ನೇರವಾಗಿ ನಾಮಿನೇಟ್ ಆದ ಕಾಕ್ರೋಚ್ ಸುಧಿ: ಮಾಡಿದ ತಪ್ಪು ಏನು?

ಕ್ಯಾಪ್ಟನ್ ಆಗಿರುವ ಮಾಳು ನಿಪನಾಳ ಅವರು ತಮ್ಮ ಅಧಿಕಾರ ಬಳಸಿ ನಾಮಿನೇಟ್ ಮಾಡಿದ್ದಾರೆ. ಕಾಕ್ರೋಚ್ ಸುಧಿ ಹಾಗೂ ರಘು ಅವರನ್ನು ನೇರವಾಗಿ ಈ ವಾರ ನಾಮಿನೇಟ್ ಮಾಡಲಾಗಿದೆ. ಒಟ್ಟು 8 ಜನರ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ವಾರಂತ್ಯದ ಸಂಚಿಕೆಗಾಗಿ ಕಾತರ ಹೆಚ್ಚಾಗಿದೆ.

ನೇರವಾಗಿ ನಾಮಿನೇಟ್ ಆದ ಕಾಕ್ರೋಚ್ ಸುಧಿ: ಮಾಡಿದ ತಪ್ಪು ಏನು?
Cockroach Sudhi

Updated on: Nov 13, 2025 | 10:44 PM

ಬಿಗ್ ಬಾಸ್ ಮನೆಯಲ್ಲಿ 46 ದಿನಗಳು ಕಳೆದಿವೆ. ಈ ವಾರ ನಾಮಿನೇಟ್ ಆಗಿರುವ ಸ್ಪರ್ಧಿಗಳ ಪಟ್ಟಿಯಲ್ಲಿ ಕಾಕ್ರೋಚ್ ಸುಧಿ (Cockroach Sudhi) ಕೂಡ ಇದ್ದಾರೆ. ಒಮ್ಮೆ ಸೇಫ್ ಆದ ಅವರು ನಂತರ ಮತ್ತೆ ನಾಮಿನೇಟ್ ಆಗುವಂತಾಯಿತು. ಮನೆಯ ಕ್ಯಾಪ್ಟನ್ ಮಾಳು ನಿಪನಾಳ (Malu Nipanal) ಅವರು ಕಾಕ್ರೋಚ್ ಸುಧಿಯನ್ನು ನೇರವಾಗಿ ನಾಮಿನೇಟ್ ಮಾಡಿದರು. ಅವರ ಜೊತೆ ರಘು ಕೂಡ ನೇರವಾಗಿ ನಾಮಿನೇಟ್ ಆಗಿದ್ದಾರೆ. ಒಂದು ವೇಳೆ ಕಡಿಮೆ ವೋಟ್ ಪಡೆದರೆ ಕಾಕ್ರೋಚ್ ಸುಧಿ ಅವರಿಗೆ ಬಿಗ್ ಬಾಸ್ ಆಟ ಅಂತ್ಯ ಆಗಲಿದೆ.

ಈ ವಾರ ಎರಡು ತಂಡಗಳಾಗಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಟಾಸ್ಕ್​​ಗಳನ್ನು ನೀಡಲಾಗಿದೆ. ಮೊದಲು ನಾಮಿನೇಟೆಡ್ ತಂಡದಲ್ಲಿ ಇದ್ದ ಸುಧಿ ಅವರಿಗೆ ಬಚಾವ್ ಆಗುವ ಅವಕಾಶ ಸಿಕ್ಕಿತ್ತು. ಆದರೆ ಎರಡನೇ ಸುತ್ತಿನ ಆಟದಲ್ಲಿ ಎಲ್ಲ ಸದಸ್ಯರು ಒಮ್ಮತದ ನಿರ್ಧಾರದಿಂದ ಒಬ್ಬರನ್ನು ಸೇಫ್ ಹಾಗೂ ಇನ್ನೊಬ್ಬರನ್ನು ನಾಮಿನೇಟ್ ಮಾಡಲು ವಿಫಲರಾದರು. ಆಗ ಕ್ಯಾಪ್ಟನ್ ಮಾಳು ಅವರಿಗೆ ಬಿಗ್ ಬಾಸ್ ಒಂದು ಅಧಿಕಾರ ನೀಡಿದರು.

ಕ್ಯಾಪ್ಟನ್ ಮಾಳು ನಿಪನಾಳ ಅವರು ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ಹೇಳಿದಾಗ ಕಾಕ್ರೋಚ್ ಸುಧಿ ಮತ್ತು ರಘು ಹೆಸರನ್ನು ಅವರು ತೆಗೆದುಕೊಂಡರು. ಈ ನಿರ್ಧಾರದಿಂದ ಕಾಕ್ರೋಚ್ ಸುಧಿ ಅವರಿಗೆ ಬೇಸರ ಆಯಿತು. ‘ಕ್ಯಾಪ್ಟನ್ ಆಗಿ ನಾನು ಹೇಳಿದ ಕೆಲಸವನ್ನು ಕಾಕ್ರೋಚ್ ಸುಧಿ ಸರಿಯಾಗಿ ಮಾಡಿಲ್ಲ’ ಎಂದು ಕಾರಣ ನೀಡಿ ಮಾಳು ಅವರು ಸುಧಿಯನ್ನು ನಾಮಿನೇಟ್ ಮಾಡಿದರು.

ಸಿನಿಮಾಗಳಲ್ಲಿ ಖಡಕ್ ಖಳನಾಗಿ ಅಬ್ಬರಿಸಿದವರು ಕಾಕ್ರೋಚ್ ಸುಧಿ. ಆದರೆ ಬಿಗ್ ಬಾಸ್ ಮನೆಯಲ್ಲಿ ಅವರ ಅಬ್ಬರ ಕಾಣಿಸುತ್ತಿಲ್ಲ. ಅಶ್ವಿನಿ ಗೌಡ, ಜಾಹ್ನವಿ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ ಮುಂತಾದವರ ಅಬ್ಬರದ ನಡುವೆ ಕಾಕ್ರೋಚ್ ಸುಧಿ ಚಾರ್ಮ್ ಕಡಿಮೆ ಆಗಿದೆ. ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಲು ಕಾಕ್ರೋಚ್ ಸುಧಿ ಹಿಂದೇಟು ಹಾಕುತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ

ರಘು ಅವರು ಕಳೆದ ಒಂದು ವಾರದಿಂದ ಎಲ್ಲಿಯೂ ಸರಿಯಾಗಿ ಕಾಣಿಸಿಕೊಂಡಿಲ್ಲ ಎಂಬ ಕಾರಣವನ್ನು ಮಾಳು ನಿಪನಾಳ ಅವರು ನೀಡಿದರು. ಮಾಳು ಅವರು ಈ ಮೊದಲು ಅಶ್ವಿನಿ ಗೌಡ, ಕಾಕ್ರೋಚ್ ಸುಧಿ, ಜಾಹ್ನವಿ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಧ್ರುವಂತ್ ಅವರನ್ನು ನಾಮಿನೇಟ್ ಮಾಡಿದ್ದರು. ರಿಷಾ ಅವರು ಕಳೆದ ವಾರ ಗಿಲ್ಲಿ ಮೇಲೆ ಕೈ ಮಾಡಿದ್ದರಿಂದ ಸುದೀಪ್ ಅವರಿಂದ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us