಶವವನ್ನು ಸಾಗಿಸಿದ್ದು ಯಾರು?

ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿದ್ದು ಹೇಗೆ? ಕೊಲೆಯಾದಾಗ ಸ್ಥಳದಲ್ಲಿ ಇದ್ದವರ್ಯಾರು?
Follow us on

ಚಿತ್ರದುರ್ಗದ ರೇಣುಕಾ ಸ್ವಾಮಿಯ (Renuka Swamy) ಕೊಲೆ ಆರೋಪದಲ್ಲಿ ನಟ ದರ್ಶನ್ (Darshan Thoogudeepa) ಹಾಗೂ ಅವರ ಸಹಚರರ ಬಂಧನವಾಗಿದೆ. ದರ್ಶನ್ ಆಪ್ತೆ ಪವಿತ್ರಾ ಗೌಡ ಅನ್ನೂ ಸಹ ರಾಜರಾಜೇಶ್ವರಿ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಪ್ರಕರಣದ ಬಗ್ಗೆ ಗಂಟೆಗೊಂದು ಹೊಸ ಮಾಹಿತಿ ಹೊರಬೀಳುತ್ತಲೇ ಇದೆ. ಸ್ವಭಾವತಃ ಮೌನಿಯೂ, ಒಂಟಿಯೂ ಆಗಿದ್ದ ರೇಣುಕಾ ಸ್ವಾಮಿಯನ್ನು ದರ್ಶನ್ ಬೆಂಗಳೂರಿಗೆ ಕರೆತಂದಿದ್ದು ಹೇಗೆ? ಆತನ ಮೇಲೆ ಹಲ್ಲೆ ಮಾಡಿದ್ದು ಎಲ್ಲಿ? ಹಲ್ಲೆ ಮಾಡುವ ಸಮಯದಲ್ಲಿ ಯಾರ್ಯಾರಿದ್ದರು? ಶವವನ್ನು ಯಾರು ಸಾಗಿಸಿದರು? ಇನ್ನಿತ್ಯಾದಿ ಮಾಹಿತಿ ಇದೀಗ ಹೊರಬಿದ್ದಿದೆ.

ರೇಣುಕಾ ಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದು. ದರ್ಶನ್ ಆಪ್ತೆ ಪವಿತ್ರಾ ಗೌಡ ಇಂದಾಗಿ ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಕಾರಣಕ್ಕೆ ಪವಿತ್ರಾ ಮೇಲಿನ ಸಿಟ್ಟಿನಿಂದ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದ. ಇದರಿಂದಾಗಿ ದರ್ಶನ್, ರೇಣುಕಾ ಸ್ವಾಮಿ ಮೇಲೆ ಸಿಟ್ಟುಕೊಂಡು ಬುದ್ಧಿಕಲಿಸಲು ನಿಶ್ಚಯಿಸಿದ್ದರು.

ಚಿತ್ರದುರ್ಗದಿಂದ, ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಲು ಒಂದು ವಾರಗಳ ಕಾಲ ಪ್ಲ್ಯಾನ್ ಮಾಡಲಾಗಿತ್ತು. ಇದಕ್ಕೆ ಚಿತ್ರದುರ್ಗದ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರನ ಸಹಾಯ ಪಡೆಯಲಾಗಿತ್ತು. ರಾಘವೇಂದ್ರ ಹಾಗೂ ಅವನ ಸಹಚರರು ರೇಣುಕಾಸ್ವಾಮಿಯನ್ನು ಒಂದು ವಾರಗಳ ಕಾಲ ವಾಚ್ ಮಾಡಿದ್ದರು. ಆತನ ನಂಬರ್ ಪಡೆದು ಹುಡುಗಿಯ ರೀತಿ ಮಾತನಾಡಿ ಆತನನ್ನು ಸ್ಥಳವೊಂದಕ್ಕೆ ಬರುವಂತೆ ಹೇಳಿದ್ದರು.

ಇದನ್ನೂ ಓದಿ:ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ, ಕೊಲೆಯಾದ ರೇಣುಕಾಸ್ವಾಮಿ ಯಾರು? ಹಿನ್ನೆಲೆ ಏನು?

ಶನಿವಾರ ಮನೆಯಿಂದ ಕೆಲಸಕ್ಕೆಂದು ಹೊರಗೆ ಹೋದ ರೇಣುಕಾಸ್ವಾಮಿ ತಾನು ಹೊರಗೆ ಊಟ ಮಾಡುವುದಾಗಿ, ಗೆಳೆಯರೊಟ್ಟಿಗೆ ಇರುವುದಾಗಿ ಹೇಳಿದ್ದ. ಆದರೆ ದರ್ಶನ್ ಸಹಚರರು ರೇಣುಕಾಸ್ವಾಮಿಯನ್ನು ತಾವಿದ್ದ ಜಾಗಕ್ಕೆ ಕರೆದುಕೊಂಡು ಬಂದು ಅಲ್ಲಿಂದ ಕಾರಿನಲ್ಲಿ ಹಾಕಿಕೊಂಡು ಬೆಂಗಳೂರಿಗೆ ಕರೆತಂದಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ರಾಜರಾಜೇಶ್ವರಿ ನಗರದ ಷೆಡ್​ ಒಂದಕ್ಕೆ ಕರೆತರಲಾಗಿದೆ. ಆ ಷೆಡ್, ದರ್ಶನ್​ರ ಆಪ್ತ ವಿನಯ್​ಗೆ ಸೇರಿದ ಶೆಡ್. ಅಲ್ಲಿ ಬ್ಯಾಂಕ್ ಲೋನ್ ಕಟ್ಟದ ಸೀಜ್ ಆದ ವಾಹನಗಳನ್ನು ಇಡಲಾಗುತ್ತದೆ. ಈ ಶೆಡ್​ನ ಅಸಲಿ ಮಾಲೀಕ ಉದ್ಯಮಿ ಪಟ್ಟಣಗೆರೆ ಜಯಣ್ಣ. ವಿನಯ್, ಪಟ್ಟಣಗೆರೆ ಜಯಣ್ಣನ ಸೋದರ ಮಾವ. ಶೆಡ್​ನಲ್ಲಿ ದರ್ಶನ್ ಸಹಚರರು ರೇಣುಕಾ ಸ್ವಾಮಿ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ದರ್ಶನ್ ಸಹ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದಿನ್ನೂ ಖಾತ್ರಿ ಆಗಿಲ್ಲ.

ತೀವ್ರ ಹಲ್ಲೆಯಿಂದಾಗಿ ರೇಣುಕಾ ಸ್ವಾಮಿ ಸಾವನ್ನಪ್ಪಿದ್ದಾನೆ. ಬಳಿಕ ಆತನ ಶವವನ್ನು ದರ್ಶನ್ ಆಪ್ತರಾದ ವಿನಯ್, ಆನಂದ್ , ಕಿರಣ್ ಅವರುಗಳು ಕಾರಿನಲ್ಲಿ ಹಾಕಿಕೊಂಡು ಕಾಮಾಕ್ಷಿಪಾಳ್ಯದ ಸುಮನಹಳ್ಳಿ ದೊಡ್ಡ ಮೋರಿಗೆ ಎಸೆದಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರ ತನಿಖೆ ಜಾರಿಯಲ್ಲಿದ್ದು, ಇನ್ನಷ್ಟು ವಿಷಯಗಳು ಇನ್ನಷ್ಟೆ ಹೊರಬರಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ