ವಿವಾದಕ್ಕೆ ಸಿಲುಕಿದ ‘ಸ್ಪಿರಿಟ್’: ಪ್ರಭಾಸ್ ಮಧ್ಯ ಪ್ರವೇಶಕ್ಕೆ ಒತ್ತಾಯ

Spirit movie: ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದ ಪೋಸ್ಟರ್ ಒಂದು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಸೆನ್ಸೇಷನ್ ಸೃಷ್ಟಿಸಿದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಸಿನಿಮಾದ ಶೀರ್ಷಿಕೆ ಕುರಿತು ವಿವಾದ ಭುಗಿಲೆದ್ದಿದೆ. ಇದೀಗ ಈ ವಿವಾದವನ್ನು ಅಂತ್ಯಗೊಳಿಸಲು ನಟ ಪ್ರಭಾಸ್ ಮಧ್ಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಲಾಗಿದೆ.

ವಿವಾದಕ್ಕೆ ಸಿಲುಕಿದ ‘ಸ್ಪಿರಿಟ್’: ಪ್ರಭಾಸ್ ಮಧ್ಯ ಪ್ರವೇಶಕ್ಕೆ ಒತ್ತಾಯ
Spirit Movie

Updated on: Jun 20, 2026 | 7:46 PM

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ನಟಿಸುತ್ತಿರುವ ‘ಸ್ಪಿರಿಟ್’ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಸಿನಿಮಾ ಅನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದು, ಸಿನಿಮಾದ ಬಗ್ಗೆ ಪ್ರಭಾಸ್ ಅಭಿಮಾನಿಗಳು ಬಲು ಉತ್ಸುಕವಾಗಿದ್ದಾರೆ. ಸಿನಿಮಾನಲ್ಲಿ ಪ್ರಭಾಸ್ ಬಲು ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಪೋಸ್ಟರ್ ಒಂದು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಸೆನ್ಸೇಷನ್ ಸೃಷ್ಟಿಸಿದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಸಿನಿಮಾದ ಶೀರ್ಷಿಕೆ ಕುರಿತು ವಿವಾದ ಭುಗಿಲೆದ್ದಿದೆ. ಇದೀಗ ಈ ವಿವಾದವನ್ನು ಅಂತ್ಯಗೊಳಿಸಲು ನಟ ಪ್ರಭಾಸ್ ಮಧ್ಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಲಾಗಿದೆ.

ಸಿನಿಮಾ ಮೇಲಿನ ಆಸಕ್ತಿಯಿಂದ ರೈತ ಮಹಿಳೆ ನರಸಮ್ಮ ಎಂಬುವರು ನಿರ್ಮಾಪಕಿಯಾಗಿ ಬದಲಾಗಿ ಸಿನಿಮಾ ಒಂದನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಸೆನ್ಸಾರ್ ಸಹ ಆಗಿದೆ. ಆದರೆ ಸಿನಿಮಾ ಬಿಡುಗಡೆಗೆ ದಿನಗಳು ಬಾಕಿ ಇರುವಾಗ ಇದೀಗ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಟಿ-ಸೀರೀಸ್​​ನಿಂದ ನಿರ್ಮಾಪಕಿ ನರಸಮ್ಮನಿಗೆ ಎರಡು ನೋಟೀಸ್​​ಗಳು ಹೋಗಿವೆ. ನರಸಮ್ಮ ಅವರು ನಿರ್ಮಾಣ ಮಾಡಿರುವ ಸಿನಿಮಾದ ಹೆಸರು ‘ಸ್ಪಿರಿಟ್ ಈಸ್ ನಾಟ್ ಒನ್’. ಈಗ ಟಿ-ಸೀರೀಸ್ ನೀಡಿರುವ ನೊಟೀಸ್​​ನಿಂದ ಸಿನಿಮಾದ ಬಿಡುಗಡೆ ನಿಲ್ಲಿಸಲಾಗಿದೆ.

ಈ ವಿವಾದವನ್ನು ಪ್ರಭಾಸ್ ಅವರೇ ಬಗೆಹರಿಸಬೇಕು ಎಂದು ನರಸಮ್ಮ ಒತ್ತಾಯಿಸಿದ್ದು, ‘ನಮ್ಮ ಕುಟುಂಬ ಕಷ್ಟಪಟ್ಟು, ಆಸ್ತಿಗಳನ್ನು ಮಾರಿ ‘ಸ್ಪಿರಿಟ್ ಈಸ್ ನಾಟ್ ಒನ್’ ಚಿತ್ರವನ್ನು ನಿರ್ಮಿಸಿದೆ. ಇದು ಕೇವಲ ನಮ್ಮ ಕನಸಲ್ಲ, ನಮ್ಮ ಕುಟುಂಬ ಸದಸ್ಯರ ಶ್ರಮ, ಆಸೆ ಮತ್ತು ಹೂಡಿಕೆಯಾಗಿದೆ. ಸಿನಿಮಾ ಬಿಡುಗಡೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದಾಗ ಕಾನೂನು ನೋಟಿಸ್ ಬಂದಿದ್ದರಿಂದ ನಾವು ತೀವ್ರ ನಷ್ಟವನ್ನು ಎದುರಿಸುತ್ತಿದ್ದೇವೆ. ಟೀ-ಸೀರೀಸ್ ಸಂಸ್ಥೆಯಿಂದ ನಮಗೆ ಎರಡು ನೋಟಿಸ್‌ಗಳು ಬಂದಿವೆ. ‘ಸ್ಪಿರಿಟ್’ ಹೆಸರಿನಲ್ಲಿ ನಮ್ಮ ಚಿತ್ರದ ಪ್ರಚಾರ ಮತ್ತು ಬಿಡುಗಡೆ ಮಾಡಬಾರದೆಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಆದರೆ, ನಮ್ಮ ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಪ್ರಮಾಣಪತ್ರ ದೊರೆತಿದೆ. ‘ಸ್ಪಿರಿಟ್’ ಯೋಜನೆ ಅಧಿಕೃತವಾಗಿ ಪ್ರಾರಂಭವಾಗುವ ಮೊದಲೇ ನಮ್ಮ ಚಿತ್ರದ ಪ್ರಚಾರ ನಡೆದಿತ್ತು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:‘ಕಲ್ಕಿ 2898 ಎಡಿ’ ಪಾರ್ಟ್ 2 ಪ್ರಭಾಸ್ ಸಿನಿಮಾ ಅಲ್ಲ, ಕಮಲ್ ಹಾಸನ್ ಸಿನಿಮಾ

‘ನಮ್ಮನ್ನು ಒಮ್ಮೆ ಸಂಪರ್ಕಿಸಿದ್ದರೆ, ಶೀರ್ಷಿಕೆಯನ್ನು ಬದಲಾಯಿಸಿಕೊಳ್ಳಲು ನಾವು ಸಿದ್ಧರಿದ್ದೆವು. ಆದರೆ ಯಾವುದೇ ಪೂರ್ವ ಚರ್ಚೆ ಇಲ್ಲದೆ ನೋಟಿಸ್ ಕಳುಹಿಸಿದ್ದರಿಂದ ಚಿತ್ರದ ಬಿಡುಗಡೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ವಿವಾದದಿಂದಾಗಿ ನಮ್ಮ ಕುಟುಂಬ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದೆ. ಸಿನಿಮಾ ಬಿಡುಗಡೆಗಾಗಿ ಮಾಡಿರುವ ಸಾಲವನ್ನು ತೀರಿಸಬೇಕಾದ ಪರಿಸ್ಥಿತಿ ಇದೆ. ಬಿಡುಗಡೆಗೆ ಹಣ ನೀಡುತ್ತೇವೆ ಎಂದವರು ಈಗ ಹಿಂದೆ ಸರಿದಿದ್ದಾರೆ. ಊರಿನಲ್ಲಿ ಗೌರವ ಹೋಗಿದೆ, ಸದ್ಯ ನಮ್ಮನ್ನು ಯಾರೂ ನಂಬುತ್ತಿಲ್ಲ’ ಎಂದು ನರಸಮ್ಮ ನೋವು ತೋಡಿಕೊಂಡಿದ್ದಾರೆ.

‘ಶೀರ್ಷಿಕೆಯ ಮೇಲೆ ಆಕ್ಷೇಪಣೆಗಳಿದ್ದರೆ, ಹಿರಿಯರ ಸಮ್ಮುಖದಲ್ಲಿ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ನಮಗೆ ಯಾವುದೇ ದುರುದ್ದೇಶವಿಲ್ಲ. ಪರಸ್ಪರ ತಿಳುವಳಿಕೆಯಿಂದ ಸಮಸ್ಯೆ ಬಗೆಹರಿಯಬೇಕೆಂದು ಬಯಸುತ್ತೇನೆ” ಎಂದು ನಿರ್ಮಾಪಕಿ ನರ್ಸಮ್ಮ ತಿಳಿಸಿದ್ದಾರೆ. ಅಗತ್ಯವಿದ್ದರೆ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಿಕೊಳ್ಳಲೂ ಸಿದ್ಧರಿದ್ದೇವೆ. ತಮ್ಮ ಚಿತ್ರದ ಬಿಡುಗಡೆಗೆ ಯಾವುದೇ ಆಕ್ಷೇಪವಿಲ್ಲ ಎಂದು ಟೀ-ಸೀರೀಸ್ ಕಡೆಯಿಂದ ಅಧಿಕೃತ ಪತ್ರ ನೀಡಬೇಕೆಂದು ಮನವಿ ಮಾಡಿದ್ದಾರೆ. ಒಂದು ವೇಳೆ ಈ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ. ಪ್ರಭಾಸ್ ಮೇಲಿನ ಅಭಿಮಾನದಿಂದಲೇ ಈ ಮನವಿ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದ ಅವರು, ತಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನಿರ್ಮಾಪಕರೊಂದಿಗೆ ಮಾತನಾಡಿ ನ್ಯಾಯ ದೊರಕಿಸಿಕೊಡಬೇಕೆಂದು ಪ್ರಭಾಸ್ ಅವರಿಗೆ ಮನವಿ ಮಾಡುತ್ತಿದ್ದೇವೆ ಎಂದು ನರಸಮ್ಮ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:45 pm, Sat, 20 June 26

Loading...
Unable to load recommendations.
Follow Us