‘ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಬೊಮ್ಮಾಯಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವೆ’: ಜಗದೀಶ್​

ರಾಜಕೀಯಕ್ಕೆ ಬರಬೇಕು ಎಂಬುದು ಜಗದೀಶ್ ಗುರಿ. ಆ ಬಗ್ಗೆ ಅವರು ಈಗಾಗಲೇ ಮಾತನಾಡಿದ್ದಾರೆ. ಸಿಎಂ ಆಗಬೇಕು ಎಂದು ಕನಸು ಕಂಡಿರುವ ಜಗದೀಶ್ ಅವರು ‘ಟಿವಿ 9’ ಎಕ್ಸ್​ಕ್ಲೂಸೀವ್ ಸಂದರ್ಶನದಲ್ಲೂ ಆ ಬಗ್ಗೆ ಮಾತನಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಿಂದ ಹೊರಬಂದ ಬಳಿಕ ಅವರು ಈ ಸಂದರ್ಶನ ನೀಡಿದ್ದು, ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಬೊಮ್ಮಾಯಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವೆ’: ಜಗದೀಶ್​
ಬಸವರಾಜ ಬೊಮ್ಮಾಯಿ, ಜಗದೀಶ್
Follow us
| Updated By: ಮದನ್​ ಕುಮಾರ್​

Updated on: Oct 20, 2024 | 8:07 PM

‘ನಾನು ಸಿಎಂ ಆಗಬೇಕು’ ಎಂದು ಬಿಗ್ ಬಾಸ್ ವೇದಿಕೆಯಲ್ಲಿ ಜಗದೀಶ್ ಅವರು ಹೇಳಿದ್ದರು. ಈಗ ಅವರು ಆ ಬಗ್ಗೆ ಇನ್ನಷ್ಟು ಮಾತನಾಡಿದ್ದಾರೆ. ‘ಏನು ಕರೆದು ಕೊಟ್ಟರೂ ನಾನು ಮಾಡುತ್ತೇನೆ. ಬಿಗ್ ಬಾಸ್​ ಮನೆಯೊಳಗೆ ಬಾತ್ ರೂಮ್ ಕ್ಲೀನ್ ಮಾಡು ಅಂದ್ರು. ಅದನ್ನು ಮಾಡಿದೆ. ಟೈಯರ್ ಪಂಕ್ಚರ್ ಹಾಕು ಅಂದರೂ ಹಾಕುತ್ತೇನೆ. ಅದು ಕರ್ತವ್ಯ. ಕಾಂಗ್ರೆಸ್​ನವರು ನನ್ನನ್ನು ಕರೆದು ಬೊಮ್ಮಾಯಿಯ ಶಿಗ್ಗಾಂವಿ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲು ಎಂದರೆ ನಾನು ಸ್ಪರ್ಧಿಸುತ್ತೇನೆ. ನಾನು ಅಷ್ಟು ದೊಡ್ಡ ವ್ಯಕ್ತಿ ಅಲ್ಲ. ನನಗೆ ಹೈಕಮಾಂಡ್​ ಗೊತ್ತಿಲ್ಲ. ಕಾಂಗ್ರೆಸ್​ನವರು ನಿಂತುಕೊಳ್ಳಿ ಎಂದರೆ ರುಬ್ಬೋಣ ಹಾಕ್ಕೊಂಡು. ನಂಗೇನೂ ಸಮಸ್ಯೆ ಇಲ್ಲ’ ಎಂದು ಜಗದೀಶ್ ಅವರು ಹೇಳಿದ್ದಾರೆ.

‘ನಮ್ಮ ದೇಶದಲ್ಲಿ ಆದಿವಾಸಿ ಹೆಣ್ಣುಮಗಳನ್ನು ನಾವು ರಾಷ್ಟ್ರಪತಿ ಮಾಡಿದ್ದೇವೆ. ಒಬ್ಬ ಟೀ ಮಾರುವವನು ಪ್ರಧಾನಿ ಆಗಬಹುದಾದರೆ ನಾನೇಕೆ ಆಗಬಾರದು. ನಾನು ಸಿಎಂ ಆಗುತ್ತೇನೆ ಎಂದರೆ ತುಂಬಾ ಕಡಿಮೆ. ನಾನು ಪ್ರಧಾನ ಮಂತ್ರಿ ಆಗಬೇಕಾದವನು. ಆದರೆ ಏನೂ ಅಚ್ಚರಿ ಇಲ್ಲ. ಯಾಕೆಂದರೆ ನಾವು ಅದೇ ಹಾದಿಯಲ್ಲಿ ಇದ್ದೇವೆ. ನಮ್ಮ ಗುರಿ ತುಂಬ ದೊಡ್ಡದಾಗಿದೆ’ ಎಂದು ಜಗದೀಶ್ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನಡೆದಿದ್ದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಜಗದೀಶ್

‘ಬಡವರ ಮಕ್ಕಳು ವಿಧಾನಸೌಧಕ್ಕೆ ಹೋಗಬೇಕು. ಬಡವರ ಮಕ್ಕಳು ಎಂಎಲ್ಎ, ಎಂಪಿ, ಮಂತ್ರಿ ಆಗಬೇಕು. ಆಗ ದೇಶ ಉದ್ಧಾರ ಆಗತ್ತೆ. ಹೊಟ್ಟೆ ತುಂಬಿರುವವರು ಆದರೆ ದೇಶವನ್ನು ಹಾಳು ಮಾಡುತ್ತಾರೆ. ಬಡವಳ ಮಕ್ಕಳು ಅಧಿಕಾರಕ್ಕೆ ಬಂದರೆ ದೇಶ ಸಮೃದ್ಧಿ ಆಗುತ್ತೆ ಅಂತ ನಂಬಿರುವ ವ್ಯಕ್ತಿ ನಾನು. ನಾನೂ ಕೂಡ ಸಾಮಾನ್ಯರ ಮಗ. ಹಾಗಾಗಿ ನಾನು ಸಿಎಂ, ಪಿಎಂ ಆದರೆ ತಪ್ಪೇನಿದೆ? ಖಂಡಿತಾ ಆಗುತ್ತೇನೆ, ಬಿಡಲ್ಲ. ಈ 11 ವರ್ಷದಲ್ಲಿ ನನ್ನನ್ನು ರಾಜಕೀಯದಲ್ಲಿ ಬಚ್ಚ ಅಂತ ಅಂದುಕೊಂಡಿರುವವರ ಮುಂದೆ ನಾನು ಆಗೇ ಆಗುತ್ತೇನೆ’ ಎಂದು ಜಗದೀಶ್ ತಮ್ಮ ಗುರಿ ಬಗ್ಗೆ ಹೇಳಿಕೊಂಡಿದ್ದಾರೆ.

‘ನಾನು ಜನರ ಸೇವೆ ಮಾಡುತ್ತೇನೆ. ಯಾರದ್ದೋ ವಿರುದ್ಧ ತೊಡೆ ತಟ್ಟೋಕೆ, ತೀಟೆ ತೀರಿಸಿಕೊಳ್ಳೋಕೆ, ದ್ವೇಷ ಸಾಧಿಸೋಕೆ ನಾನು ಸಿಎಂ ಆಗಲ್ಲ. ಈಗ ನೋಡಿ.. ಬಿಗ್ ಬಾಸ್ ಮನೆಯಲ್ಲಿ ನಾನು ಕಲಾವಿದ ಅಲ್ಲ. ಆದರೂ ಕೂಡ ಆ ಜಾಗಕ್ಕೆ ನಾನು ನ್ಯಾಯ ಕೊಟ್ಟೆ. ಒಂದು ವೇಳೆ ನಾನು ನಾಳೆ ಎಂಎಲ್​ಎ, ಎಂಪಿ ಅಥವಾ ಮಿನಿಸ್ಟರ್ ಆದರೆ ಆ ಜಾಗಕ್ಕೆ ನಾನು ನ್ಯಾಯ ಕೊಡುತ್ತೇನೆ. ಮತ ಹಾಕಿ, ನಮ್ಮನ್ನು ನಂಬಿದ ಜನರಿಗೆ ನ್ಯಾಯ ಒದಗಿಸುತ್ತೇನೆ’ ಎಂದಿದ್ದಾರೆ ಜಗದೀಶ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.