94ನೇ ವಯಸ್ಸಿಗೆ ನಿರ್ದೇಶನ; ‘ಸಿಂಗ್ ಗೀತಂ’ ಸಿನಿಮಾ ಈ ವಾರ ರಿಲೀಸ್
94 ವರ್ಷದ ಪ್ರತಿಭಾನ್ವಿತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ತಮ್ಮ 'ಸಿಂಗ್ ಗೀತಂ' ಮೂಲಕ ಮತ್ತೆ ಬೆಳ್ಳಿಪರದೆಗೆ ಮರಳಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ನಿರೂಪಿಸಿರುವ ಅವರು, ಯುವ ಜನಾಂಗದ ನಾಡಿಮಿಡಿತಕ್ಕೆ ತಕ್ಕಂತೆ ಗಣಿಗಾರಿಕೆ ಹಿನ್ನೆಲೆಯುಳ್ಳ ಈ ಹೊಸ ಚಿತ್ರದಲ್ಲಿ ಪ್ರಗತಿ-ಸಂರಕ್ಷಣೆ ಸಂಘರ್ಷವನ್ನು ಪ್ರಸ್ತುತಪಡಿಸಿದ್ದಾರೆ. ಅವರ ಸೃಜನಶೀಲತೆ ಮತ್ತು ಹೊಸತನಕ್ಕೆ ಇದು ಮತ್ತೊಂದು ಉದಾಹರಣೆ.

‘ಬದುಕಿರುವಾಗಲೇ ಏನಾದರೂ ಸಾಧಿಸಬೇಕು’ ಎಂಬ ಮಾತು ಈ ಒಬ್ಬ ದಂತಕಥೆ ನಿರ್ದೇಶಕರಿಗೆ ಅಕ್ಷರಶಃ ಸರಿಹೊಂದುತ್ತದೆ. ಒಂಬತ್ತೂವರೆ ದಶಕಗಳ ವಯಸ್ಸಿನಲ್ಲೂ ಮಗುವಿನ ಉತ್ಸಾಹದಿಂದ ಬದುಕುವ, ಸಿನಿಮಾವನ್ನೇ ಉಸಿರಾಡುವ ಆ ಅದ್ಭುತ ನಿರ್ದೇಶಕ ಬೇರೆ ಯಾರೂ ಅಲ್ಲ, ಸಿಂಗೀತಂ ಶ್ರೀನಿವಾಸ ರಾವ್.
ವಯಸ್ಸು ಕೇವಲ ದೇಹಕ್ಕಷ್ಟೇ ಹೊರತು, ಸೃಜನಶೀಲತೆ ಮತ್ತು ಕನಸುಗಳಿಗಲ್ಲ ಎಂಬುದನ್ನು ಅವರು ತಮ್ಮ ಪ್ರತಿ ಹೆಜ್ಜೆಯಲ್ಲೂ ಸಾಬೀತುಪಡಿಸುತ್ತಿದ್ದಾರೆ. ಇಂದಿನ ಯುವಕರು ಮೂವತ್ತರಲ್ಲೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಬೇಗನೆ ದಣಿಯುತ್ತಿರುವ ಈ ದಿನಗಳಲ್ಲಿ, 94ನೇ ವಯಸ್ಸಿನಲ್ಲೂ ಅವರ ಶಕ್ತಿ ಸ್ವಲ್ಪವೂ ಕಡಿಮೆಯಾಗಿಲ್ಲ. ಅಷ್ಟೇ ಅಲ್ಲ, ಇಂದಿನ ಜನರೇಷನ್-ಜಿ (Gen-Z) ಪ್ರೇಕ್ಷಕರ ನಾಡಿಮಿಡಿತಕ್ಕೆ ತಕ್ಕಂತೆ ಹೊಸ ಪರಿಕಲ್ಪನೆಯ ಸಿನಿಮಾ ಹಿಡಿದು ಅವರು ನಮ್ಮ ಮುಂದೆ ಬರುತ್ತಿದ್ದಾರೆ.
‘ನೀತಿ ನಿಜಾಯಿತಿ’ ಅವರ ಮೊದಲ ಸಿನಿಮಾ. ‘ಹಾಲು ಜೇನು’ ಸಿನಿಮಾ ಮೂಲಕ ಅವರು ಕನ್ನಡಕ್ಕೆ ಕಾಲಿಟ್ಟರು. ಆ ಬಳಿಕ ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’ ಸಿನಿಮಾ ಮಾಡಿ ಭೇಷ್ ಎನಿಸಿಕೊಂಡರು. ಅವರ ಶೈಲಿ ಎಂದಿಗೂ ಟ್ರೆಂಡ್ಗಳನ್ನು ಅನುಸರಿಸಿದ್ದಲ್ಲ, ಹೊಸ ಟ್ರೆಂಡ್ಗಳನ್ನು ಸೃಷ್ಟಿಸಿದ್ದು. ಈಗ ತಮ್ಮ ಸುದೀರ್ಘ ವೃತ್ತಿಜೀವನದಲ್ಲೇ ಅತ್ಯಂತ ಧೈರ್ಯಶಾಲಿ ಪ್ರಯೋಗಕ್ಕೆ ಕೈಹಾಕಿದ್ದಾರೆ.
ಮೂರೂವರೆ ದಶಕಗಳ ಹಿಂದೆ, ಅವರು ‘ಪುಷ್ಪಕ ವಿಮಾನ’ದಂತಹ ಅದ್ಭುತ ಮೂಕಿ ಚಿತ್ರವನ್ನು ನಿರ್ಮಿಸಿ, ಯಾವುದೇ ಮಾತಿಲ್ಲದೆ ಕೇವಲ ಮೌನದಿಂದಲೇ ಎಲ್ಲಾ ಭಾವನೆಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಇದನ್ನೂ ಓದಿ: 94ನೇ ವಯಸ್ಸಿಗೆ ನಿರ್ದೇಶನ ಮಾಡಿದ ‘ಪುಷ್ಪಕ ವಿಮಾನ’ ನಿರ್ದೇಶಕ
ಈಗ ಅವರು ‘ಸಿಂಗ್ ಗೀತಂ’ ಸಿನಿಮಾ ಮಾಡಿದ್ದಾರೆ. ಈ ಚಿತ್ರ ಜೂನ್ 11ರಂದು ಸಿನಿಮಾ ರಿಲೀಸ್ ಆಗಲಿದೆ. ಈ ನಿರ್ದೇಶಕರು ಮತ್ತೊಮ್ಮೆ ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಚಿತ್ರದ ಕಥೆ ಗಣಿಗಾರಿಕೆ ನಡೆಯುವ ಪಟ್ಟಣದ ಹಿನ್ನೆಲೆಯನ್ನು ಹೊಂದಿದ್ದು, ಅಲ್ಲಿ ಜನರು ಚಿನ್ನದ ಹುಡುಕಾಟದಲ್ಲಿ ತೊಡಗುತ್ತಾರೆ. ಪ್ರತಾಪ್ ಎಂಬ ಯುವಕ ವಿಚಿತ್ರ ಜಗತ್ತೊಂದಕ್ಕೆ ಪ್ರವೇಶಿಸಿದಾಗ ಎದುರಿಸುವ ಸವಾಲುಗಳು ಹಾಗೂ ಪ್ರಗತಿ ಮತ್ತು ಸಂರಕ್ಷಣೆಯ ನಡುವಿನ ಸಂಘರ್ಷವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




