
ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಹುಟ್ಟುಹಬ್ಬಕ್ಕೆ ‘ಅನಿಮಲ್’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರು ವಿಶೇಷವಾಗಿ ಶುಭಾಶಯ ತಿಳಿಸಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸಾಮಾನ್ಯ ಪೋಸ್ಟ್ಗಳ ಮೂಲಕ ಶುಭಾಶಯ ಕೋರುವ ಬದಲಾಗಿ, ಲೆಜೆಂಡರಿ ನಟ ಕೃಷ್ಣ ಅವರ ಪ್ರಸಿದ್ಧ ಡೈಲಾಗ್ ಒಂದನ್ನು ಮಹೇಶ್ ಬಾಬು ಹೇಳುವಂತಹ ಎಐ ನಿರ್ಮಿತ ವಿಡಿಯೋವನ್ನು ವಂಗಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ‘ಡೆವಿಲ್’ (Devil) ಸಿನಿಮಾ ಬಗ್ಗೆ ಅಭಿಮಾನಿಗಳ ಮನದಲ್ಲಿ ಪ್ರಶ್ನೆ ಮೂಡಿದೆ.
ಸಂದೀಪ್ ರೆಡ್ಡಿ ವಂಗಾ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಮಹೇಶ್ ಬಾಬು ಅವರನ್ನು ಈ ರೀತಿ ರಗಡ್ ಆಗಿ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದು ಸಂದೀಪ್ ವಂಗಾ ಅವರ ಸಿನಿಮಾ ಶೈಲಿಗೆ ಹೇಳಿ ಮಾಡಿಸಿದಂತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ಲಿಪ್ ಅಭಿಮಾನಿಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಹುಟ್ಟುಹಬ್ಬದ ದಿನದಂದು ಅತ್ಯಂತ ಹೆಚ್ಚು ಚರ್ಚೆಯಾದ ಪೋಸ್ಟ್ಗಳಲ್ಲಿ ಒಂದಾಗಿ ಮಾರ್ಪಟ್ಟಿತು.
ಅಚ್ಚರಿಯೆಂದರೆ, ಮಹೇಶ್ ಅವರ ಮುಂಬರುವ ಬಹುನಿರೀಕ್ಷಿತ ‘ವಾರಣಾಸಿ’ ಸಿನಿಮಾದ ಅಪ್ಡೇಟ್ ಅಭಿಮಾನಿಗಳಿಗೆ ಅಷ್ಟಾಗಿ ತೃಪ್ತಿ ನೀಡಲಿಲ್ಲ. ಚಿತ್ರತಂಡದಿಂದ ಯಾವುದಾದರೂ ದೊಡ್ಡ ಘೋಷಣೆ ಅಥವಾ ಗ್ಲಿಂಪ್ಸ್ ವಿಡಿಯೋ ಬರುತ್ತದೆ ಎಂದು ಅನೇಕರು ನಿರೀಕ್ಷಿಸಿದ್ದರು. ಹೀಗಾಗಿ ಅಭಿಮಾನಿಗಳ ಗಮನ ಸಹಜವಾಗಿಯೇ ಸಂದೀಪ್ ವಂಗಾ ಅವರ ಪೋಸ್ಟ್ನತ್ತ ತಿರುಗಿತು ಹಾಗೂ ಇದು ಹೆಚ್ಚು ಚರ್ಚೆಗೆ ಗ್ರಾಸವಾಯಿತು.
ಈ ಬೆಳವಣಿಗೆಯು ಮಹೇಶ್ ಬಾಬು ಮತ್ತು ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್ನಲ್ಲಿ ಸಿನಿಮಾ ಬರಲಿದೆಯೇ ಎಂಬ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಕೆಲವು ವರ್ಷಗಳ ಹಿಂದೆ, ಮಹೇಶ್ ಅವರೊಂದಿಗೆ ‘ಡೆವಿಲ್’ ಎಂಬ ಪ್ರಾಜೆಕ್ಟ್ ಮಾಡಲು ಯೋಜಿಸಿದ್ದಾಗಿ ಸಂದೀಪ್ ರೆಡ್ಡಿ ವಂಗಾ ಬಹಿರಂಗಪಡಿಸಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ಕಾರ್ಯರೂಪಕ್ಕೆ ಬರಲಿಲ್ಲ. ಆದರೂ ಅಭಿಮಾನಿಗಳು ಆ ಕಾಂಬಿನೇಷನ್ ಅನ್ನು ಮರೆತಿರಲಿಲ್ಲ.
ಇದನ್ನೂ ಓದಿ: ‘ವಾರಣಾಸಿ’ ದೃಶ್ಯಕ್ಕಾಗಿ ಮಹೇಶ್ ಬಾಬುಗೆ 100 ಟೇಕ್; ಸಿಟ್ಟು ಬಂದು ಪ್ಯಾಕಪ್ ಎಂದ ರಾಜಮೌಳಿ
ಇದೀಗ ನಿರ್ದೇಶಕರ ಈ ಬರ್ತ್ಡೇ ಪೋಸ್ಟ್ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಊಹಾಪೋಹಗಳು ಮತ್ತು ಥಿಯರಿಗಳು ಹೆಚ್ಚಾಗಿವೆ. ‘ವಾರಣಾಸಿ’ ಪ್ರಾಜೆಕ್ಟ್ ಪೂರ್ಣಗೊಂಡ ನಂತರ ಮಹೇಶ್ ಬಾಬು ಅವರು ಸಂದೀಪ್ ರೆಡ್ಡಿ ವಂಗಾ ಜೊತೆ ಕೈಜೋಡಿಸುವ ಸಾಧ್ಯತೆಯಿದೆ. ಈ ಮೂಲಕ ಒಂದು ಸೆನ್ಸೇಷನಲ್ ಸಿನಿಮಾ ಬರಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.