
ಬಿಗ್ಬಾಸ್ ಮನೆಯಲ್ಲಿ ಮಂಜನ ಉಪಟಳ ಬಹಳ ಹೆಚ್ಚಾಗಿದೆ. ಸಾಮಾನ್ಯರ ಖೋಟಾದಿಂದ ಒಳಗೆ ಹೋಗಿರುವ ಮಂಜ, ಬಿಗ್ಬಾಸ್ ಮನೆಯಲ್ಲಿ ಆಟ ಆಡುವ ಬದಲು ಒಂದು ರೀತಿ ರೌಡಿಸಂ ಮಾಡುತ್ತಿರುವಂತೆ ತೋರುತ್ತಿದೆ. ತಮ್ಮ ಹರಿತವಾದ ನಾಲಗೆ ಬಳಸಿ ಸಿಕ್ಕ-ಸಿಕ್ಕವರನ್ನೆಲ್ಲ ಬೈಯ್ಯುತ್ತಾ, ಹೀಗಳೆಯುತ್ತಾ, ವ್ಯಂಗ್ಯ ಮಾಡುತ್ತಾ, ಬಾಡಿ ಶೇಮಿಂಗ್, ಕ್ಯಾರೆಕ್ಟರ್ ಅಸಾಸಿನೇಷನ್ ಮಾಡುತ್ತಾ ಓಡಾಡುತ್ತಾ ಇದ್ದಾರೆ. ಇದೇ ಕಾರಣಕ್ಕೆ ನಿನ್ನೆ (ಶನಿವಾರದ) ಮಂಜನಿಗೆ ಹಿಗ್ಗಾ ಮುಗ್ಗ ಕ್ಲಾಸ್ ತೆಗೆದುಕೊಂಡಿದ್ದರು ಸುದೀಪ್. ಸಾಮ, ದಾನ, ಭೇದ, ದಂಡ ಎಲ್ಲವನ್ನೂ ಒಮ್ಮೆಲೆ ಪ್ರಯೋಗ ಮಾಡಿದ್ದರು. ಅಷ್ಟೆಲ್ಲ ಆದರೂ ಸಹ ಮಂಜನಿಗೆ ಬುದ್ಧಿ ಬಂದಿಲ್ಲ.
ಸುದೀಪ್ ಅವರು ಎಪಿಸೋಡ್ ಮುಗಿಸಿ ಅತ್ತ ಹೋಗುತ್ತಿದ್ದಂತೆ ಇತ್ತ ಮಂಜ, ಸುದೀಪ್ ಹೇಳಿದ ಎಲ್ಲ ಮಾತನ್ನೂ ಮರೆತು ಮತ್ತೆ ತನ್ನ ರೌಡಿತನ ಮೆರೆದಿದ್ದಾನೆ. ಸುದೀಪ್ ಹೋದ ಕೂಡಲೇ ಮನೆಯವರೆಲ್ಲರೂ ಊಟ ಮಾಡಿದ್ದಾರೆ. ಈ ವೇಳೆ ಮಂಜ ತುಸು ತಡವಾಗಿ ಊಟಕ್ಕೆ ಬಂದಿದ್ದಾನೆ, ಅಷ್ಟರಲ್ಲಾಗಲೆ ಚಿಕನ್ ಪೀಸ್ಗಳು ಬೇರೆಯವರು ತಿಂದಿದ್ದರಿಂದ ಮಂಜನಿಗೆ ತುಸು ಕಡಿಮೆ ಸಿಕ್ಕಿದೆ. ಇದನ್ನೇ ಕಾರಣ ಮಾಡಿಕೊಂಡು ಮನೆಯ ಮಹಿಳೆಯರ ಮೇಲೆ ಜಗಳ ಮಾಡಿದ್ದಾನೆ.
ಎಲ್ಲರ ಊಟ ಮುಗಿದ ಮೇಲೆ ಮನೆಯ ಕ್ಯಾಪ್ಟನ್ ಸಂಗೀತಾ ತಮಗೆ ಊಟ ಸಿಗದೆ ನಿನ್ನೆಯ ಅನ್ನ ಹಾಕಿಕೊಂಡು ಊಟ ಮಾಡುತ್ತಿದ್ದಾಗ ಅವರ ಬಳಿ ತನಗೆ ಚಿಕನ್ ಸಿಗಲಿಲ್ಲ ಎಂದು ಜಗಳಕ್ಕೆ ನಿಂತ ಮಂಜ, ‘ಕ್ಯಾಪ್ಟನ್ ಜವಾಬ್ದಾರಿಯೇ ನಿನಗೆ ಗೊತ್ತಿಲ್ಲ’ ಎಂದು ಮಾತು ಆರಂಭಿಸಿದ ಮಂಜ, ನಿಮ್ಮ ಜವಾಬ್ದಾರಿ ನಿಭಾಯಿಸಲು ಬರಲ್ಲ, ಕ್ಯಾಪ್ಟನ್ ಜವಾಬ್ದಾರಿ ನಿರ್ವಹಿಸಲು ಬರಲ್ಲ, ಮನೆಯ ಬಗ್ಗೆ ಜವಾಬ್ದಾರಿ ಇಲ್ಲ ಎಂದು ಜಗಳ ಮಾಡಿದ. ಅದಾದ ಬಳಿಕ ಅಲ್ಲಿಯೇ ಇದ್ದ ಕಾವ್ಯಾ ಮೇಲೆ ಸುಖಾ ಸುಮ್ಮನೆ ನಾಲಗೆ ಹರಿಬಿಟ್ಟ, ಅವರ ಮುಖ, ದೇಹಾಕಾರದ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ. ‘ನಿನ್ನದು ನೋಡಲು ಯೋಗ್ಯವಾದ ಮುಖ ಅಲ್ಲ’ ಎಂದೆಲ್ಲ ಕೆಟ್ಟದಾಗಿ ಮಾತನಾಡಿದ.
ಇದನ್ನೂ ಓದಿ:Bigg Boss Kannada: ಒಡೆದ ಕನ್ನಡಿ, ಮನೆಯಿಂದ ಹೊರಬಂದ ಇಬ್ಬರು
ಇದನ್ನು ನೋಡದೇ ವೈಷ್ಣವಿ, ಮಂಜನ ಮಾತಿಗೆ ಬ್ರೇಕ್ ಹಾಕಲು ಯತ್ನಿಸಿದಾಗ ಮಂಜ, ವೈಷ್ಣವಿಯ ಮೇಲೂ ಜಗಳ ಮಾಡಿದ. ವೈಷ್ಣವಿಗಂತೂ ಹುಚ್ಚಿ, ನಿನ್ನ ತಲೆಯಲ್ಲಿ ಮನುಷ್ಯರ ಮಲ ತುಂಬಿದೆ ಎಂದೆಲ್ಲ ಕೆಟ್ಟದಾಗಿ ಜಗಳ ಮಾಡಿದ. ಕೊನೆಗೆ ತಾಂಡವ್ ಬಂದು ಜಗಳ ಬಿಡಿಸಿ ವೈಷ್ಣವಿಯನ್ನು ಅಲ್ಲಿಂದ ಕಳಿಸಬೇಕಾಯ್ತು. ಅದಾದ ನಂತರ ಭಾನುವಾರದ ಎಪಿಸೋಡ್ ಶುರು ಆದಾಗಲೂ ಸಹ ಸುದೀಪ್ ಮತ್ತೊಮ್ಮೆ ಮಂಜನಿಗೆ ಮತ್ತೊಮ್ಮೆ ಕ್ಲಾಸ್ ತೆಗೆದುಕೊಂಡರು.
ನಾಮಿನೇಷನ್ ಸಮಯದಲ್ಲಿ ಮಂಜ, ಸೌಂದರ್ಯ ಬಗ್ಗೆ ಆಡಿದ್ದ ಅತ್ಯಂತ ಕೆಟ್ಟ ಮಾತುಗಳನ್ನು ಆಡಿದ್ದ. 18 ಪ್ಲಸ್, ಮೈಯಲ್ಲಿ ಮಾಂಸಖಂಡವಿಲ್ಲ, ನಿನ್ನನ್ನು ತಿಂದು ಹಾಕ್ತೀನಿ’ ಎಂದೆಲ್ಲ ಕೆಟ್ಟದಾಗಿ ಮಾತನಾಡಿದ್ದ. ಆ ಬಗ್ಗೆ ಸುದೀಪ್ ಎದುರು ಸೌಂದರ್ಯಾ ಕಣ್ಣೀರು ಹಾಕಿಕೊಂಡು ‘ನನಗೆ ಸಹಾಯ ಮಾಡಿ, ನನ್ನ ವ್ಯಕ್ತಿತ್ವವನ್ನು ಆತ ಘಾಸಿ ಮಾಡಿದ್ದಾನೆ. ಆತನ ತಲೆಯಲ್ಲಿ ಏನೋ ಸಮಸ್ಯೆ ಇದೆ. ಆತ ಮೃಗಗಳಿಗಿಂತಲೂ ಕಡೆ’ ಎಂದರು. ಸುದೀಪ್ ಅವರು ಮತ್ತೊಮ್ಮೆ ಮಂಜನಿಗೆ ಕ್ಲಾಸ್ ತೆಗೆದುಕೊಂಡು ತಿದ್ದಿಕೊಳ್ಳುವಂತೆ ಹೇಳಿದರು. ‘ಕೋತಿ ತಾನು ಮಾತ್ರವಲ್ಲದೆ ಇಡೀ ಬಿಗ್ಬಾಸ್ ಮನೆ ಕೆಡಿಸಿದಂತೆ’ ಆಗಬಾರದು ಎಂದರು. ಬಳಿಕ ಮಂಜ, ಅಲ್ಲಿಯೇ ಸೌಂದರ್ಯ ಕಾಲು ಮುಟ್ಟಿ ಕ್ಷಮೆ ಕೋರಿದ. ತಾನು ಬದಲಾಗಿರುವುದಾಗಿ ಮಂಜ ಹೇಳಿದ್ದಾನೆ ಆದರೆ ಮುಂದಿನ ವಾರ ಅವನ ವರ್ತನೆ ಹೇಗಿರಲಿದೆ ಎಂಬುದನ್ನು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:07 pm, Sun, 20 September 26