50 ಲಕ್ಷ ರೂಪಾಯಿ ಇನ್ನೂ ಬಂದಿಲ್ಲ: ಅಸಲಿ ವಿಷಯ ತಿಳಿಸಿದ ಬಿಗ್ ಬಾಸ್ ವಿನ್ನರ್

ಬಿಗ್ ಬಾಸ್ ವಿನ್ನರ್ ಗೌರವ್ ಖನ್ನಾ ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಅದರ ಜೊತೆಗೆ ಕಾರು ಹಾಗೂ ಇತರೆ ಕೂಪನ್​ಗಳು ಕೂಡ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಇನ್ನೂ ಕೂಡ ಅವರಿಗೆ ಬಹುಮಾನದ ಹಣ ಸಿಕ್ಕಿಲ್ಲ. ಆ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

50 ಲಕ್ಷ ರೂಪಾಯಿ ಇನ್ನೂ ಬಂದಿಲ್ಲ: ಅಸಲಿ ವಿಷಯ ತಿಳಿಸಿದ ಬಿಗ್ ಬಾಸ್ ವಿನ್ನರ್
Gaurav Khanna

Updated on: Mar 11, 2026 | 8:39 PM

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಹಿಂದಿ ಸೀಸನ್ 19’ರ (Bigg Boss 19) ಟ್ರೋಫಿ ಮುಡಿಗೇರಿಸಿಕೊಂಡ ನಟ ಗೌರವ್ ಖನ್ನಾ ಈಗ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆದ ಅದ್ದೂರಿ ಫಿನಾಲೆಯಲ್ಲಿ ಗೌರವ್ ವಿನ್ನರ್ ಎಂದು ಸಲ್ಮಾನ್ ಖಾನ್ ಘೋಷಿಸಿದ್ದರು. ಆದರೆ ಮೂರು ತಿಂಗಳು ಕಳೆದರೂ ಕೂಡ ತಮಗೆ ಇನ್ನೂ ಶೋನ ಬಹುಮಾನದ ಮೊತ್ತ ತಲುಪಿಲ್ಲ ಎಂಬ ವಿಷಯವನ್ನು ಗೌರವ್ ಖನ್ನಾ (Gaurav Khanna) ಬಹಿರಂಗಪಡಿಸಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಸಹ ಅವರು ತಿಳಿಸಿದ್ದಾರೆ.

ಇತ್ತೀಚಿನ ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಗೌರವ್ ಖನ್ನಾ ಉತ್ತರಿಸಿದರು. ‘ನಿಮಗೆ ಬಿಗ್ ಬಾಸ್‌ನಲ್ಲಿ ಭರವಸೆ ನೀಡಿದ ನಗದು ಹಣ, ಕಾರು ಮತ್ತು ಕೂಪನ್‌ಗಳು ಸಿಕ್ಕಿವೆಯೇ’ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದಕ್ಕೆ ಸಮಯ ಬೇಕಾಗುತ್ತದೆ. ನನಗೆ ಇನ್ನೂ ಹಣ ಬಂದಿಲ್ಲ. ಆದರೆ ಅದು ಖಂಡಿತಾ ಬರುತ್ತದೆ ಎಂಬ ನಂಬಿಕೆ ನನಗಿದೆ, ಏಕೆಂದರೆ ಅದಕ್ಕೊಂದು ಪ್ರಕ್ರಿಯೆ ಇರುತ್ತದೆ’ ಎಂದು ಅವರು ಹೇಳಿದ್ದಾರೆ.

ಕಂಪನಿಯ ಆಂತರಿಕ ಲೆಕ್ಕಾಚಾರ ಮತ್ತು ಇತರ ಪ್ರಕ್ರಿಯೆಗಳಿಂದಾಗಿ ಬಹುಮಾನದ ಹಣ ಕೈ ಸೇರಲು ಸುಮಾರು 1ರಿಂದ 2 ತಿಂಗಳು ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ. ‘ನಾನು ಟಿವಿ ಕ್ಷೇತ್ರದವನು. ಇಲ್ಲಿ ಇಂತಹ ವಿಳಂಬಗಳು ಸಹಜ. ಹಣ ಬಂದೇ ಬರುತ್ತದೆ’ ಎಂದು ಗೌರವ್ ಖನ್ನಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ.

ಬಿಗ್ ಬಾಸ್ ಗೆದ್ದ ನಂತರ ಜೀವನದಲ್ಲಿ ಏನು ಬದಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಗೌರವ್, ‘ಈಗ ಪ್ರತಿ ದಿನ ಕಾನ್ಪುರದಲ್ಲಿರುವ ನನ್ನ ಮನೆಗೆ ಸುಮಾರು 50ರಿಂದ 60 ಜನರು ಭೇಟಿ ನೀಡುತ್ತಿದ್ದಾರೆ. ಜನರು ನನ್ನನ್ನು ಗುರುತಿಸುತ್ತಿರುವುದು ಖುಷಿ ನೀಡಿದೆ’ ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗೌರವ್ ತೋರಿದ ಸಂಯಮದ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ತಾವು ಈ ಹಿಂದೆ ಮಾಡಿದ ಎಲ್ಲಾ ಶೋಗಳಿಗಿಂತಲೂ ಬಿಗ್ ಬಾಸ್ ಮೂಲಕ ಸಿಕ್ಕಿರುವ ಖ್ಯಾತಿ ಮತ್ತು ಪ್ರೀತಿ ದೊಡ್ಡದು ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಹೋಸ್ಟ್ ಆದ ಸೌರವ್ ಗಂಗೂಲಿ; ಹೊಸ ಕ್ಷೇತ್ರಕ್ಕೆ ಕಾಲಿಟ್ಟ ದಾದ

ಕನ್ನಡದಲ್ಲಿ ಈವರೆಗೂ ಬಿಗ್ ಬಾಸ್ ಕಾರ್ಯಕ್ರಮದ 12 ಸೀಸನ್​​ಗಳು ನಡೆದಿವೆ. 12ನೇ ಸೀಸನ್​​ನಲ್ಲಿ ಗಿಲ್ಲಿ ನಟ ಅವರು ವಿನ್ನರ್ ಆದರು. ಅವರು ಕೂಡ ಹಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗುತ್ತಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಮುಂದಿನ ಸೀಸನ್​ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us