AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆಯಿಂದ ವಿಧಾನಮಂಡಲ ಅಧಿವೇಶನ: ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳ ಬಳಿ ಇರುವ ಅಸ್ತ್ರಗಳೇನು?

ಆಗಸ್ಟ್​​ 13ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಡಿ.ಕೆ. ಶಿವಕುಮಾರ್​​ ಸಿಎಂ ಆದ ಬಳಿಕ ಮೊದಲ ಅಧಿವೇಶನವಾಗಿದ್ದು, ಭ್ರಷ್ಟಾಚಾರ, ಕಾವೇರಿ ನೀರು, ರೈತರ ಸಮಸ್ಯೆಗಳು, ಕಾನೂನು ಸುವ್ಯವಸ್ಥೆ ಹಾಗೂ ಸಚಿವ ಖಾತೆ ಹಂಚಿಕೆ ಗೊಂದಲದ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ. ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಸಾಧನೆಗಳ ಮೂಲಕ ತಿರುಗೇಟು ನೀಡಲು ಸಿದ್ಧವಾಗಿದೆ.

ನಾಳೆಯಿಂದ ವಿಧಾನಮಂಡಲ ಅಧಿವೇಶನ: ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳ ಬಳಿ ಇರುವ ಅಸ್ತ್ರಗಳೇನು?
ವಿಧಾನಸೌಧImage Credit source: Getty images
Anil Kalkere
| Edited By: |

Updated on: Aug 12, 2026 | 9:34 PM

Share

ಬೆಂಗಳೂರು, ಆಗಸ್ಟ್​​ 12: ನಾಳೆಯಿಂದ (ಆ.13) ವಿಧಾನಮಂಡಲ ಅಧಿವೇಶನ (Assembly Session) ಆರಂಭವಾಗಲಿದೆ. ಸಿಎಂ  ಆದ ಬಳಿಕ ಡಿ.ಕೆ ಶಿವಕುಮಾರ್​ಗೆ (DK Shivakumar) ಇದು ಮೊದಲ ಅಧಿವೇಶನ. ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ಅಧಿವೇಶನ ವೇದಿಕೆಯಾಗುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್​ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಮುಗಿಬೀಳಲು ವಿಪಕ್ಷಗಳು ಕಾಯುತ್ತಿವೆ.

ವಿಪಕ್ಷಗಳ ದಾಳಿಗೆ ಪ್ರಮುಖ ಅಸ್ತ್ರಗಳು ಸಿದ್ಧ

ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರವೂ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇದರ ಜೊತೆಗೆ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ, ರೈತರ ಸಮಸ್ಯೆ, ಕಾವೇರಿ ನೀರು, ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಕಾಂಗ್ರೆಸ್ ಸರ್ಕಾರ ತನ್ನ ಸಾಧನೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಲು ಸಿದ್ಧವಾಗಿದ್ದರೆ, ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದ ವಿರುದ್ಧ ಹಲವು ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿವೆ.

ಅಧಿವೇಶನದಲ್ಲಿ ಬಿಜೆಪಿ ಪ್ರಸ್ತಾಪಿಸಬಹುದಾದ ವಿಚಾರಗಳೇನು?

  • KPSC ಪರೀಕ್ಷಾ ಅಕ್ರಮ
  • ಪೊಲೀಸ್ ಪರೀಕ್ಷೆಯ ಗೊಂದಲ
  • ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರ
  • ಭ್ರಷ್ಟಾಚಾರದ ಆರೋಪ ಪ್ರಸ್ತಾಪ
  • ಗೊಬ್ಬರ, ಬರಗಾರ, ಬೆಳೆನಾಶ ಸೇರಿ ರೈತರ ಹಲವು ಸಮಸ್ಯೆ ಬಗ್ಗೆ ಚರ್ಚೆ
  • ಬಿ.ನಾಗೇಂದ್ರಗೆ ಸಚಿವ ಸ್ಥಾನ ನೀಡಿರುವ ಕುರಿತು ಪ್ರಶ್ನೆ
  • ಕಾನೂನು ಸುವ್ಯವಸ್ಥೆ
  • ಅಭಿವೃದ್ಧಿ ಕಾಮಗಾರಿ ಕುಂಟಿತ
  • ಅನುದಾನ ಬಿಡುಗಡೆ ವಿಚಾರದಲ್ಲಿ ಸ್ವಜನಪಕ್ಷಪಾತ

ಸಚಿವರಿಗೆ ಖಾತೆ ಹಂಚಿಕೆ ವಿಚಾರದಲ್ಲಿನ ಗೊಂದಲ, ಇಲಾಖೆಗಳ ಹಂಚಿಕೆ ಹಾಗೂ ಸರ್ಕಾರದ ಒಳಗಿನ ರಾಜಕೀಯ ಬೆಳವಣಿಗೆಗಳು ಕೂಡ ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಬಹುದು. ಇನ್ನೂ ಖಾತೆ ಹಂಚಿಕೆ ವಿಚಾರ ಸಂಪೂರ್ಣವಾಗಿ ಅಂತಿಮವಾಗದಿದ್ದರೆ, ಅದನ್ನೇ ಅಸ್ತ್ರವಾಗಿಸಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ. ಭ್ರಷ್ಟಾಚಾರದ ಆರೋಪಗಳೂ ಅಧಿವೇಶನದಲ್ಲಿ ಪ್ರಮುಖ ವಿಚಾರವಾಗುವ ಸಾಧ್ಯತೆ ಇದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿರುವ ವಿಚಾರವನ್ನು ಬಿಜೆಪಿ ಪ್ರಸ್ತಾಪಿಸಲಿದೆ. ಸರ್ಕಾರದ ಆಡಳಿತ ವೈಫಲ್ಯ, ವಿವಿಧ ಇಲಾಖೆಗಳಲ್ಲಿನ ಸಮಸ್ಯೆಗಳು, ಅಭಿವೃದ್ಧಿ ಕಾಮಗಾರಿಗಳ ನಿಧಾನಗತಿ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಉತ್ತರಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ಪಟ್ಟಿ

ಇದರ ಜೊತೆಗೆ ರೈತರ ಸಮಸ್ಯೆಗಳು ಕೂಡ ಅಧಿವೇಶನದಲ್ಲಿ ಪ್ರತಿಧ್ವನಿಸಲಿದೆ. ಕಾವೇರಿ ನೀರು ಹಂಚಿಕೆ ವಿಚಾರ, ತಮಿಳುನಾಡಿಗೆ ನೀರು ಹರಿಸುವಂತೆ ಬಂದಿರುವ ಶಿಫಾರಸುಗಳು, ರಾಜ್ಯದ ಜಲಸಂಪನ್ಮೂಲ ಸ್ಥಿತಿ ಸೇರಿದಂತೆ ನೀರಿನ ವಿಚಾರದಲ್ಲಿ ಸರ್ಕಾರದ ನಿಲುವೇನು ಎಂಬ ಪ್ರಶ್ನೆಯೂ ಎದುರಾಗಲಿದೆ. ರೈತರಿಗೆ ನೀರು, ಬೆಳೆ ನಷ್ಟ, ನೀರಾವರಿ ಯೋಜನೆಗಳು ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಬಹುದು. ಇನ್ನು ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶಗಳ ಅಭಿವೃದ್ಧಿ, ರಸ್ತೆ, ಮೂಲಸೌಕರ್ಯ, ಕಾನೂನು ಸುವ್ಯವಸ್ಥೆ, ಸರ್ಕಾರಿ ನೇಮಕಾತಿ ಹಾಗೂ ಜನಸಾಮಾನ್ಯರಿಗೆ ಸಂಬಂಧಿಸಿದ ಹಲವು ವಿಚಾರಗಳು ಕೂಡ ಚರ್ಚೆಗೆ ಬರಲಿವೆ.

ವಿಪಕ್ಷಗಳು ಆರೋಪಕ್ಕೆ ಸರ್ಕಾರದ ತಿರುಗೇಟು ಏನು?

  • ವಿಪಕ್ಷಗಳಿಗೆ ಅಭಿವೃದ್ಧಿ ಕಾಣುತ್ತಿಲ್ಲ, ರಾಜಕೀಯ ಮಾತ್ರ ಕಾಣುತ್ತಿದೆ
  • ಸರ್ಕಾರದ ಸಾಧನೆಗಳ ಬಗ್ಗೆ ದಾಖಲೆ ಸಮೇತ ಉತ್ತರ
  • ಭ್ರಷ್ಟಾಚಾರದ ಆರೋಪ ಮಾಡೋ ಮೊದಲು ಹಿಂದಿನ ಸರ್ಕಾರದ ದಾಖಲೆ ನೋಡಲಿ
  • ನಾಗೇಂದ್ರ ಪ್ರಕರಣದಲ್ಲಿ ಕಾನೂನು ತನ್ನ ಕೆಲಸ ಮಾಡುತ್ತಿದೆ
  • ಸಿಬಿಐ ತನಿಖೆ ನಡೆಯುತ್ತಿದೆ, ಸರ್ಕಾರ ಹಸ್ತಕ್ಷೇಪ ಮಾಡಿಲ್ಲ
  • ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧ
  • ನೀರಾವರಿ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ
  • ಬೆಂಗಳೂರಿನ ಅಭಿವೃದ್ಧಿಗೆ ದಾಖಲೆ ಪ್ರಮಾಣದ ಅನುದಾನ ನೀಡಲಾಗಿದೆ
  • ಖಾಲಿ ಹುದ್ದೆಗಳ ಭರ್ತಿಗೆ ಹಂತ ಹಂತವಾಗಿ ಕ್ರಮ
  • ಜನಪರ ಗ್ಯಾರಂಟಿ ಯೋಜನೆಗಳೇ ಸರ್ಕಾರದ ಪ್ರಮುಖ ಸಾಧನೆ
  • ವಿಪಕ್ಷಗಳಿಗೆ ಟೀಕೆ ಮಾಡುವುದಷ್ಟೇ ಗೊತ್ತು, ಪರಿಹಾರ ಸೂಚಿಸುವುದಿಲ್ಲ

ಇದನ್ನೂ ಓದಿ: ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ, ದೇಶಪಾಂಡೆಗೆ ಸಂಪುಟ ದರ್ಜೆ ಸ್ಥಾನಮಾನ

ಒಟ್ಟಿನಲ್ಲಿ ನಾಳೆಯಿಂದ ವಿಧಾನಮಂಡಲದಲ್ಲಿ ಕಾವೇರಲಿರುವ ರಾಜಕೀಯ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಾವ ವಿಚಾರಕ್ಕೆ ಸರ್ಕಾರ ಉತ್ತರ ನೀಡಲಿದೆ, ಯಾವ ಅಸ್ತ್ರದ ಮೂಲಕ ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us