
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಅವರು ಕಿಚ್ಚನ ಚಪ್ಪಾಳೆ (Kicchana Chappale) ನೀಡುತ್ತಾರೆ. ಪ್ರತಿ ವಾರ ಚೆನ್ನಾಗಿ ಆಟ ಆಡಿದ ಸ್ಪರ್ಧಿಗೆ ಈ ಗೌರವ ಸಿಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ಇಡೀ ಸೀಸನ್ನ ಆಟವನ್ನು ಪರಿಗಣಿಸಿ ಧ್ರುವಂತ್ ಅವರಿಗೆ ಚಪ್ಪಾಳೆ ನೀಡಿದ್ದರು. ಆದರೆ ಅವರ ಈ ನಿರ್ಧಾರಕ್ಕೆ ವೀಕ್ಷಕರಿಂದ ವಿರೋಧ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಅದರ ಪರಿಣಾಮವಾಗಿ ಬಿಗ್ ಬಾಸ್ (BBK 12) ಆಯೋಜಕರು ನಿರ್ಧಾರ ಬದಲಾಯಿಸಿದ್ದಾರೆ. ಧ್ರುವಂತ್ (Dhruvanth) ಅವರಿಗೆ ಸೀಸನ್ನ ಚಪ್ಪಾಳೆ ಬದಲು ವಾರದ ಚಪ್ಪಾಳೆ ನೀಡಲಾಗಿದೆ.
‘ಮೊಟ್ಟ ಮೊದಲ ಕಿಚ್ಚನ ಸೀಸನ್ ಚಪ್ಪಾಳೆ’ ಎಂದು ಧ್ರುವಂತ್ ಅವರ ಫೋಟೋವನ್ನು ‘ಕಲರ್ಸ್ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು. ಅದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈಗ ‘ಈ ವಾರದ ಕಿಚ್ಚನ ಚಪ್ಪಾಳೆ’ ಎಂದು ಹೊಸ ಪೋಸ್ಟ್ ಹಾಕಲಾಗಿದೆ. ಈ ಮೊದಲ ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಲಾಗಿದೆ.
ಬಿಗ್ ಬಾಸ್ ಆಯೋಜಕರು ನಿರ್ಧಾರ ಬದಲಿಸಿದ್ದಕ್ಕೆ ವೀಕ್ಷಕರಿಗೆ ಖುಷಿ ಆಗಿದೆ. ಇಡೀ ಸೀಸನ್ನ ಚಪ್ಪಾಳೆ ಪಡೆಯುವಷ್ಟು ಉತ್ತಮ ಆಟವನ್ನು ಧ್ರುವಂತ್ ಆಡಿಲ್ಲ ಎಂಬುದು ವೀಕ್ಷಕರು ಅಭಿಪ್ರಾಯ. ಹಾಗಾಗಿ ಇಡೀ ಸೀಸನ್ ಚಪ್ಪಾಳೆ ಗಿಲ್ಲಿಗೆ ಸಲ್ಲಬೇಕು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ವಾರದ ಚಪ್ಪಾಳೆಯನ್ನು ಅಶ್ವಿನಿ ಗೌಡ ಅವರಿಗೂ ನೀಡಲಾಗಿದೆ.
ಧ್ರುವಂತ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದ ಮಧ್ಯೆ ಸೋಲು ಒಪ್ಪಿಕೊಂಡಿದ್ದರು. ತಾವಾಗಿಯೇ ಆಟ ತೊರೆಯುವ ನಿರ್ಧಾರ ಮಾಡಿದ್ದರು. ಆದರೆ ಸುದೀಪ್ ಅವರು ಪ್ರೋತ್ಸಾಹದ ಮಾತುಗಳನ್ನು ಹೇಳಿದ ಬಳಿಕ ಆಟ ಮುಂದುವರಿಸಿದ್ದರು. ಇಡೀ ಮನೆಯಲ್ಲಿ ಅವರು ಹೆಚ್ಚು ಬೆರೆತಿದ್ದು ಅಶ್ವಿನಿ ಗೌಡ ಮತ್ತು ಮಲ್ಲಮ್ಮ ಜೊತೆ ಮಾತ್ರ. ಅಲ್ಲದೇ ಅವರಿಂದ ವೀಕ್ಷಕರಿಗೆ ಹೆಚ್ಚು ಮನರಂಜನೆ ಸಿಕ್ಕಿಲ್ಲ. ಹಾಗಾಗಿ ಅವರಿಗೆ ಇಡೀ ಸೀಸನ್ನ ಚಪ್ಪಾಳೆ ನೀಡುವುದು ಸೂಕ್ತವಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.
ಇದನ್ನೂ ಓದಿ: ಕಿಚ್ಚನ ಚಪ್ಪಾಳೆ: ಸುದೀಪ್ ಇನ್ಸ್ಟಾಗ್ರಾಮ್ ಪೋಸ್ಟ್ ತುಂಬ ಅಸಮಾಧಾನದ ಕಮೆಂಟ್ಸ್
ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟ ಅವರ ಹವಾ ಜೋರಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಒಂದು ಮಿಲಿಯನ್ಗಿಂತಲೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ಗಿಲ್ಲಿಯೇ ಈ ಬಾರಿ ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಲಕ್ಷಾಂತರ ಕಮೆಂಟ್ಗಳು ಬಂದಿವೆ. ಜನವರಿ 17 ಮತ್ತು 18ರಂದು ಫಿನಾಲೆ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:28 pm, Tue, 13 January 26