ನಾಮಿನೇಷನ್ ನಿಂದ ಜಗಳ, ವಿನಯ್ ಅಬ್ಬರ, ತುಕಾಲಿ, ಭಾಗ್ಯಶ್ರೀ ಕಣ್ಣೀರು, ನಮ್ರತಾ ಜಗಳ

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ನಾಮಿನೇಷನ್ ಪ್ರಕ್ರಿಯೆಯಿಂದ ಮನೆಯಲ್ಲಿ ಮತ್ತೆ ಜಗಳ ಶುರುವಾಗಿದೆ. ಈ ವಾರ ನಾಮಿನೇಟ್ ಆದವರು ಯಾರು?

ನಾಮಿನೇಷನ್ ನಿಂದ ಜಗಳ, ವಿನಯ್ ಅಬ್ಬರ, ತುಕಾಲಿ, ಭಾಗ್ಯಶ್ರೀ ಕಣ್ಣೀರು, ನಮ್ರತಾ ಜಗಳ

Updated on: Oct 31, 2023 | 11:49 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ನಡೆದ ಹೊಸ ವಾರದ ನಾಮಿನೇಷನ್ ಮನೆಯ ಸದಸ್ಯರ ನಡುವೆ ಕಂದಕ ಮೂಡಿಸಿದೆ. ಕೆಲವು ಸದಸ್ಯರ ಕಣ್ಣೀರಿಗೆ, ಜಗಳಕ್ಕೆ, ವೈಷಮ್ಯಕ್ಕೆ ಕಾರಣವಾಗಿದೆ. ಯಾರಿಗೆ ನಾಮಿನೇಷನ್ ಪಾಸ್ ಸಿಕ್ಕಿದೆಯೋ ಅವರು ಮಾತ್ರ ನಾಮಿನೇಟ್ ಮಾಡಬಹುದು ಎಂಬ ನಿಯಮ ಇದ್ದಿದ್ದರಿಂದ ಈ ವಾರ ನಾಮಿನೇಟ್ ಮಾಡುವ ಹಕ್ಕು ಕೆಲವರಿಗೆ ಮಾತ್ರವೇ ಇತ್ತು. ಸಿಕ್ಕ ಅಧಿಕಾರವನ್ನು ಕೆಲವರು ಚೆನ್ನಾಗಿ ಬಳಸಿಕೊಂಡರು.

ತಮ್ಮನ್ನು ಸದಾ ಅಣಕಿಸುವ, ಹೆದರಿಸಲು ಯತ್ನಿಸುವ ವಿನಯ್​ ಹಾಗೂ ತುಕಾಲಿ ಸಂತು ಅವರನ್ನು ಡ್ರೋನ್ ಪ್ರತಾಪ್ ನಾಮಿನೇಟ್ ಮಾಡಿದರೆ, ಭಾಗ್ಯಶ್ರೀ ಅವರು ವಿನಯ್ ಹಾಗೂ ಸ್ನೇಹಿತ್ ಅನ್ನು ನಾಮಿನೇಟ್ ಮಾಡಿದರು. ಸಿರಿ ಸಹ ವಿನಯ್ ಅವರನ್ನು ನಿಯಮ ಮುರಿದಿದ್ದಕ್ಕೆ ನಾಮಿನೇಟ್ ಮಾಡಿದರು. ತನಿಷಾ ಸಹ ವಿನಯ್ ಹಾಗೂ ರಕ್ಷಕ್​ರನ್ನು ನಾಮಿನೇಟ್ ಮಾಡಿದರೆ, ನಮ್ರತಾ, ಮೈಖಲ್ ಹಾಗೂ ತನಿಷಾರನ್ನು ನಾಮಿನೇಟ್ ಮಾಡಿದರು. ಸಂಗೀತಾ ಸಹ ವಿನಯ್ ಹಾಗೂ ತುಕಾಲಿ ಅವರನ್ನು ನಾಮಿನೇಟ್ ಮಾಡಿದರು. ಕೊನೆಯದಾಗಿ ಕ್ಯಾಪ್ಟನ್ ಆಗಿರುವ ನೀತು ಅವರು ಕಾರ್ತಿಕ್​ರನ್ನು ನೇರವಾಗಿ ನಾಮಿನೇಟ್ ಮಾಡಿದರು.

ಅತಿ ಹೆಚ್ಚು ಜನರಿಂದ ನಾಮಿನೇಟ್ ಆದ ವಿನಯ್ ಸಹಜವಾಗಿ ತಮ್ಮ ಅಸಮಾಧಾನ ತೋರಿಸಿದರು. ಡ್ರೋನ್ ಪ್ರತಾಪ್ ಹಾಗೂ ಭಾಗ್ಯಶ್ರೀ ಮೇಲೆ ಮಾತಿನ ದಾಳಿ ನಡೆಸಿದರು. ಈ ನಡುವೆ ತುಕಾಲಿ ಸಂತು, ಭಾಗ್ಯಶ್ರೀ ಅವರು ಸ್ನೇಹಿತ್​ರನ್ನು ಕೆಟ್ಟ ಕಾರಣಕ್ಕೆ ನಾಮಿನೇಟ್ ಮಾಡಿದರು ಎಂದು ಹೇಳುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು. ಆ ಬಳಿಕ ವಿನಯ್, ಭಾಗ್ಯಶ್ರೀ ಅವರ ಮೇಲೆ ವಾಗ್ದಾಳಿ ಪ್ರಾರಂಭಿಸಿ ಚುಚ್ಚಿ ಮಾತನಾಡಲು ಆರಂಭಿಸಿದರು. ಇದರಿಂದ ಭಾವುಕರಾದ ಭಾಗ್ಯಶ್ರೀ ಕಣ್ಣೀರು ಹಾಕುತ್ತಾ, ನಾನು ಮನೆಯಿಂದ ಹೊರಗೆ ಹೋಗುತ್ತೇನೆ ಬಿಟ್ಟು ಬಿಡಿ ಎಂದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಮತ್ತೆ ಬರ್ತಾರಾ ವರ್ತೂರು ಪ್ರಕಾಶ್​? ಏನು ಹೇಳಿದರು ಸುದೀಪ್?

ಇನ್ನು ಕಾರ್ತಿಕ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ ನೀತು ನಡುವೆಯೂ ಮಾತಿನ ಚಕಮಕಿ ನಡೆಯಿತು. ಇಬ್ಬರೂ ಆ ಮುನ್ನವೂ ಪರಸ್ಪರ ಜಗಳ ಮಾಡಿದ್ದರು. ಇನ್ನು ನಮ್ರತಾ, ಮೈಖಲ್​ಗೆ ನಾಮಿನೇಟ್ ಮಾಡುವಾಗ ಅಂಟಿಸಿದ್ದ ಸ್ಟಿಕ್ಕರ್ ಅನ್ನು ಮೈಖಲ್ ತನ್ನ ಪುಷ್ಠಕ್ಕೆ ಅಂಟಿಸಿಕೊಂಡು ನಮ್ರತಾಗೆ ತೋರಿಸಿದರು ಇದರಿಂದ ಸಿಟ್ಟಾದ ನಮ್ರತಾ, ಮೈಖಲ್ ಮೇಲೆ ಜಗಳ ಮಾಡಿದರು. ಆ ಬಳಿಕ ಇಶಾನಿ, ಡ್ರೋನ್ ಪ್ರತಾಪ್ ಹಾಗೂ ಸ್ನೇಹಿತ್ ಬುದ್ಧಿ ಹೇಳಿದ ಬಳಿಕ ಮೈಖಲ್, ನಮ್ರತಾ ಬಳಿ ಕ್ಷಮೆ ಕೇಳಿದರು.

ನಾಮಿನೇಷನ್ ಅಂತ್ಯವಾದ ಬಳಿಕ ರೀ ಎಂಟ್ರಿ ಪಡೆದ ವರ್ತೂರು ಸಂತೋಷ್ ಅವರು ಈ ವಾರ ನಾಮಿನೇಟ್ ಆಗಬೇಕೆ ಬೇಡವೇ ಎಂಬ ಪ್ರಶ್ನೆಯನ್ನು ಬಿಗ್​ಬಾಸ್ ಹಾಕಿದರು. ಆಗ ವಿನಯ್, ಸ್ನೇಹಿತ್, ನಮ್ರತಾ, ಕಾರ್ತಿಕ್ ಅವರುಗಳು ನಾಮಿನೇಟ್ ಆಗಬೇಕು ಎಂದರು. ತನಿಷಾ, ಸಂಗೀತಾ, ರಕ್ಷಕ್, ತುಕಾಲಿ, ಡ್ರೋನ್ ಅವರುಗಳು ನಾಮಿನೇಟ್ ಆಗಬಾರದು ಎಂದರು. ಆದರೆ ಬಹುಸಂಖ್ಯೆಯ ಸದಸ್ಯರು ನಾಮಿನೇಟ್ ಆಗಬೇಕು ಎಂದಿದ್ದ ಕಾರಣ ವರ್ತೂರು ಸಹ ನಾಮಿನೇಟ್ ಆದರು.

ಆದರೆ ವಿನಯ್​ ಅಂತೂ ತಮ್ಮನ್ನು ಅತಿ ಹೆಚ್ಚು ಜನ ನಾಮಿನೇಟ್ ಮಾಡಿದ ಬಗ್ಗೆ ಅಸಮಾಧಾನ ಗೊಂಡಿರುವುದು ಸ್ಪಷ್ಟವಾಗಿ ಅವರ ಮಾತುಗಳಲ್ಲಿ ಗೊತ್ತಾಗುತ್ತಿತ್ತು, ಹೋಗುವ ಮುನ್ನ ಒಬ್ಬನನ್ನು ಹೊಡೆದೇ ಹೋಗುತ್ತೇನೆ ಎಂದೆಲ್ಲ ಬುಸುಗುಟ್ಟಿದರು. ಅವರು ಹೇಳಿದ್ದು ಡ್ರೋನ್ ಪ್ರತಾಪ್ ಬಗ್ಗೆ ಎಂಬುದು ಕೇಳಿಸಿಕೊಂಡ ನಮ್ರತಾ, ತುಕಾಲಿಗೆ ಖಾತ್ರಿ ಆಗಿತ್ತು.

ಅಂತಿಮವಾಗಿ ವಿನಯ್, ರಕ್ಷಕ್, ಸ್ನೇಹಿತ್, ತುಕಾಲಿ ಸಂತು, ಸಿರಿ, ಮೈಖಲ್, ವರ್ತೂರು ಸಂತೋಷ್, ಕಾರ್ತಿಕ್ ಅವರುಗಳು ನಾಮಿನೇಟ್ ಆದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us