
ಭಾರತೀಯ ಚಿತ್ರರಂಗದ ಅದ್ಭುತ ಗಾಯಕ ಸೋನು ನಿಗಮ್ (Sonu Nigam) ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸಂಗೀತಗಾರರ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಕ್ಕೆ ದೊಡ್ಡ ಕಂಪನಿಗಳು ತಮಗೆ ಹೇಗೆ ಬಹಿಷ್ಕಾರ ಹಾಕಿದ್ದವು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ಕೃತಿಸ್ವಾಮ್ಯ ಮತ್ತು ರಾಯಲ್ಟಿ ಹೋರಾಟದಿಂದಾಗಿ ತಾವು ಅನುಭವಿಸಿದ ವೃತ್ತಿಪರ ನಷ್ಟ ಮತ್ತು ಚಿತ್ರರಂಗದಲ್ಲಾದ ಬದಲಾವಣೆಗಳ ಕುರಿತು ಅವರು ಮುಕ್ತವಾಗಿ ಮಾತನಾಡಿದ್ದಾರೆ.
ಸೋನು ನಿಗಮ್ ಗಾಯಕರ ರಾಯಲ್ಟಿ ಹಕ್ಕುಗಳ ಪರವಾಗಿ ಸದಾ ಧ್ವನಿ ಎತ್ತುತ್ತಾ ಬಂದಿದ್ದಾರೆ. ಕಲಾವಿದರಿಗೆ ಸೂಕ್ತ ಸಂಭಾವನೆ ಮತ್ತು ಹಕ್ಕುಗಳ ರಕ್ಷಣೆ ಸಿಗಬೇಕು ಎಂಬುದು ಅವರ ವಾದವಾಗಿತ್ತು. ಈ ಹೋರಾಟದ ದಿನಗಳಲ್ಲಿ ಅವರು ಹಾಡಿದ ಹಾಡುಗಳನ್ನು ಬೇರೆ ಗಾಯಕರ ಧ್ವನಿಗೆ ಬದಲಾಯಿಸಲಾಗಿತ್ತು. ಒಪ್ಪಂದಗಳಿಗೆ ಸಹಿ ಹಾಕದ ಕಾರಣಕ್ಕೆ ಅವರಿಗೆ ಈ ಅನ್ಯಾಯ ನಡೆದಿತ್ತು.
ಇತ್ತೀಚಿನ ಸಂದರ್ಶನವೊಂದರಲ್ಲಿ ಸೋನು ನಿಗಮ್ ತಮ್ಮ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಾವು ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಈ ಘಟನೆ ನಡೆದಿತ್ತು ಎಂದು ಹೇಳಿದ್ದಾರೆ. ಕೃತಿಸ್ವಾಮ್ಯದ ವಿಷಯವನ್ನು ಪ್ರಸ್ತಾಪಿಸಿದ ತಕ್ಷಣ ಟಿ-ಸೀರೀಸ್ ಸಂಸ್ಥೆ ತಮಗೆ ಬಹಿಷ್ಕಾರ ಹಾಕಿತ್ತು. ಜೀ ಮ್ಯೂಸಿಕ್ ಸಂಸ್ಥೆ ಕೂಡ ತಮ್ಮೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಅವರು ನನ್ನನ್ನು ಒಬ್ಬ ಹೋರಾಟಗಾರ ಎಂದು ಕರೆಯುತ್ತಿದ್ದರು ಎಂದು ಸೋನು ಹೇಳಿದ್ದಾರೆ.
ಈ ಹೋರಾಟದಿಂದ ತಮ್ಮ ವೃತ್ತಿಜೀವನಕ್ಕೆ ಇಷ್ಟೊಂದು ದೊಡ್ಡ ಹೊಡೆತ ಬೀಳುತ್ತದೆ ಎಂದು ಅವರು ಊಹಿಸಿರಲಿಲ್ಲ. ಸಿನಿಮಾಗಳಲ್ಲಿ ಹಾಡುವ ಅವಕಾಶ ತಪ್ಪಿದರೂ ಸ್ಟೇಜ್ ಶೋಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಅರಿತುಕೊಂಡರು. ಅಂತಿಮವಾಗಿ ಇವರ ಹೋರಾಟಕ್ಕೆ ಜಯ ಸಿಕ್ಕಿದೆ. ಇಂದು ಅದೇ ಮ್ಯೂಸಿಕ್ ಕಂಪನಿಗಳು ಗಾಯಕರಿಗೆ ರಾಯಲ್ಟಿ ನೀಡುತ್ತಿವೆ.
ಗಾಯಕಿ ಲತಾ ಮಂಗೇಶ್ಕರ್ ಅವರು ಆರಂಭಿಸಿದ್ದ ಹೋರಾಟವನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ದೇವರು ತಮಗೆ ನೀಡಿದ್ದನು ಎಂದು ಸೋನು ನಂಬಿದ್ದಾರೆ. ಭಾರತದಲ್ಲಿ 2012ರಲ್ಲಿ ಕೃತಿಸ್ವಾಮ್ಯ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಇದಾದ ನಂತರ ಮ್ಯೂಸಿಕ್ ಕಂಪನಿಗಳಿಗೆ ಸೋನು ನಿಗಮ್ ಅವರ ವಾದ ಸರಿ ಇತ್ತು ಎಂಬುದು ಮನವರಿಕೆಯಾಯಿತು. ಈಗ ಎಲ್ಲ ಕಂಪನಿಗಳ ಜೊತೆ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಪ್ರತಿಭಟನೆ: ದೆಹಲಿಯ ಸಂಗೀತ ಕಾರ್ಯಕ್ರಮ ಮುಂದೂಡಿದ ಗಾಯಕ ಸೋನು ನಿಗಮ್
ಪ್ರಸ್ತುತ ಸೋನು ನಿಗಮ್ ಅವರ ವೃತ್ತಿಜೀವನ ಮತ್ತೆ ಬಿಜಿಯಾಗಿದೆ. ‘ಲಾಲ್ ಸಿಂಗ್ ಚಡ್ಡಾ’ ಮತ್ತು ಮುಂಬರುವ ‘ಬಾರ್ಡರ್ 2’ ನಂತಹ ದೊಡ್ಡ ಸಿನಿಮಾಗಳಲ್ಲಿ ಅವರು ಹಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಸಾಲು ಸಾಲು ಲೈವ್ ಕಾರ್ಯಕ್ರಮಗಳನ್ನು ನೀಡುತ್ತಾ ಮ್ಯುಸಿಕ್ ಜಗತ್ತಿನಲ್ಲಿ ರಾರಾಜಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.