
ಕನ್ನಡ ನೆಲದಲ್ಲಿ ಹುಟ್ಟಿ, ತೆಲುಗು, ತಮಿಳು, ಮೊದಲಾದ ಚಿತ್ರರಂಗದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ದಕ್ಷಿಣ ಭಾರತದ ‘ಮಹಾನಟಿ’ ಎನಿಸಿಕೊಂಡವರು ನಟಿ ಸೌಂದರ್ಯ. ತಮ್ಮ ಸಹಜ ನಟನೆ, ಸೌಂದರ್ಯ ಮತ್ತು ಸಾಂಪ್ರದಾಯಿಕ ಪಾತ್ರಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಈ ಸುಂದರ ತಾರೆ, ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಇಹಲೋಕ ತ್ಯಜಿಸಿದ್ದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದುರಂತ. ಸೌಂದರ್ಯ ಅವರ ಸಿನಿ ಪಯಣದ ಕೊನೆಯ ದಿನಗಳನ್ನು ತಿರುವಿ ಹಾಕಿದಾಗ, ಅವರು ನಟಿಸಿದ ಒಂದು ಬ್ಲಾಕ್ಬಸ್ಟರ್ ಸಿನಿಮಾ ಮತ್ತು ಅದರ ಮುಖ್ಯ ಕಲಾವಿದರ ಸಾವು ಇಂದಿಗೂ ಚಿತ್ರರಂಗವನ್ನು ನಡುಗಿಸುವಂತಿದೆ.
ಸೌಂದರ್ಯ ಹಾಗೂ ಮೋಹನ್ ಬಾಬು ನಟನೆಯ‘ಸೀತಯ್ಯ’ 2003ರಲ್ಲಿ ರಿಲೀಸ್ ಆಯಿತು . ವೈ.ವಿ.ಎಸ್. ಚೌಧರಿ ನಿರ್ದೇಶನದ ಈ ಹೈ-ವೋಲ್ಟೇಜ್ ಫ್ಯಾಕ್ಷನ್ ಆ್ಯಕ್ಷನ್ ಸಿನಿಮಾದಲ್ಲಿ ಸೌಂದರ್ಯ ಅವರು ನಂದಮೂರಿ ಹರಿಕೃಷ್ಣ ಅವರಿಗೆ ಜೋಡಿಯಾಗಿ ನಟಿಸಿದ್ದರು. ಸಿಮ್ರಾನ್ ಕೂಡ ಮತ್ತೊಬ್ಬ ನಾಯಕಿಯಾಗಿದ್ದರು. 2003 ರಲ್ಲಿ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು.
‘ಸೀತಯ್ಯ’ ಸಿನಿಮಾ ಬಿಡುಗಡೆಯಾಗಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ವಿಧಿಯ ಆಟ ಬೇರೆಯದೇ ಆಗಿತ್ತು. ಸಿನಿಮಾ ಬಂದ ಕೇವಲ ಒಂದು ವರ್ಷದೊಳಗೆ, ಅಂದರೆ 2004 ರಲ್ಲಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಅಂತ್ಯ ಕಂಡರು.
ಸೌಂದರ್ಯ ಜೊತೆ ನಟಿಸಿದ ನಂದಮೂರಿ ಹರಿಕೃಷ್ಣ ಅವರಿಗೂ ವಿಧಿ ರಸ್ತೆ ಅಪಘಾತದ ರೂಪದಲ್ಲಿ ಕಂಟಕ ತಂದಿಟ್ಟಿತು. ಡಿಸೆಂಬರ್ 7, 2018 ರಂದು ಹೈದರಾಬಾದ್ನಿಂದ ನೆಲ್ಲೂರು ಜಿಲ್ಲೆಯ ಕವಲಿಯಲ್ಲಿ ನಡೆಯುತ್ತಿದ್ದ ಅಭಿಮಾನಿಯೊಬ್ಬರ ಮದುವೆಗೆ ಹೋಗುತ್ತಿದ್ದಾಗ ನಲ್ಗೊಂಡ ಜಿಲ್ಲೆಯಲ್ಲಿ ಹರಿಕೃಷ್ಣ ಅವರ ಕಾರು ಭೀಕರ ಅಪಘಾತಕ್ಕೆ ಒಳಗಾಯಿತು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಒಂದೇ ಸೂಪರ್ ಹಿಟ್ ಸಿನಿಮಾದ ನಾಯಕ ಮತ್ತು ನಾಯಕಿ ಇಬ್ಬರೂ ವಿಭಿನ್ನ ಭೀಕರ ಅಪಘಾತಗಳಲ್ಲಿ ಸಾವನ್ನಪ್ಪಿದ್ದು ಇಂದಿಗೂ ಚಿತ್ರರಂಗವನ್ನು ನಡುಗಿಸುವ ಕಾಕತಾಳೀಯವಾಗಿದೆ.
ಕನ್ನಡದ ಹೆಣ್ಣುಮಗಳಾದ ಸೌಂದರ್ಯ ಅವರಿಗೆ ಸ್ಯಾಂಡಲ್ವುಡ್ನೊಂದಿಗಿನ ನಂಟು ಕೊನೆಯವರೆಗೂ ಹಸಿರಾಗಿತ್ತು. ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗುವ ಮುನ್ನ ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ‘ಆಪ್ತಮಿತ್ರ’ ಚಿತ್ರದಲ್ಲಿ ನಟಿಸಿದ್ದರು. ದುರಂತವೆಂದರೆ, ಸೌಂದರ್ಯ ಅವರು ಬದುಕಿದ್ದಾಗ ‘ಆಪ್ತಮಿತ್ರ’ ಸಿನಿಮಾ ತೆರೆಕಂಡಿರಲಿಲ್ಲ. ಅವರ ಸಾವಿನ ನಂತರ ಬಿಡುಗಡೆಯಾದ ಈ ಸಿನಿಮಾ ಸ್ಯಾಂಡಲ್ವುಡ್ ಇತಿಹಾಸದಲ್ಲೇ ದಾಖಲೆಯ ಯಶಸ್ಸು ಸಾಧಿಸಿತು. ಚಿತ್ರದಲ್ಲಿನ ಸೌಂದರ್ಯ ಅವರ ‘ನಾಗವಲ್ಲಿ’ ಪಾತ್ರ ಇಂದಿಗೂ ಕನ್ನಡಿಗರ ಮನಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಆ ಚಿತ್ರಕ್ಕೆ ಅವರಿಗೆ ಅತ್ಯುತ್ತಮ ನಟಿ ಫಿಲ್ಮ್ಫೇರ್ ಪ್ರಶಸ್ತಿಯೂ ಒಲಿದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.