
ಬಿಗ್ ಬಾಸ್ ಮನೆಯಲ್ಲಿ ದೈಹಿಕ ಸಾಮರ್ಥ್ಯಕ್ಕಿಂತ ಬುದ್ಧಿ ಶಕ್ತಿ ಎಷ್ಟಿದೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಬುದ್ಧಿ ಚುರುಕಾಗಿದ್ದರೆ ಅಲ್ಲಿ ಸುಲಭದಲ್ಲಿ ಜೀವಿಸಬಹುದು. ಇಲ್ಲವಾದಲ್ಲಿ ಬೇರೆಯವರ ಕೈಗೊಂಬೆಯಾಗಿ ಎಲ್ಲರೂ ಹೇಳಿದಂತೆ ಕೇಳುತ್ತಾ ಕುಳಿತುಕೊಳ್ಳಬೇಕಾಗುತ್ತದೆ. ಈ ಬಾರಿಯ ಸೀಸನ್ ಅಲ್ಲಿ ಅವಿನಾಶ್ ಅವರು ಅತಿಯಾದ ಬುದ್ಧಿವಂತಿಕೆ ಉಪಯೋಗಿಸಿ ಎಲ್ಲರ ಮಧ್ಯೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಈ ವಿಷಯ ಚರ್ಚೆಗೆ ಕಾರಣ ಆಗಿದೆ.
ಅವಿನಾಶ್ ಅವರು ಇಷ್ಟು ದಿನ ಫ್ಲೈಟ್ನಲ್ಲಿ ಇದ್ದರು. ಆ ಸಮಯದಲ್ಲಿ ಅವರಿಗೆ ಹೆಚ್ಚು ಸ್ಪೇಸ್ ಸಿಕ್ಕಿರಲಿಲ್ಲ. ಹೀಗಾಗಿ, ಸೈಲೆಂಟ್ ಆಗಿಯೇ ಇದ್ದರು. ಆದರೆ, ಈಗ ಬಿಗ್ ಬಾಸ್ ಮನೆಗೆ ಬಂದಮೇಲೆ ಬದಲಾಗಿದ್ದಾರೆ. ಮೊದಲಿಗಿಂತ ಹೆಚ್ಚು ಆ್ಯಕ್ಟೀವ್ ಆಗಿದ್ದು, ತಂದಿಡೋ ಕೆಲಸವನ್ನು ಮಾಡುತ್ತಿದ್ದಾರೆ. ಮೊದಲು ಸೌಂದರ್ಯಾ ಹಾಗೂ ವೈಷ್ಣವಿ ಮಧ್ಯೆ ಬೆಂಕಿ ಹಚ್ಚಿದರು. ಆ ಬಳಿಕ ಧನುಷ್ ಹಾಗೂ ಕಾವ್ಯಾ ಮಧ್ಯೆ ಬೆಂಕಿ ಹೊತ್ತಿ ಉರಿಯುವಂತೆ ಮಾಡಿದರು.
ಸೌಂದರ್ಯಾ ಹಾಗೂ ಅವಿನಾಶ್ ಮಾತನಾಡುತ್ತಿದ್ದರು. ‘ನಿಮ್ಮ ವಿರುದ್ಧ ವೈಷ್ಣವಿ ಕೆಟ್ಟ ಶಬ್ದ ಬಳಕೆ ಮಾಡಿದ್ದಾರೆ’ ಎಂದು ಸೌಂದರ್ಯಾ ಬಳಿ ಅವಿನಾಶ್ ಹೇಳಿದರು. ಇದನ್ನು ನಂಬಿದ ಸೌಂದರ್ಯಾ, ವೈಷ್ಣವಿ ಜೊತೆ ಜಗಳಕ್ಕೆ ಇಳಿದರು. ಇಬ್ಬರ ಮಧ್ಯೆ ತಂದಿಟ್ಟು ಅವಿನಾಶ್ ಮಜಾ ತೆಗೆದುಕೊಂಡರು. ಈ ಸಂದರ್ಭದಲ್ಲಿ ಅವಿನಾಶ್ ಅವರು ಸಣ್ಣದಾಗಿ ನಗುತ್ತಾ ಇದ್ದರು.
ಇದನ್ನೂ ಓದಿ: ಮಂಜು ಮೇಲೆ ಹಲ್ಲೆ ಮಾಡಿದ್ರಾ ಸೌಂದರ್ಯಾ? ಬಿಗ್ ಬಾಸ್ ಮಾಡಿದ ನಿರ್ಧಾರ ಏನು?
ಆ ಬಳಿಕ ಇಷ್ಟಕ್ಕೆ ನಿಲ್ಲದ ಅವರು, ಧನುಷ್ ಬಳಿ ತೆರಳಿದರು. ‘ನೀನು ಹೋಗಿ ಕಾವ್ಯಾ ಅವರಿಗೆ ಕೋಪ ಬರುವಂತೆ ಮಾಡು. ನೀನು ಮಾಡುವ ಪ್ರ್ಯಾಂಕ್ ರಿಯಲ್ ಆಗಿರಬೇಕು’ ಎಂದು ಛೂ ಬಿಟ್ಟರು. ಈ ವೇಳೆ ಹಿಂದೂಮುಂದೆ ಯೋಚಿಸದ ಧನುಷ್, ಕಾವ್ಯಾ ಅವರನ್ನು ಕೆರಳಿಸಿದರು. ನಂತರ ಇದು ಪ್ರ್ಯಾಂಕ್ ಎಂದು ವಿವರಿಸಿದರೂ ಅವರು ಅದನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಈ ಬೆಳವಣಿಗೆಯಿಂದ ಧನುಷ್ ಅವರು ಸುಖಾಸುಮ್ಮನೆ ಕಾವ್ಯಾ ಅವರ ದ್ವೇಷ ಕಟ್ಟಿಕೊಂಡಿದ್ದಾರೆ. ಅವಿನಾಶ್ ಎಲ್ಲರ ಮಧ್ಯೆ ತಂದಿಟ್ಟು ಮಜಾ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.