
ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರಿಗೆ ಒಂದೆಡೆ ಬೇಸರ, ಇನ್ನೊಂದೆಡೆ ಭರ್ಜರಿ ಖುಷಿ ನೀಡುವ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲವು ವರ್ಷಗಳಿಂದ ಸತತವಾಗಿ ಪ್ರೇಕ್ಷಕರನ್ನು ರಂಜಿಸುತ್ತಾ, ಸಾವಿರಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿದ್ದ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ಕೊನೆಗೂ ಮುಕ್ತಾಯದ ಹಂತ ತಲುಪಿದ್ದು, ಈ ವಾರವೇ ತನ್ನ ಸುದೀರ್ಘ ಪಯಣಕ್ಕೆ ಸಂಪೂರ್ಣ ಅಂತ್ಯ ಹಾಡಲಿದೆ. ಆದರೆ, ಈ ಜನಪ್ರಿಯ ಸೀರಿಯಲ್ ಮುಗಿಯುತ್ತಿದ್ದಂತೆಯೇ ಕಿರುತೆರೆಯಲ್ಲಿ ಮತ್ತೊಂದು ಬಿಗ್ ಧಮಾಕಾ ಆರಂಭವಾಗಲಿದ್ದು, ವಾಹಿನಿಯ ಸಾರ್ವಕಾಲಿಕ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದಾದ ‘ಅಗ್ನಿಸಾಕ್ಷಿ’ ಹೊಸ ರೂಪದಲ್ಲಿ ಮರಳಿ ಬರುತ್ತಿದೆ!
‘ಭಾಗ್ಯಲಕ್ಷ್ಮಿ’ ಪ್ರಸಾರವಾಗುತ್ತಿದ್ದ ಅದೇ ಸಮಯಕ್ಕೆ, ಅಂದರೆ ಜೂನ್ 8 ರಿಂದ ಪ್ರತಿ ದಿನ ಸಂಜೆ 7 ಗಂಟೆಗೆ ‘ಅಗ್ನಿಸಾಕ್ಷಿ’ ಧಾರಾವಾಹಿ ಪ್ರಸಾರವಾಗಲಿದೆ ಎಂದು ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಗೊತ್ತಾಗಿದೆ.
ಹೊಸ ಪ್ರೋಮೋ ಝಲಕ್ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದರಲ್ಲಿ ನಾಯಕ ಹಾಗೂ ನಾಯಕಿಯ ಪಾತ್ರಗಳು ಸಂಪೂರ್ಣ ಭಿನ್ನವಾಗಿ ಮೂಡಿಬಂದಿವೆ. ಅಗ್ನಿ (ಶಮಂತ್ ಬ್ರೋ ಗೌಡ) ಹೆಸರಿಗೆ ತಕ್ಕಂತೆ ಇವನು ಸುಡುವ ರಾಕ್ಷಸನಂತಿರುವ ಕೋಪಿಷ್ಟ ಸ್ವಭಾವದ ಹುಡುಗ. ತನ್ನ ಅಹಂ ಹಾಗೂ ತನಗಾಗಬೇಕಾದ ಕ್ರೆಡಿಟ್ಸ್ ವಿಷಯದಲ್ಲಿ ಯಾರನ್ನೂ ಬಿಡದ ಸ್ವಭಾವ ಇವನದ್ದು.
ಸಾಕ್ಷಿ ಇವಳು ಅಗ್ನಿಗೆ ತದ್ವಿರುದ್ಧವಾದ ಕ್ಯಾರೆಕ್ಟರ್. ಎಂತಹದೇ ಕಷ್ಟದ ಪರಿಸ್ಥಿತಿ ಎದುರಾದರೂ ಮುಖದಲ್ಲಿ ನಗುನಗುತ್ತಲೇ ಎದುರಿಸುವ ಸಕಾರಾತ್ಮಕ ಗುಣದ ದಿಟ್ಟ ಹೆಣ್ಣುಮಗಳು.
ಇದನ್ನೂ ಓದಿ: ಈ ವಾರ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರ
ಇವರಿಬ್ಬರ ನಡುವೆ ಕದನ ಸೃಷ್ಟಿಸಲು ಮನೆಯವರೇ ಸಂಚು ರೂಪಿಸುತ್ತಿರುವ ದೃಶ್ಯಗಳು ಪ್ರೋಮೋದಲ್ಲಿ ಹೈಲೈಟ್ ಆಗಿವೆ. ‘ಅಗ್ನಿ ಪರೀಕ್ಷೆ ಕೇಳಿದ್ದೀನಿ, ಆದ್ರೆ ಅಗ್ನಿಗೇ ಪರೀಕ್ಷೆನಾ?’ ಎಂಬ ಮಾತುಗಳೊಂದಿಗೆ ಇವರಿಬ್ಬರ ರೋಲರ್ ಕೋಸ್ಟರ್ ಜರ್ನಿ ಮತ್ತು ಲವ್ ಸ್ಟೋರಿ ತೆರೆದುಕೊಳ್ಳಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.