Oxygen Cylinder: ಕೊರೊನಾದಿಂದ ಕಂಗಾಲಾದ ಬೆಂಗಳೂರಿಗೆ ಉಚಿತ ಆಕ್ಸಿಜನ್​ ನೀಡಲು ಮುಂದೆ ಬಂದ ಸುನೀಲ್​ ಶೆಟ್ಟಿ

Suniel Shetty: ಈ ಮಾಹಿತಿಯನ್ನು ಎಷ್ಟು ಸಾಧ್ಯವೋ ಅಷ್ಟು ಜನರಿಗೆ ತಲುಪಿಸಿ. ಸದ್ಯಕ್ಕೆ ಮುಂಬೈ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಸುನೀಲ್​ ಶೆಟ್ಟಿ ಹೇಳಿದ್ದಾರೆ.

Oxygen Cylinder: ಕೊರೊನಾದಿಂದ ಕಂಗಾಲಾದ ಬೆಂಗಳೂರಿಗೆ ಉಚಿತ ಆಕ್ಸಿಜನ್​ ನೀಡಲು ಮುಂದೆ ಬಂದ ಸುನೀಲ್​ ಶೆಟ್ಟಿ
ಸುನೀಲ್​ ಶೆಟ್ಟಿ - ಆಕ್ಸಿಜನ್​ ಸಿಲಿಂಡರ್​​​

Updated on: Apr 29, 2021 | 11:48 AM

ಭಾರತದಲ್ಲಿ ಕೊರನಾ ವೈರಸ್​ ಹಾವಳಿ ಮಿತಿ ಮೀರಿದೆ. ಈ ಸಂದರ್ಭದಲ್ಲಿ ಕೆಲವು ಸೆಲೆಬ್ರಿಟಿಗಳು ವಿದೇಶದಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಬಹುತೇಕ ನಟ-ನಟಿಯರು ತಮ್ಮ ಐಷಾರಾಮಿ ಮನೆಗಳಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಆದರೆ ಕೆಲವರು ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಮೊದಲಿನಿಂದಲೂ ಬಾಲಿವುಡ್​ ನಟ ಸೋನು ಸೂದ್​ ಅವರು ಜನರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಈಗ ನಟ ಸುನೀಲ್​ ಶೆಟ್ಟಿ ಕೂಡ ಸಾಥ್​ ನೀಡುತ್ತಿದ್ದಾರೆ. ಅದರಲ್ಲೂ ಅವರು ಬೆಂಗಳೂರಿನ ಜನರ ಕಷ್ಟಕ್ಕೆ ಮಿಡಿಯುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಆಕ್ಸಿಜನ್​ ಕೊರತೆ ತೀವ್ರವಾಗಿ ಕಾಡುತ್ತಿದೆ. ಆಸ್ಪತ್ರೆಯಲ್ಲಿ ದಾಖಲಾಗುವ ಕೊವಿಡ್​ ಸೋಂಕಿತರಿಗೆ ಉಸಿರಾಟದ ತೊಂದರೆ ಆಗುತ್ತಿದೆ. ಸೂಕ್ತ ಕಾಲಕ್ಕೆ ಆಕ್ಸಿಜನ್​ ಸಿಲಿಂಡರ್​ಗಳು ಸಿಗದೇ ಅನೇಕರು ಮೃತಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ಮತ್ತು ಮುಂಬೈ ನಗರದ ಜನರಿಗೆ ಆಕ್ಸಿಜನ್​ ಸಿಗುವಂತೆ ಮಾಡಲು ಸುನೀಲ್​ ಶೆಟ್ಟಿ ಪಣತೊಟ್ಟಿದ್ದಾರೆ.

‘ಇದು ನಮ್ಮೆಲ್ಲರಿಗೂ ಪರೀಕ್ಷೆಯ ಕಾಲ. ಆದರೆ ಜನರು ಒಬ್ಬರಿಗೊಬ್ಬರು ಸಹಾಯ ಮಾಡಲು ಕೈ ಜೋಡಿಸುತ್ತಿರುವುದು ಭರವಸೆಯ ಕಿರಣದಂತೆ ಕಾಣಿಸಿದೆ. ಉಚಿತವಾಗಿ ಆಕ್ಸಿಜನ್​ ನೀಡುವ ಈ ಅಭಿಯಾನದಲ್ಲಿ ಭಾಗಿ ಆಗುತ್ತಿರುವದಕ್ಕೆ ನಾನು ಧನ್ಯ ಎನಿಸುತ್ತಿದೆ’ ಎಂದು ಸುನೀಲ್​ ಶೆಟ್ಟಿ ಟ್ವಿಟರ್​ ಮೂಲಕ ತಿಳಿಸಿದ್ದಾರೆ. ಕೆವಿನ್​ ಫೌಂಡೇಶನ್​ ಜೊತೆ ಸೇರಿ ಅವರು ಈ ಕಾರ್ಯವನ್ನು ಮಾಡುತ್ತಿದ್ದಾರೆ. ಫೀಡ್​ ಮೈ ಸಿಟಿ ಹೆಸರಿನ ಈ ಅಭಿಮಾನಕ್ಕೆ ಅನೇಕರು ಕೈ ಜೋಡಿಸುತ್ತಿದ್ದಾರೆ.

‘ಈ ಮೂಲಕ ತನ್ನ ಸ್ನೇಹಿತರು ಮತ್ತು ಅಭಿಮಾನಿಗಳಲ್ಲಿ ಮನವಿ ಮಾಡುತ್ತಿದ್ದೇನೆ. ನಿಮಗೆ ಸಹಾಯ ಬೇಕಾಗಿದ್ದರೆ ಅಥವಾ ಸಹಾಯದ ಅವಶ್ಯಕತೆ ಇರುವ ಯಾರಾದರೂ ನಿಮಗೆ ಗೊತ್ತಿದ್ದರೆ ನನಗೆ ಮೆಸೇಜ್​ ಮಾಡಿ. ಈ ಅಭಿಯಾನದಲ್ಲಿ ನೀವು ಭಾಗಿಯಾಗುವುದಾದರೆ, ಆ ಮೂಲಕ ಕೊಡುಗೆ ನೀಡುವುದಿದ್ದರೆ ನನಗೆ ಮೆಸೇಜ್​ ಕಳುಹಿಸಿ. ಈ ಮಾಹಿತಿಯನ್ನು ಎಷ್ಟು ಸಾಧ್ಯವೋ ಅಷ್ಟು ಜನರಿಗೆ ತಲುಪಿಸಿ. ಸದ್ಯಕ್ಕೆ ಮುಂಬೈ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಸುನೀಲ್​ ಶೆಟ್ಟಿ ಟ್ವೀಟ್​ ಮಾಡಿದ್ದಾರೆ.

ಮೂಲತಃ ಕರ್ನಾಟಕದವರಾದ ಸುನೀಲ್​ ಶೆಟ್ಟಿ ಹೆಚ್ಚು ಮಿಂಚಿದ್ದು ಬಾಲಿವುಡ್​ನಲ್ಲಿ. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ಸುದೀಪ್​ ನಟನೆಯ ಪೈಲ್ವಾನ್​ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟರು. ಈಗ ಅವರು ಬೆಂಗಳೂರಿನ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವುದರಿಂದ ಎಲ್ಲರಿಂದ ಮೆಚ್ಚುಗೆ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Oxygen Cylinder: ಆಸ್ಪತ್ರೆಗೆ ಆಕ್ಸಿಜನ್​ ನೀಡಲು ಮುಂದಾದ ನಟಿ ಸುಶ್ಮಿತಾ ಸೇನ್​​ಗೆ ತಪ್ಪಲಿಲ್ಲ ಟ್ರೋಲ್ ಕಾಟ

ಬಾಯ್​ಫ್ರೆಂಡ್​ ರಾಹುಲ್​ ಜತೆ ಫೋಟೋ ಹಂಚಿಕೊಂಡ ಆಥಿಯಾ; ಇದು ನಿಜ ಎಂದ ಸುನೀಲ್​ ಶೆಟ್ಟಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us