ಜೂ ಎನ್​ಟಿಆರ್ ವಿರುದ್ಧ ಚಂದ್ರಬಾಬು ನಾಯ್ಡು ಶಿಷ್ಯನ ಹೇಳಿಕೆ

ಜೂ ಎನ್​ಟಿಆರ್ ತಾವಾಯಿತು ತನ್ನ ಸಿನಿಮಾಗಳಾಯಿತು ಎಂದು ಆರಾಮವಾಗಿದ್ದಾರೆ. ಆದರೆ ಅವರ ಹೆಸರು ಮಾತ್ರ ಆಂಧ್ರ ರಾಜಕೀಯದಲ್ಲಿ ಪದೇ ಪದೇ ಚರ್ಚೆಗೆ ಬರುತ್ತಲೇ ಇರುತ್ತದೆ. ಇದೀಗ ಚಂದ್ರಬಾಬು ನಾಯ್ಡು ಆಪ್ತರೊಬ್ಬರು ಜೂ ಎನ್​ಟಿಆರ್​ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜೂ ಎನ್​ಟಿಆರ್ ವಿರುದ್ಧ ಚಂದ್ರಬಾಬು ನಾಯ್ಡು ಶಿಷ್ಯನ ಹೇಳಿಕೆ

Updated on: Aug 22, 2024 | 7:05 PM

ನಟ ಜೂ ಎನ್​ಟಿಆರ್, ತಾವಾಯಿತು ತಮ್ಮ ಸಿನಿಮಾ ಕೆಲಸವಾಯಿತು ಎಂದು ಆರಾಮವಾಗಿದ್ದಾರೆ. ರಾಜಕೀಯದಿಂದ ದೂರವೇ ಉಳಿದು ಬಿಟ್ಟಿದ್ದಾರೆ. ಹಾಗಿದ್ದರೂ ಸಹ ಆಂಧ್ರ ಪ್ರದೇಶ ರಾಜಕೀಯದಲ್ಲಿ ಜೂ ಎನ್​ಟಿಆರ್ ಹೆಸರು ಜೋರಾಗಿ ಕೇಳಿ ಬರುತ್ತಲೇ ಇರುತ್ತದೆ. ನಂದಮೂರಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬಂದಮೇಲಂತೂ ಆಗೆಲ್ಲ ಜೂ ಎನ್​ಟಿಆರ್ ಅನ್ನು ಹೆಗಲ ಮೇಲೆ ಹೊತ್ತು ಮೆರೆಸಿದವರೇ ಈಗ ಜೂ ಎನ್​ಟಿಆರ್ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ.

ಟಿಡಿಪಿ ಮುಖಂಡ ಹಾಗೂ ಮಾಜಿ ಎಂಎಲ್​ಸಿ, ಚಂದ್ರಬಾಬು ನಾಯ್ಡು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ಬುದ್ಧ ವೆಂಕನ್ನ, ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಜೂ ಎನ್​ಟಿಆರ್​ಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಮಾತ್ರವಲ್ಲದೆ ‘ಸೀನಿಯರ್​ ಎನ್​ಟಿಆರ್​ ಗೆ ಬಹಳ ಮಂದಿ ಮೊಮ್ಮಕ್ಕಳಿದ್ದಾರೆ’ ಎಂದು ಹೇಳಿದ್ದಾರೆ. ಆ ಮೂಲಕ ಜೂ ಎನ್​ಟಿಆರ್, ನಂದಮೂರಿ ಕುಟುಂಬಕ್ಕೆ ಸೇರಿದವರಲ್ಲ ಎಂಬರ್ಥದ ಮಾತುಗಳನ್ನಾಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡುತ್ತಾ, ತಾವು ನಂದಮೂರಿ ಕುಟುಂಬದ ಬೆಂಬಲಿಗನಾಗಿರುತ್ತೇನೆ ಎಂದ ಬುದ್ಧ ವೆಂಕನ್ನ, ‘ಚಂದ್ರಬಾಬು ನಾಯ್ಡು ನಾಯಕತ್ವ, ನಾರಾ ಲೋಕೇಶ್ ನಾಯಕತ್ವ, ಭುವನೇಶ್ವರಿ ನಾಯಕತ್ವ, ಬ್ರಹ್ಮಿಣಿ ಅವರ ನಾಯಕತ್ವವನ್ನು ಒಪ್ಪುತ್ತೇನೆ’ ಎಂದರು. ಆಗ ಸಂದರ್ಶಕ ‘ಜೂ ಎನ್​ಟಿಆರ್ ನಾಯಕತ್ವ?’ ಎಂದು ಪ್ರಶ್ನೆ ಮಾಡಿದ್ದಕ್ಕೆ, ‘ನಾನು, ಜೂ ಎನ್​ಟಿಆರ್ ನಾಯಕತ್ವ ಒಪ್ಪುವುದಿಲ್ಲ’ ಎಂದಿದ್ದಾರೆ. ಆಗ ಸಂದರ್ಶಕ, ‘ಅದೇಕೆ? ಅವರೂ ಸಹ ಟಿಡಿಪಿ ಪಕ್ಷದ ವ್ಯವಸ್ಥಾಪಕ, ಸೀನಿಯರ್ ಎನ್​ಟಿಆರ್ ಅವರ ಮೊಮ್ಮಗ’ ಎಂದಿದ್ದಾರೆ. ‘ಸೀನಿಯರ್ ಎನ್​ಟಿಆರ್ ಅವರಿಗೆ ಬಹಳ ಜನ ಮೊಮ್ಮಕ್ಕಳಿದ್ದಾರೆ’ ಎಂದಿದ್ದಾರೆ. ಆ ಮೂಲಕ ಪಕ್ಷಕ್ಕೆ, ಕುಟುಂಬಕ್ಕೆ ಜೂ ಎನ್​ಟಿಆರ್ ಅವಶ್ಯಕತೆ ಇಲ್ಲವೆಂದು ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ:ಜೂ ಎನ್​ಟಿಆರ್ ಕೈಯಲ್ಲಿರುವ ಈ ವಾಚ್​ ಬೆಲೆಗೆ ಒಂದು ಸಿನಿಮಾ ನಿರ್ಮಿಸಬಹುದು

ಈ ಹಿಂದೆಯೂ ಸಹ ಹಲವು ಟಿಡಿಪಿ ನಾಯಕರು ಜೂ ಎನ್​ಟಿಆರ್ ವಿರುದ್ಧ ನಾನಾ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಸ್ವತಃ ನಂದಮೂರಿ ಬಾಲಕೃಷ್ಣ ಸಹ ಕೆಲವು ಬಾರಿ ಜೂ ಎನ್​ಟಿಆರ್​ಗೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಿದೆ. ಅಲ್ಲದೆ, ಕುಟುಂಬದ ಕಾರ್ಯಕ್ರಮಕ್ಕೂ ಸಹ ಜೂ ಎನ್​ಟಿಆರ್​ಗೆ ಆಹ್ವಾನ ನೀಡದೆ ಅವಮಾನಿಸಿದ್ದೂ ಇದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೂ ಎನ್​ಟಿಆರ್ ಅಭಿಮಾನಿಗಳಿಗೆ ನಿರ್ಬಂಧ ಹೇರಿದ್ದ ಘಟನೆಗಳು ಸಹ ನಡೆದಿವೆ.

ಹಿಂದೆ ಜೂ ಎನ್​ಟಿಆರ್, ಟಿಡಿಪಿ ಪಕ್ಷದ ಸ್ಟಾರ್ ಪ್ರಚಾರ ಆಗಿದ್ದರು. ಭಾರಿ ಜನಪ್ರಿಯತೆ ಆಂಧ್ರದಲ್ಲಿ ಆಗಲೂ ಇತ್ತು, ಈಗ ಅದು ಇನ್ನೂ ಹೆಚ್ಚಾಗಿದೆ. ಆದರೆ ಚಂದ್ರಬಾಬು ನಾಯ್ಡು, ತಮ್ಮ ಪುತ್ರ ನಾರಾ ಲೋಕೇಶ್ ಅನ್ನು ಟಿಡಿಪಿ ಪಕ್ಷದ ಸ್ಟಾರ್ ಆಗಿ ಬೆಳೆಸುವ ಕಾರಣಕ್ಕೆ ಜೂ ಎನ್​ಟಿಆರ್ ಅನ್ನು ಪಕ್ಷದಿಂದ ದೂರ ಇರಿಸಿದ್ದಾರೆ ಎನ್ನಲಾಗುತ್ತಿದೆ. ಜೂ ಎನ್​ಟಿಆರ್ ಈ ಬಗ್ಗೆ ಎಲ್ಲೂ ಮೌನ ಮುರಿದಿಲ್ಲ. ಬದಲಿಗೆ ತಮ್ಮ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us