ಅನುಮಾನಿಸಿದ ಅಶ್ವಿನಿ ಮುಂದೆಯೇ ಗೆದ್ದು ತೋರಿಸಿದ ಧ್ರುವಂತ್

Bigg Boss Kannada: ಬಿಗ್​​ಬಾಸ್ ಮನೆಯಲ್ಲಿ ಇತ್ತೀಚೆಗೆ ಧ್ರುವಂತ್ ತುಸು ಸದ್ದು ಮಾಡಲು ಆರಂಭಿಸಿದ್ದಾರೆ. ಮೊದಲೆಲ್ಲ ಮಲ್ಲಮ್ಮನ ಜೊತೆ ಸೇರಿ ಅವರೊಟ್ಟಿಗೆ ಭಾವನಾತ್ಮಕವಾಗಿ ವರ್ತಿಸುತ್ತಾ ಮೆಲೊಡ್ರಾಮಾ ಸೃಷ್ಟಿಸುತ್ತಿದ್ದ ಧ್ರುವಂತ್ ಇತ್ತೀಚೆಗೆ ಅಶ್ವಿನಿ ಅವರೊಟ್ಟಿಗೆ ಸೇರಿಕೊಂಡು ಗೇಮ್ ಪ್ಲ್ಯಾನ್​​ಗಳನ್ನು ಮಾಡುತ್ತಿದ್ದಾರೆ. ಆದರೆ ಇಂದಂತೂ (ಬುಧವಾರದ ಎಪಿಸೋಡ್) ಧ್ರುವಂತ್ ತಾವೊಬ್ಬ ಟಾಸ್ಕ್ ಮಾಸ್ಟರ್ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಅನುಮಾನಿಸಿದ ಅಶ್ವಿನಿ ಮುಂದೆಯೇ ಗೆದ್ದು ತೋರಿಸಿದ ಧ್ರುವಂತ್
Bigg Boss Kannada

Updated on: Nov 19, 2025 | 11:18 PM

ಬಿಗ್​​ಬಾಸ್ (Bigg Boss) ಮನೆಯಲ್ಲಿ ತುಸು ಕಡಿಮೆ ಸದ್ದು ಮಾಡುತ್ತಿರುವವರ ಸಾಲಿನಲ್ಲಿ ಧ್ರುವಂತ್ ಸಹ ಒಬ್ಬರು. ಸ್ವತಃ ಸುದೀಪ್ ಕೆಲವು ಬಾರಿ ಅವರಿಗೆ ಎಚ್ಚರಿಕೆ ನೀಡಿದ್ದು, ಹೀಗೆಯೇ ಇದ್ದರೆ ಮನೆಯಿಂದ ಹೊರ ಹೋಗುವುದು ಪಕ್ಕಾ ಎಂಬ ಪರೋಕ್ಷ ಸಂದೇಶವನ್ನೂ ಕೊಟ್ಟಿದ್ದಾರೆ. ಆದರೆ ಇತ್ತೀಚೆಗೆ ಧ್ರುವಂತ್ ತುಸು ಸದ್ದು ಮಾಡಲು ಆರಂಭಿಸಿದ್ದಾರೆ. ಮೊದಲೆಲ್ಲ ಮಲ್ಲಮ್ಮನ ಜೊತೆ ಸೇರಿ ಅವರೊಟ್ಟಿಗೆ ಭಾವನಾತ್ಮಕವಾಗಿ ವರ್ತಿಸುತ್ತಾ ಮೆಲೊಡ್ರಾಮಾ ಸೃಷ್ಟಿಸುತ್ತಿದ್ದ ಧ್ರುವಂತ್ ಇತ್ತೀಚೆಗೆ ಅಶ್ವಿನಿ ಅವರೊಟ್ಟಿಗೆ ಸೇರಿಕೊಂಡು ಗೇಮ್ ಪ್ಲ್ಯಾನ್​​ಗಳನ್ನು ಮಾಡುತ್ತಿದ್ದಾರೆ. ಆದರೆ ಇಂದಂತೂ (ಬುಧವಾರದ ಎಪಿಸೋಡ್) ಧ್ರುವಂತ್ ತಾವೊಬ್ಬ ಟಾಸ್ಕ್ ಮಾಸ್ಟರ್ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಶಕ್ತಿ, ಪರಸ್ಪರ ಹೊಂದಾಣಿಕೆ ಎರಡರ ಅವಶ್ಯಕತೆ ಇದ್ದ ಟಾಸ್ಕ್ ಒಂದನ್ನು ಬಿಗ್​​ಬಾಸ್ ಆಡಿಸಿದರು. ರೆಡ್ ತಂಡಕ್ಕೆ ಅಶ್ವಿನಿ ನಾಯಕಿ, ನೀಲಿ ತಂಡಕ್ಕೆ ಗಿಲ್ಲಿ ನಾಯಕ. ಟಾಸ್ಕ್ ಗೆದ್ದರೆ ಅಶ್ವಿನಿ ಅವರಿಗೆ ಕ್ಯಾಪ್ಟೆನ್ಸಿ ಓಟಕ್ಕೆ ಸುಲಭ ಆಗಲಿತ್ತು. ಹಾಗಾಗಿ ಒಳ್ಳೆಯ ಗೆಲ್ಲುವ ಸ್ಪರ್ಧಿಯನ್ನು ಕಳಿಸಿ ಎಂದು ಅಶ್ವಿನಿಗೆ ಜಾನ್ವಿ ಸಲಹೆ ನೀಡಿದರು. ಅದರಂತೆ ಮೊದಲು ಧ್ರುವಂತ್ ಹೇಳಿದಂತೆ ಅವರನ್ನು ಆಟಕ್ಕೆ ಕಳಿಸಲು ಒಪ್ಪಿದ್ದ ಅಶ್ವಿನಿ, ಆ ಬಳಿಕ ಧ್ರುವಂತ್ ಬದಲಿಗೆ ಧನುಶ್ ಅನ್ನು ಕಳಿಸಲು ಮುಂದಾದರು. ತಮ್ಮ ಅಭಿಪ್ರಾಯವನ್ನು ಧ್ರುವಂತ್​​ಗೆ ಅಶ್ವಿನಿ ತಿಳಿಸಿದರು ಸಹ.

ಆದರೆ ಧ್ರುವಂತ್​​​ಗೆ ಇದು ಸ್ವಲ್ಪವೂ ಇಷ್ಟವಾಗಲಿಲ್ಲ. ಈ ಗೇಮ್​​ಗೆ ನಾನೇ ಹೋಗುತ್ತೇನೆ ಎಂದು ಹಠ ಹಿಡಿದರು. ನಾನಿಲ್ಲಿ ಬೊಂಬೆಯಂತೆ ಕೂರಲು ಬಂದಿಲ್ಲ. ನೀವು ಕ್ಯಾಪ್ಟನ್ ಆದವರು ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ನೀವು ನಿಮ್ಮ ಸ್ವಾರ್ಥಕ್ಕಾಗಿ ಆಟ ಆಡುವುದನ್ನು ಬಿಡಿ, ನನಗೆ ಅವಕಾಶ ಕೊಡಿ. ನೀವು ಏನಾದರೂ ಬೇಕಾದರೂ ಮಾಡಿಕೊಳ್ಳಿ ನಾನು ಆಡಲೇ ಬೇಕು ಎಂದರು. ಮಾತ್ರವಲ್ಲದೆ, ರಘು ಬಳಿಯೂ ಸಹ ಮಾತನಾಡುತ್ತಾ ದೂರು ಹೇಳಿದರು. ಆಗಂತೂ ಅಶ್ವಿನಿ, ಧ್ರುವಂತ್ ಮೇಲೆ ಕೆರಳಿ ಕೆಂಡವಾದರು, ಧ್ರುವಂತ್ ಸಹ ಸುಮ್ಮನಿರಲಿಲ್ಲ. ಆದರೆ ಅಂತಿಮವಾಗಿ ಅಶ್ವಿನಿ, ಧ್ರುವಂತ್ ಅನ್ನೇ ಆಟಕ್ಕೆ ಆಯ್ಕೆ ಮಾಡಿಕೊಂಡರು.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ 12: ಫಿನಾಲೆ ಬರಲಿರುವ ಸ್ಪರ್ಧಿಗಳ ಹೆಸರಿಸಿದ ಮಾಜಿ ಸ್ಪರ್ಧಿ ವಿನಯ್

ಅಶ್ವಿನಿ ತಂಡದಿಂದ ರಿಶಾ, ಜಾನ್ವಿ ಮತ್ತು ಧ್ರುವಂತ್ ಆಡಿದರೆ, ಗಿಲ್ಲಿ ತಂಡದಿಂದ ಕಾವ್ಯಾ, ರಾಶಿಕಾ ಮತ್ತು ಸೂರಜ್ ಆಡಿದರು. ಕಾವ್ಯಾ ಮತ್ತು ರಾಶಿಕಾ ಆರಂಭದಲ್ಲಿ ಚೆನ್ನಾಗಿ ಆಡಿದರು. ಆದರೆ ಜಾನ್ವಿ ಮತ್ತು ರಿಶಾ ಸರಿಯಾಗಿ ಆಡದೆ ಆರಂಭದಲ್ಲಿಯೇ ದೊಡ್ಡ ಹಿನ್ನಡೆ ಅಶ್ವಿನಿ ತಂಡಕ್ಕೆ ಆಗಿತ್ತು. ಸೂರಜ್ ಸಹ ಟಾಸ್ಕ್​​ನ ಮುಂದಿನ ಭಾಗವನ್ನು ಚೆನ್ನಾಗಿಯೇ ಆಡುತ್ತಿದ್ದರು. ಆದರೆ ಟಾಸ್ಕ್​​ನ ಕ್ಲೈಮ್ಯಾಕ್ಸ್​​ಗೆ ಬಂದಾಗ ಅವರು ಮಂಕಾದರು. ಆರಂಭದಲ್ಲಿ ಸರಿಯಾಗಿ ಆಡಲು ಪರದಾಡಿದ ಧ್ರುವಂತ್, ಆಡುತ್ತಾ ಆಡುತ್ತಾ ಟಾಸ್ಕ್​​ನ ಮರ್ಮವನ್ನು ಅರ್ಥ ಮಾಡಿಕೊಂಡು ಜಯಶಾಲಿ ಆದರು. ನಂಬಿಕೆಯೇ ಇಲ್ಲದಿದ್ದ ಟಾಸ್ಕ್​ ಅನ್ನು ಗೆಲ್ಲಿಸಿಕೊಟ್ಟರು. ಅಶ್ವಿನಿ ಹಾಗೂ ಜಾನ್ವಿ ಖುಷಿಗಂತೂ ಪಾರವೇ ಇರಲಿಲ್ಲ. ತಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಅಶ್ವಿನಿ ಎದುರೇ ಗೆದ್ದು ತೋರಿಸಿದರು ಧ್ರುವಂತ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ