‘ಕಾಫಿ ಸಿಕ್ಕಿಲ್ಲ, ಮೊಸರನ್ನ, ಗಂಜಿ ತಿನ್ನೋಕೆ ಆಗಲ್ಲ’: ನರಕದಲ್ಲಿ ಅನುಷಾ ರೈ ಕಣ್ಣೀರು

|

Updated on: Oct 01, 2024 | 10:13 PM

ಬಿಗ್​ ಬಾಸ್​ ಮನೆಯ ನರಕದಲ್ಲಿ ಬದುಕುವುದು ನಟಿ ಅನುಷಾ ರೈ ಅವರಿಗೆ ಕಷ್ಟ ಆಗಿದೆ. ಅದನ್ನು ಹೇಳಿಕೊಂಡು ಅವರು ಗಳಗಳನೆ ಅತ್ತಿದ್ದಾರೆ. ನರಕದಲ್ಲಿ ಈಗ ಒಟ್ಟು 7 ಸ್ಪರ್ಧಿಗಳು ಇದ್ದಾರೆ. ಸ್ವರ್ಗದಲ್ಲಿ 10 ಜನ ಇದ್ದಾರೆ. ಮುಂದಿನ ವಾರಗಳಲ್ಲಿ ಸ್ಪರ್ಧಿಗಳ ಸ್ಥಾನ ಬದಲಾಗುತ್ತದೆ. ಯಾರು ಸ್ವರ್ಗದಿಂದ ನರಕಕ್ಕೆ ಬರುತ್ತಾರೆ, ಯಾರು ನರಕದಿಂದ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ಕುತೂಹಲ ಇದೆ.

‘ಕಾಫಿ ಸಿಕ್ಕಿಲ್ಲ, ಮೊಸರನ್ನ, ಗಂಜಿ ತಿನ್ನೋಕೆ ಆಗಲ್ಲ’: ನರಕದಲ್ಲಿ ಅನುಷಾ ರೈ ಕಣ್ಣೀರು
ಅನುಷಾ ರೈ
Follow us on

ಬಿಗ್​ ಬಾಸ್​ ಮನೆ ಈಗ ಮೊದಲಿನಂತೆ ಇಲ್ಲ. ಮನೆಯ ಒಂದು ಭಾಗ ಸ್ವರ್ಗ. ಇನ್ನೊಂದು ಭಾಗ ನರಕ. ಇಷ್ಟು ಸೀಸನ್​ಗಳಲ್ಲಿ ಒಂದು ವಾರದ ನಂತರ ಕೆಲವು ಸ್ಪರ್ಧಿಗಳಿಗೆ ಒಂದಷ್ಟು ಸವಲತ್ತುಗಳನ್ನು ನಿರಾಕರಿಸಲಾಗುತ್ತಿತ್ತು. ಆದರೆ ಈ ಬಾರಿ ಆಟದ ಆರಂಭದಲ್ಲೇ ನರಕದಲ್ಲಿ ಕೆಲವು ಸ್ಪರ್ಧಿಗಳನ್ನು ಇಡಲಾಗಿದ್ದು, ತೀರಾ ಬೇಸಿಕ್ ಸೌಕರ್ಯಗಳನ್ನು ಮಾತ್ರ ನೀಡಲಾಗಿದೆ. ಇದರಿಂದ ನಟಿ ಅನುಷಾ ರೈ ಅವರಿಗೆ ಬಿಗ್​ ಬಾಸ್​ ಮನೆಯ ವಾತಾವರಣ ಕಷ್ಟ ಆಗಿದೆ. ಹಾಗಾಗಿ ಅವರು ಕಣ್ಣೀರು ಹಾಕಿದ್ದಾರೆ.

ಸ್ವರ್ಗದಲ್ಲಿ ಇರುವ ಸ್ಪರ್ಧಿಗಳಿಗೆ ಉತ್ತಮವಾದ ಆಹಾರ ಸಿಗುತ್ತಿದೆ. ಆದರೆ ನರಕದಲ್ಲಿ ಇರುವವರಿಗೆ ಗಂಜಿ ಮತ್ತು ಮೊಸರನ್ನ ನೀಡಲಾಗಿದೆ. ಅನುಷಾ ರೈ ಅವರಿಗೆ ಇದನ್ನು ತಿಂದು ಕಾಲ ಕಳೆಯುವುದು ಕಷ್ಟವಾಗಿದೆ. ಇನ್ನುಳಿದ ನರಕವಾಸಿಗಳು ಇದನ್ನೆಲ್ಲ ಸಹಿಸಿಕೊಂಡಿದ್ದಾರೆ. ಚೈತ್ರಾ ಕುಂದಾಪುರ, ಅನುಷಾ ರೈ, ಮಾನಸಾ, ಗೋಲ್ಡ್​ ಸುರೇಶ್, ಶಿಶಿರ್, ರಂಜಿತ್, ಮೋಕ್ಷಿತಾ ಪೈ ಅವರು ಕೂಡ ನರಕದಲ್ಲಿ ಇದ್ದಾರೆ.

ಕಾಫಿ ಕೊಡಿ ಅಂತ ಬಿಗ್​ ಬಾಸ್​ ಬಳಿ ಅನುಷಾ ರೈ ಮನವಿ ಮಾಡಿದ್ದರು. ಆದರೆ ಅವರಿಗೆ ಕಾಫಿ ಸಿಕ್ಕಿಲ್ಲ. ನರಕದಲ್ಲಿ ಕುಳಿತು ಕಣ್ಣೀರು ಹಾಕುವಾಗ ಅನುಷಾ ರೈ ಅವರು ಇದನ್ನೆಲ್ಲ ಹೇಳಿದ್ದಾರೆ. ‘ನಾನು ಕಾಫಿ ಕೇಳಿದ್ದೆ. ನೀವು ಕೊಟ್ಟಿಲ್ಲ. ನನಗೆ ಗಂಜಿ, ಮೊಸರನ್ನ ತಿಂದು ಅಭ್ಯಾಸ ಇಲ್ಲ. ಎನರ್ಜಿ ಉಳಿದಿಲ್ಲ. ನಾನು ಏನನ್ನೂ ಮಿಸ್​ ಮಾಡಿಕೊಳ್ಳುತ್ತಿಲ್ಲ. ಆದರೂ ಅಳು ಬರುತ್ತಿದೆ. ಯಾಕೆ ಅಂತ ಗೊತ್ತಿಲ್ಲ. ಆರಾಮಾಗಿ ಮೂರು-ನಾಲ್ಕು ವಾರ ಇರೋಕೆ ಬಂದಿದೀಯಾ ಅಂತ ಬೇರೆಯವರು ಹೇಳಿದ್ದಕ್ಕೆ ನನಗೆ ಬೇಸರ ಆಗಿದೆ’ ಎಂದು ಅನುಷಾ ರೈ ಅವರು ಅತ್ತಿದ್ದಾರೆ.

ಇದನ್ನೂ ಓದಿ: ‘ಪಾರು’ ನಟಿ ಮೋಕ್ಷಿತಾ ಪೈಗೆ ಕಷ್ಟ ಆಗುತ್ತಿದೆಯಾ ಬಿಗ್​ ಬಾಸ್​ ವಾತಾವರಣ?

ಬಿಗ್​ ಬಾಸ್​ನಲ್ಲಿ ಎಷ್ಟು ಗಟ್ಟಿಯಾಗಿದ್ದರೂ ಸಾಲದು. ದಿನ ಕಳೆದಂತೆ, ಆಟದ ತೀವ್ರತೆ ಜಾಸ್ತಿ ಆದಂತೆ ಕಷ್ಟಗಳು ಕೂಡ ಹೆಚ್ಚಾಗುತ್ತವೆ. ಅನುಷಾ ರೈ ಅವರು ಆರಂಭದಲ್ಲೇ ಇಷ್ಟು ದುರ್ಬಲರಾದರೆ ಕಷ್ಟ. ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಮೋಕ್ಷಿತಾ ಮುಂತಾದವರು ನರಕಕ್ಕೆ ಸಾಧ್ಯವಾದಷ್ಟು ಹೊಂದಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ನರಕದಿಂದ ಸ್ವರ್ಗಕ್ಕೆ ಹೋಗುತ್ತಾರೆ, ಯಾರು ಸ್ವರ್ಗದಿಂದ ನರಕಕ್ಕೆ ಬರುತ್ತಾರೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.