
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಒಂದು ವಾರ ಪೂರ್ಣಗೊಳ್ಳುತ್ತಿದೆ. ಈ ಒಂದು ವಾರದಲ್ಲಿ ಎಲ್ಲ ಸ್ಪರ್ಧಿಗಳ ಬಲಾಬಲ ಏನು ಎಂಬುದರ ಝಲಕ್ ಸಿಕ್ಕಿದೆ. ಅಗ್ನಿಪರೀಕ್ಷೆ ಮೂಲಕ ಬಂದಿರುವ ಕಾಮನರ್ ಮತ್ತು ಬಣ್ಣದ ಲೋಕದಿಂದ ಬಂದಿರುವ ಸೆಲೆಬ್ರಿಟಿಗಳ ನಡುವೆ ಒಂದು ಬಗೆಯ ಪೈಪೋಟಿ ನಿರ್ಮಾಣ ಆಗಿದೆ. ಕಾಮನರ್ ಸ್ಪರ್ಧಿಗಳಾದ ಮಂಜ ಮತ್ತು ಕಿರಣ್ ಶಾಸ್ತ್ರಿ ಟಾಸ್ಕ್ನಲ್ಲಿ ಹಿಂದೆ ಬಿದ್ದಿದ್ದಾರೆ. ಆದರೆ ಬರೀ ಮಾತಿನಲ್ಲಿ ಬಡಾಯಿ ಕೊಚ್ಚಿಕೊಂಡು ಇನ್ನುಳಿದ ಸ್ಪರ್ಧಿಗಳನ್ನು ಕೂಡ ಅಪಾಯಕ್ಕೆ ತಳ್ಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈಗ ಎರಡು ತಂಡಗಳಾಗಿವೆ. ವಿಮಾನದಲ್ಲಿ ಇರುವವರು ಒಂದು ತಂಡವಾದರೆ, ಮನೆಯೊಳಗೆ ಕಾಲಿಡುವ ಅರ್ಹತೆ ಪಡೆದವರು ಇನ್ನೊಂದು ತಂಡದಲ್ಲಿ ಇದ್ದಾರೆ. ವಿಮಾನದಲ್ಲಿ ಇರುವವರೆಲ್ಲ ನಾಮಿನೇಟ್ ಆಗಿದ್ದಾರೆ. ಆದರೆ ಅವರ ಪೈಕಿ ಇಬ್ಬರಿಗೆ ಸೇಫ್ ಆಗುವ ಸಾಧ್ಯತೆ ಇತ್ತು. ಅದಕ್ಕಾಗಿ ವಿಮಾನದ ತಂಡದವರು ಟಾಸ್ಕ್ ಗೆಲ್ಲಬೇಕಿತ್ತು.
ಟಾಸ್ಕ್ ಶುರು ಆಗುವುದಕ್ಕೂ ಮುನ್ನ ಯಾರು ಟಾಸ್ಕ್ ಆಡಬೇಕು ಎಂಬುದನ್ನು ನಿರ್ಧರಿಸಲಾಗುತ್ತಿತ್ತು. ‘ನಾನೇ ಟಾಸ್ಕ್ ಆಡುತ್ತೇನೆ’ ಎಂದು ಕಿರಣ್ ಶಾಸ್ತ್ರಿ ಮುಂದೆ ಬಂದರು. ಆದರೆ ಅವರ ಬದಲಿಗೆ ಬೇರೆಯವರು ಆಡಲಿ ಎಂಬುದು ಇನ್ನುಳಿದ ಸ್ಪರ್ಧಿಗಳ ಅಭಿಪ್ರಾಯ ಆಗಿತ್ತು. ಆದರೂ ಕೂಡ ‘ನನಗೆ ಅವಕಾಶ ಬೇಕು’ ಎಂದು ಕಿರಣ್ ಶಾಸ್ತ್ರಿ ಅವರು ಜೋರು ಧ್ವನಿಯಲ್ಲಿ ಮಾತನಾಡಿ ಅವಕಾಶ ಗಿಟ್ಟಿಸಿಕೊಂಡರು.
ವಿಮಾನದ ತಂಡದವರ ಪರವಾಗಿ ಕಿರಣ್ ಶಾಸ್ತ್ರಿ ಮತ್ತು ಮಂಜ ಆಡಲಿ ಎಂಬುದು ನಿರ್ಧಾರ ಆಯಿತು. ಆದರೆ ಅಂತಿಮವಾಗಿ ಆ ಟಾಸ್ಕ್ನಲ್ಲಿ ಅವರಿಬ್ಬರು ಸೋಲು ಅನುಭವಿಸಿದರು. ಇದರಿಂದಾಗಿ ವಿಮಾನದ ತಂಡದ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆದರು. ಒಟ್ಟು 9 ಸ್ಪರ್ಧಿಗಳ ಮೇಲೆ ಈಗ ಎಲಿಮಿನೇಷನ್ ಕತ್ತಿ ತೂಗುತ್ತಿದೆ. ಯಾರು ಔಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ಮಂಜನ ಮಾತಿನಿಂದ ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿರಿಕಿರಿ; ಕಣ್ಣೀರು ಹಾಕಿದ ಸೌಂದರ್ಯಾ
ಮಂಜ, ಕಿರಣ್ ಶಾಸ್ತ್ರಿ, ವೈಷ್ಣವಿ, ಪ್ರಥಮಾ ಪ್ರಸಾದ್, ಓಂ ಪ್ರಕಾಶ್ ರಾವ್, ಧನುಷ್, ಸೌಂದರ್ಯಾ ಶೆಟ್ಟಿ, ಆಸಿಯಾ ಹಾಗೂ ಅವಿನಾಶ್ ಅವರು ನಾಮಿನೇಟ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಕೇವಲ ಮಾತಿನಲ್ಲಿ ಬಡಾಯಿ ಕೊಚ್ಚಿಕೊಂಡರೆ ಉಪಯೋಗ ಇಲ್ಲ. ಟಾಸ್ಕ್ ಆಡಿ ಸಾಮರ್ಥ್ಯ ಪ್ರದರ್ಶಿಸಿದರೆ ಮಾತ್ರ ಬಿಗ್ ಬಾಸ್ ಪ್ರಯಾಣ ಮುಂದುವರಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.