ಇಡೀ ಕರ್ನಾಟಕದಲ್ಲಿ ಗಿಲ್ಲಿ ಕ್ರೇಜ್: ಎಲಿಮಿನೇಟ್ ಆಗಿ ಬಂದ ಅಭಿಷೇಕ್ ಹೇಳಿದ್ದೇನು?

ಬಿಗ್ ಬಾಸ್ ವೀಕ್ಷಕರಿಗೆ ಗಿಲ್ಲಿ ನಟ ಫೇವರಿಟ್ ಆಗಿದ್ದಾರೆ. ಅವರ ಬಗ್ಗೆಯೇ ಎಲ್ಲ ಕಡೆಗಳಲ್ಲಿ ಮಾತನಾಡುತ್ತಿದ್ದಾರೆ. ಇಡೀ ರಾಜ್ಯಾದ್ಯಂತ ಗಿಲ್ಲಿಗೆ ಇರುವ ಕ್ರೇಜ್ ಬಗ್ಗೆ ಎಲಿಮಿನೇಟ್ ಆಗಿರುವ ಅಭಿಷೇಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಗಿಲ್ಲಿ ಎನರ್ಜಿ ಖಾಲಿ ಆಗುವುದೇ ಇಲ್ಲ. ದಿನವಿಡೀ ಅವನಿಗೆ ಎನರ್ಜಿ ಇರುತ್ತದೆ’ ಎಂದು ಅಭಿಷೇಕ್ ಹೇಳಿದ್ದಾರೆ.

ಇಡೀ ಕರ್ನಾಟಕದಲ್ಲಿ ಗಿಲ್ಲಿ ಕ್ರೇಜ್: ಎಲಿಮಿನೇಟ್ ಆಗಿ ಬಂದ ಅಭಿಷೇಕ್ ಹೇಳಿದ್ದೇನು?
Gilli Nata, Abhishek
Edited By:

Updated on: Dec 08, 2025 | 5:23 PM

‘ಬಿಗ್ ಬಾಸ್ ಕನ್ನಡ ಸೀನಸ್ 12’ (BBK 12) ರಿಯಾಲಿಟಿ ಶೋನಿಂದ ಅಭಿಷೇಕ್ ಅವರು ಎಲಿಮಿನೇಟ್ ಆಗಿದ್ದಾರೆ. 10ನೇ ಸ್ಪರ್ಧಿಯಾಗಿ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದರು. ಕ್ಯಾಪ್ಟನ್ ಆಗಿಯೂ ಗಮನ ಸೆಳೆದಿದ್ದರು. ಆದರೆ ಅವರ ಆಟ ಈಗ ಅಂತ್ಯವಾಗಿದೆ. ಬಿಗ್ ಬಾಸ್ ಶೋನಿಂದ ಹೊರಬಂದ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯ ಒಳಗೆ ಇದ್ದಾಗ ಸ್ಪರ್ಧಿಗಳಿಗೆ ಹೊರಗಿನ ಪ್ರಪಂಚದ ಬಗ್ಗೆ ಮಾಹಿತಿ ಇರುವುದಿಲ್ಲ. ಹೊರಬಂದ ಬಳಿಕ ಯಾವ ಸ್ಪರ್ಧಿಯ ಕ್ರೇಜ್ ಎಷ್ಟು ಇದೆ ಎಂಬುದು ಗೊತ್ತಾಗುತ್ತದೆ. ಸದ್ಯ ಗಿಲ್ಲಿ ನಟ (Giili Nata) ಬಗ್ಗೆ ಇಡೀ ಕರ್ನಾಟಕದಲ್ಲಿ ಕ್ರೇಜ್ ಇದೆ. ಆ ಬಗ್ಗೆ ಅಭಿಷೇಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಗಿಲ್ಲಿ ಬಗ್ಗೆ ಇಷ್ಟೊಂದು ಕ್ರೇಜ್ ಇದೆ ಅಂತ ನನಗೆ ಇನ್ನೂ ಗೊತ್ತಿಲ್ಲ. ನಿನ್ನೆ ರಾತ್ರಿಯಷ್ಟೇ ಹೊರಗೆ ಬಂದಿದ್ದೇನೆ. ಹೆಚ್ಚು ಸೋಶಿಯಲ್ ಮೀಡಿಯಾ ನೋಡಲು ಆಗಿಲ್ಲ. ಅವನ ಬಗ್ಗೆ ಅಷ್ಟೊಂದು ಕ್ರೇಜ್ ಇದೆ ಎಂದರೆ ನನಗೆ ಖುಷಿ. ಅದು ಒಳ್ಳೆಯ ವಿಷಯ. ಯಾಕೆಂದರೆ, ಅವರು ನಮ್ಮ ಇಡೀ ಮನೆಗೆ ಎನರ್ಜಿ ತಂದುಕೊಡುತ್ತಿದ್ದ’ ಎಂದು ಅಭಿಷೇಕ್ ಅವರು ಹೇಳಿದ್ದಾರೆ.

‘ಅವನಿಂದಾಗಿ ಎಂದೂ ಕೂಡ ಮನೆ ಡಲ್ ಆಗಿಲ್ಲ. ಎಲ್ಲರನ್ನೂ ಅವನು ನಗಿಸುತ್ತಿದ್ದ. ಅವನ ಬಗ್ಗೆ ಅಷ್ಟು ಕ್ರೇಜ್ ಇದೆ ಎಂದರೆ ನಾನು ಖುಷಿಪಡುತ್ತೇನೆ. ಅವನಿಗೆ ಒಳ್ಳೆಯದಾಗಲಿ’ ಎಂದು ಅಭಿಷೇಕ್ ಅವರು ಹೇಳಿದ್ದಾರೆ. ಗಿಲ್ಲಿ ಬಗ್ಗೆ ಎಷ್ಟು ಕ್ರೇಜ್ ಇದೆ ಎಂಬುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜನರು ಮಾಡುವ ಕಮೆಂಟ್​​ಗಳೇ ಸಾಕ್ಷಿ ಆಗಿವೆ. ದಿನದಿಂದ ದಿನಕ್ಕೆ ಗಿಲ್ಲಿ ಕ್ರೇಜ್ ಹೆಚ್ಚುತ್ತಲೇ ಇದೆ.

ಗಿಲ್ಲಿ ಅವರು ಇತರೆ ಸ್ಪರ್ಧಿಗಳನ್ನು ಅಪಹಾಸ್ಯ ಮಾಡುತ್ತಾರೆ ಎಂಬ ಆರೋಪ ಕೂಡ ಇದೆ. ಆ ಗುಣವನ್ನು ಬಿಗ್ ಬಾಸ್ ಮನೆಯಲ್ಲಿ ಹಲವರು ವಿರೋಧಿಸಿದ್ದಾರೆ. ಜಾಹ್ನವಿ, ಅಶ್ವಿನಿ ಗೌಡ, ರಘು, ಧ್ರುವಂತ್ ಮುಂತಾದವರು ಈ ಮಾತನ್ನು ಪದೇ ಪದೇ ಹೇಳಿದ್ದಾರೆ. ಆ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ‘ದಿ ಡೆವಿಲ್’ ಸಿನಿಮಾದಲ್ಲೂ ಗಿಲ್ಲಿ ಹವಾ: ಕಾಕ್ರೋಚ್ ಸುಧಿ ಹೇಳೋದೇನು?

‘ಬೇರೆ ಯಾರಿಂದಲೂ ಗಿಲ್ಲಿ ಮೈಲೇಜ್ ತೆಗೆದುಕೊಂಡಿಲ್ಲ. ಅವನು ಹಾಸ್ಯದಿಂದಲೇ ಹೈಲೈಟ್ ಆಗಿದ್ದಾನೆ. ಅಲ್ಲಿ ಒಂದು ಕೊಡುಕೊಳ್ಳುವಿಕೆ ಇರುತ್ತದೆ. ನನ್ನನ್ನಾಗಲಿ, ಧನುಷ್​ನಾಗಲಿ ಗಿಲ್ಲಿ ಜಾಸ್ತಿ ಹೀಯಾಳಿಸಿಲ್ಲ. ಆರಂಭದಲ್ಲಿ ಕಾಮಿಡಿ ಮಾಡಿದಾಗ ಪಾಸಿಟಿವ್ ಆಗಿ ತೆಗೆದುಕೊಂಡರೆ ನಂತರ ಅವನು ಅದನ್ನೇ ಮುಂದುವರಿಸುತ್ತಾನೆ. ಈ ಕಾಮಿಡಿ ನಮಗೆ ಇಷ್ಟ ಇಲ್ಲ ಅಂತ ಇನ್ನುಳಿದವರು ಮೊದಲೇ ಹೇಳಿದ್ದಿದ್ದರೆ ಅವನು ಅದನ್ನು ಮುಂದುವರಿಸುತ್ತಿರಲಿಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ’ ಎಂದಿದ್ದಾರೆ ಅಭಿಷೇಕ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.