
‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ರಿಯಾಲಿಟಿ ಶೋ ಆರಂಭಕ್ಕೂ ಮುನ್ನ ಹಲವು ವಿಘ್ನಗಳು ಎದುರಾಗುತ್ತಿವೆ. ಸಂಬಂಧಿಸಿದ ಇಲಾಖೆಗಳಿಂದ ಸೂಕ್ತ ಅನುಮತಿ ಪಡೆಯದ ಕಾರಣ ಕಳೆದ ವರ್ಷ ಶೋ ಅರ್ಧಕ್ಕೆ ಸ್ಥಗಿತ ಆಗಿತ್ತು. ಈ ವರ್ಷ ಕೂಡ ಅದೇ ರೀತಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಬಿಗ್ ಬಾಸ್ (Bigg Boss Kannada) ಶೋ ಅನುಮತಿಗಾಗಿ ಯಾವುದೇ ಅರ್ಜಿ ಬಂದಿಲ್ಲ ಎಂದು ಬೆಂಗಳೂರು ದಕ್ಷಿಣ ಡಿಸಿ ಯಶವಂತ್ ಗುರುಕರ್ ಅವರು ಹೇಳಿಕೆ ನೀಡಿದ್ದಾರೆ. ಆದ್ದರಿಂದ ನಿಗದಿತ ಸಮಯದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 13’ (BBK 13) ಶೋ ಆರಂಭ ಆಗುತ್ತಾ ಎಂಬ ಅನುಮಾನ ಶುರುವಾಗಿದೆ.
ಜಾಲಿವುಡ್ನವರು ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕನ್ಸೆಂಟ್ ಫಾರ್ ಎಸ್ಟಾಬ್ಲಿಷ್ಮೆಂಟ್ಗೆ ಅನುಮತಿ ಪಡೆದಿದ್ದಾರೆ. ಅಪ್ರೂವಲ್ ಆಗುವುದಕ್ಕೆ ಬೋರ್ಡ್ನಲ್ಲಿ ಪೆಂಡಿಂಗ್ ಇದೆ. ಪರಿಸರ ಇಲಾಖೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚನೆಯಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಶೋ ನಡೆಸಲು ಅನುಮತಿಗೆ ಯಾವುದೇ ಅರ್ಜಿ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
‘ಜಿಲ್ಲಾಡಳಿತಕ್ಕೆ ಯಾವುದೇ ರೀತಿಯ ಅಪ್ಲಿಕೇಷನ್ ಬಂದಿಲ್ಲ. ಅರ್ಜಿ ಬಂದ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ’ ಎಂದು ಯಶವಂತ್ ಗುರುಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ಬಿಗ್ಬಾಸ್ ರಿಯಾಲಿಟಿ ಶೋ ನಡೆಸಲು ಅನುಮತಿ ಕಡ್ಡಾಯ. ಅರ್ಜಿಯಲ್ಲಿ ನೀಡಿರುವ ಮಾಹಿತಿಯ ಆಧಾರದಲ್ಲಿ ಪರಿಶೀಲನೆ ಮಾಡುತ್ತೇವೆ. ಅರ್ಜಿಯಲ್ಲಿರುವ ಅಂಶದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಬಳಿಕ ಅನುಮತಿ ನೀಡುವ ಕುರಿತು ತೀರ್ಮಾನ ಮಾಡುತ್ತೇವೆ. ಬಿಗ್ಬಾಸ್ ಶೋಗೆ ಅವಕಾಶ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ಗೆ ಎಂಟ್ರಿ ಕೊಡೋರು ಇವರೇನಾ? ಹರಿದಾಡ್ತಿದೆ ಸೀರಿಯಲ್ ಕಲಾವಿದರ ಪಟ್ಟಿ
‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಸೆಪ್ಟೆಂಬರ್ 6ರಂದು ಶೋ ಆರಂಭಿಸುವುದಾಗಿ ‘ಕಲರ್ಸ್ ವಾಹಿನಿ’ ಈಗಾಗಲೇ ಘೋಷಣೆ ಮಾಡಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ವರ್ಷನ್ ಬಿಗ್ ಬಾಸ್ ಕೂಡ ಅದೇ ದಿನ ಆರಂಭ ಆಗಬೇಕಿದೆ. ಆದರೆ ಕನ್ನಡದ ಬಿಗ್ ಬಾಸ್ ಆಯೋಜಕರು ಅನುಮತಿ ಪಡೆಯದೇ ಇರುವುದು ಈಗ ತಿಳಿದುಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.