ಲತಾ ಮಂಗೇಶ್ಕರ್​ ನಿಧನಕ್ಕೆ ಮರುಗಿದ ಸ್ಯಾಂಡಲ್​ವುಡ್​​; ಶಿವರಾಜ್​ಕುಮಾರ್​, ರಮೇಶ್​ ಅರವಿಂದ್ ಕಂಬನಿ

ಸ್ಯಾಂಡಲ್​ವುಡ್​ನ ದಿಗ್ಗಜರು ಲತಾ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ. ಕೆಲವರು ಲತಾ ಕಂಠದಲ್ಲಿ ಮೂಡಿಬಂದ ಹಾಡಿನಲ್ಲಿ ತಮ್ಮಿಷ್ಟದ ಸಾಂಗ್​ ಯಾವುದು ಎನ್ನುವ ಬಗ್ಗೆ ನೆನಪು ಮಾಡಿಕೊಳ್ಳುತ್ತಿದ್ದಾರೆ.

ಲತಾ ಮಂಗೇಶ್ಕರ್​ ನಿಧನಕ್ಕೆ ಮರುಗಿದ ಸ್ಯಾಂಡಲ್​ವುಡ್​​; ಶಿವರಾಜ್​ಕುಮಾರ್​, ರಮೇಶ್​ ಅರವಿಂದ್ ಕಂಬನಿ
ಶಿವರಾಜ್​ಕುಮಾರ್​-ರಮೇಶ್​ ಅರವಿಂದ್​
Updated By: ರಾಜೇಶ್ ದುಗ್ಗುಮನೆ

Updated on: Feb 06, 2022 | 1:56 PM

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರ ನಿಧನ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರು ಇಂದು (ಫೆಬ್ರವರಿ 6) ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿದೆ. ಚಿತ್ರರಂಗ ಸೇರಿ ಬಹುತೇಕ ಎಲ್ಲಾ ಕ್ಷೇತ್ರದವರು ಲತಾ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. ಸ್ಯಾಂಡಲ್​ವುಡ್​ನ ದಿಗ್ಗಜರು ಲತಾ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ. ಕೆಲವರು ಲತಾ ಕಂಠದಲ್ಲಿ ಮೂಡಿಬಂದ ಹಾಡಿನಲ್ಲಿ ತಮ್ಮಿಷ್ಟದ ಸಾಂಗ್​ ಯಾವುದು ಎನ್ನುವ ಬಗ್ಗೆ ನೆನಪು ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ, ಸ್ಯಾಂಡಲ್​ವುಡ್ (Sandalwood)​ ನಟರು, ನಿರ್ದೇಶಕರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹೇಗೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಶಿವಣ್ಣ ಕಂಬನಿ

ನಟ ಶಿವರಾಜ್​ಕುಮಾರ್​ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಲತಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಲತಾ ಅವರ ಫೋಟೋ ಪೋಸ್ಟ್​ ಮಾಡಿ, ‘ನನ್ನ ಅತ್ಯಂತ ನೆಚ್ಚಿನ ಧ್ವನಿ. ಸಂಗೀತದ ಮೂಲಕ ಹಲವು ಭಾವನೆಗಳನ್ನು ಅನುಭವಿಸುವಂತೆ ಮಾಡಿದ ನಿಮಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ರಮೇಶ್​ ಅರವಿಂದ್​

ಖ್ಯಾತ ನಟ ರಮೇಶ್​ ಅರವಿಂದ್​ ಅವರಿಗೂ ಲತಾ ನಿಧನದ ಸುದ್ದಿ ದುಃಖ ತಂದಿದೆ. ಲತಾ ಅವರ ಫೋಟೋ ಪೋಸ್ಟ್​ ಮಾಡಿರುವ ರಮೇಶ್​ ಅರವಿಂದ್​ ಅವರು, ‘ವಿದಾಯ, ಸಂಗೀತದ ಸ್ವರಗಳು ಸ ರಿ ಗ ಮ ಪ ಲ ತಾ ಎಂಬಂತೆ ನಮಗೆ ಭಾಸವಾಗುವಂತೆ ಮಾಡಿದಿರಿ’ ಎಂದು ಬರೆದುಕೊಂಡಿದ್ದಾರೆ.

ಟಿ.ಎನ್​. ಸೀತಾರಾಮ್​

ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್​. ಸೀತಾರಾಮ್​ ಅವರು ಕೂಡ ಲತಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ನೆಚ್ಚಿನ ಹಾಡುಗಳನ್ನು ನೆನಪು ಮಾಡಿಕೊಂಡಿದ್ದಾರೆ. ‘ನಾನು ಕಾಲೇಜಿಗೆ ಹೋಗುತ್ತಿದ್ದ ಸಮಯ. ‘ಬೀಸ್​ ಸಾಲ್​ ಬಾದ್​’ ಚಿತ್ರ ತೆರೆಗೆ ಬಂದಿತ್ತು. ಕಾಲೇಜಿಗೆ ಚಕ್ಕರ್​ ಹೊಡೆದು ಸಿನಿಮಾ ನೋಡೋಕೆ ಹೋಗಿದ್ವಿ. ಆ ಸಿನಿಮಾದ ಹಾಡಿಗಾಗಿ, ಮೂರು ದಿನ ಸತತ ಅದೇ ಚಿತ್ರ ನೋಡಿದ್ದೆ. ಈ ಚಿತ್ರದ ಹಾಡುಗಳಿಗೆ ಲತಾ ಧ್ವನಿ ನೀಡಿದ್ದರು ಎಂದಿದ್ದಾರೆ’ ಸೀತಾರಾಮ್​.

ಇದನ್ನೂ ಓದಿ: ‘ನಮ್ಮ ಎದೆಯೊಳಗೆ ಲತಾಜೀ ಸದಾ ಜೀವಂತ’: ಲತಾ ಮಂಗೇಶ್ಕರ್​ ನಿಧನಕ್ಕೆ ಬಾಲಿವುಡ್​ ಸಂತಾಪ

Lata Mangeshkar: ಲತಾ ಮಂಗೇಶ್ಕರ್ ಹಾಡುಗಳನ್ನು ಕೇಳಿ, ಅರ್ಥ ಮಾಡಿಕೊಳ್ಳುವುದೇ ಅವರಿಗೆ ನೀಡುವ ನಿಜವಾದ ಗೌರವ; ಸಚ್ಚಿದಾನಂದ ಹೆಗಡೆ