ಬಿಗ್​ಬಾಸ್ ಮನೆಯಲ್ಲಿ ಕುಸ್ತಿ ಅಖಾಡ: ಕೈ-ಕೈ ಮಿಲಾಯಿಸಿದ ಸ್ಪರ್ಧಿಗಳು, ಗೆದ್ದಿದ್ದು ಯಾರು?

Bigg Boss 10: ಬಿಗ್​ಬಾಸ್ ಸ್ಪರ್ಧಿಗಳು ಟಾಸ್ಕ್​ ನಿರ್ವಹಿಸುವ ವಿಚಾರವಾಗಿ ಪರಸ್ಪರ ಕೈ-ಕೈ ಮಿಲಾಯಿಸುವಷ್ಟು ದ್ವೇಷ-ಸಿಟ್ಟು ಇಟ್ಟುಕೊಂಡಿರುವ ಸಂದರ್ಭದಲ್ಲಿ ಸ್ವತಃ ಬಿಗ್​ಬಾಸ್, ಸ್ಪರ್ಧಿಗಳಿಗೆ ಕುಸ್ತಿ ಪಂದ್ಯಾವಳಿಯನ್ನು ಆಯೋಜನೆ ಮಾಡಿದರು. ಅಂತಿಮವಾಗಿ ಗೆದ್ದವರು ಯಾರು?

ಬಿಗ್​ಬಾಸ್ ಮನೆಯಲ್ಲಿ ಕುಸ್ತಿ ಅಖಾಡ: ಕೈ-ಕೈ ಮಿಲಾಯಿಸಿದ ಸ್ಪರ್ಧಿಗಳು, ಗೆದ್ದಿದ್ದು ಯಾರು?
ಕುಸ್ತಿ

Updated on: Nov 02, 2023 | 11:17 PM

ಹಳ್ಳಿ ಟಾಸ್ಕ್​ ಪ್ರಾರಂಭವಾದಾಗಿನಿಂದಲೂ ಬಿಗ್​ಬಾಸ್ (Bigg Boss) ಮನೆ ರಣಾಂಗಣವಾಗಿ ಮಾರ್ಪಟ್ಟಿತ್ತು. ಸ್ಪರ್ಧಿಗಳು ಪರಸ್ಪರ ಕಿತ್ತಾಡುತ್ತಾ, ಕೂಗಾಡುತ್ತಾ, ಪರಸ್ಪರ ಬೈದಾಡುತ್ತಾ ಟಾಸ್ಕ್​ಗಳನ್ನು ಆಡಿದರು, ಹಾಳು ಸಹ ಮಾಡಿದರು. ವಿಶೇಷವಾಗಿ ವಿನಯ್​ರ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಟೀಕೆ ವ್ಯಕ್ತವಾಗಿತ್ತು. ಸ್ಪರ್ಧಿಗಳು ಪರಸ್ಪರ ಕೈ-ಕೈ ಮಿಲಾಯಿಸುವಷ್ಟು ದ್ವೇಷ-ಸಿಟ್ಟು ಇಟ್ಟುಕೊಂಡಿರುವ ಸಂದರ್ಭದಲ್ಲಿ ಸ್ವತಃ ಬಿಗ್​ಬಾಸ್, ಸ್ಪರ್ಧಿಗಳಿಗೆ ಕುಸ್ತಿ ಪಂದ್ಯಾವಳಿಯನ್ನು ಆಯೋಜನೆ ಮಾಡಿದರು.

ಹಳ್ಳಿ ಟಾಸ್ಕ್​ನ ಕೊನೆಯ ಸ್ಪರ್ಧೆಯಾಗಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ರಾಜ್ಯ, ರಾಷ್ಟ್ರೀಯ ಮಟ್ಟದ ಇಬ್ಬರು ಕುಸ್ತಿ ಸ್ಪರ್ಧಿಗಳು ಬಿಗ್​ಬಾಸ್ ಮನೆಗೆ ಆಗಮಿಸಿ ಪಂದ್ಯಾವಳಿಯನ್ನು ನಡೆಸಿಕೊಟ್ಟರು. ಮೊದಲೇ ನಿಯಮಗಳನ್ನು ಸೂಕ್ತವಾಗಿ ವಿವರಿಸಿ, ಅದಾಗಲೇ ಸಿದ್ಧಪಡಿಸಿದ ಕುಸ್ತಿ ಅಖಾಡದಲ್ಲಿ ಸ್ಪರ್ಧಿಗಳನ್ನು ಕುಸ್ತಿ ಆಡಲು ಬಿಡಲಾಯ್ತು. ಮೊದಲಿಗೆ ವಿನಯ್ ಹಾಗೂ ಮೈಖಲ್ ಪರಸ್ಪರ ಸ್ಪರ್ಧಿಸಿದರು. ಎರಡು ಸುತ್ತಿನಲ್ಲಿಯೂ ವಿನಯ್ ಗೆಲುವು ಸಾಧಿಸಿದರು. ಗೆದ್ದ ಬಳಿಕ ಎದುರಾಳಿ ತಂಡದ ಎದುರು ಹೋಗಿ ತೊಡೆತಟ್ಟಿದರು.

ಅದಾದ ಬಳಿಕ ಸಂಗೀತಾ ಮತ್ತು ನೀತು ಪರಸ್ಪರ ಸ್ಪರ್ಧೆ ಮಾಡಿದರು. ಅದರಲ್ಲಿ ಅಚ್ಚರಿಯ ರೀತಿಯಲ್ಲಿ ಸಂಗೀತಾ ಗೆಲುವು ಸಾಧಿಸಿದರು. ಅದಾದ ಬಳಿಕ ಕಾರ್ತಿಕ್ ಹಾಗೂ ಸ್ನೇಹಿತ್ ನಡುವೆ ಸ್ಪರ್ಧೆ ನಡೆಯಿತು ಆ ಸ್ಪರ್ಧೆಯಲ್ಲಿ ಸಹ ಅಚ್ಚರಿಯ ರೀತಿ ಸ್ನೇಹಿತ್ ಗೆಲುವು ಸಾಧಿಸಿದರು. ಕಾರ್ತಿಕ್ ಹೆಚ್ಚೇನೂ ಪ್ರಯತ್ನವೇ ಮಾಡದೆ ಸೋತರು. ಅಲ್ಲಿಗೆ ಕುಸ್ತಿ ಪಂದ್ಯಾವಳಿಯಲ್ಲಿ ಅಂತಿಮ ಜಯ ವಿನಯ್ ತಂಡದವರದ್ದಾಯಿತು.

ಇದನ್ನೂ ಓದಿ:ಬೈಗುಳ, ನೂಕಾಟ-ತಳ್ಳಾಟ: ರಣಾಂಗಣವಾದ ಬಿಗ್​ಬಾಸ್ ಮನೆ

ಅಂತಿಮವಾಗಿ ಈ ವಾರದ ವಿಜೇತರನ್ನು ಘೋಷಿಸಿದ ಬಿಗ್​ಬಾಸ್, ಮೊದಲ ಟಾಸ್ಕ್​ನಲ್ಲಿ ಎರಡೂ ತಂಡಗಳು ಗೆಲ್ಲಲಿಲ್ಲ. ಎರಡನೇ ಟಾಸ್ಕ್ ಅನ್ನು ರದ್ದು ಮಾಡಲಾಯ್ತು. ಮೂರನೇ ಟಾಸ್ಕ್​ ನಲ್ಲಿ ವಿನಯ್ ತಂಡ ಗೆದ್ದಿದ್ದರಿಂದ ಈ ವಾರದ ವಿಜೇತರು ಅವರೇ ಆಗಿದ್ದು, ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಆಡಲು ಅವರು ಅರ್ಹರು ಎಂದು ಘೋಷಿಸಿದರು. ಜೊತೆಗೆ ತುಕಾಲಿ ಸಂತು, ಗುಟ್ಟಾಗಿ ವಿನಯ್​ ತಂಡಕ್ಕೆ ಬೆಂಬಲಿಸಿದ್ದರಿಂದ ಅವರಿಗೂ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಆಡುವ ಅವಕಾಶ ದೊರಕಿತು.

ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಟೈರು ಗುಡುಗಿಸುವ ಸರಳ ಆಟದಲ್ಲಿ ಅಂತಿಮವಾಗಿ ವಿನಯ್ ಹಾಗೂ ತುಕಾಲಿ ಸಂತು ಉಳಿದರು. ತುಕಾಲಿ ಅವರಿಗೆ ವಿನಯ್ ಅವರನ್ನು ಹೊರಗಿಡುವ ಅವಕಾಶವಿದ್ದರೂ ಸಹ ಅವರು ಹೊರಗೆ ಇಡಲಿಲ್ಲ. ಇದು ಮನೆಯಲ್ಲಿ ಕೆಲ ಸದಸ್ಯರ ಅಸಮಾಧಾನಕ್ಕೆ ಕಾರಣವಾಯ್ತು. ಕ್ಯಾಪ್ಟನ್ಸಿ ಟಾಸ್ಕ್​ ನಾಳೆ ನಡೆಯಲಿದ್ದು, ಈ ಬಾರಿ ಬಿಗ್​ಬಾಸ್ ಮನೆ ಕ್ಯಾಪ್ಟನ್ ಯಾರಾಗಲಿದ್ದಾರೆ ಎಂಬುದು ನಾಳೆ ತಿಳಿಯಲಿದೆ. ಜೊತೆಗೆ ಈ ವಾರದ ಕಳಪೆ ಯಾರು ಎಂಬುದು ಸಹ ನಾಳೆಯೇ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us