ಅಶ್ಲೀಲ ಮಾತು ಕೇಳಲಾಗದೇ ಬಿಗ್ ಬಾಸ್​ನಿಂದ ಹೊರಗೆ ಬರಲು ಸುರೇಶ್ ನಿರ್ಧಾರ

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಿವಾದ ಸಹಜ. ಆದರೆ ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ. ಒಬ್ಬರಿಗೊಬ್ಬರು ಬೈಯ್ದಾಡಿಕೊಳ್ಳುವುದು ಸಹಜ. ಆದರೆ ಅಶ್ಲೀಲ ಪದಗಳ ಬಳಕೆ ಸರಿಯಲ್ಲ. ಈ ವಿಚಾರದಲ್ಲಿ ಗೋಲ್ಡ್ ಸುರೇಶ್ ಅವರಿಗೆ ತುಂಬಾ ನೋವಾಗಿದೆ. ವೈಲ್ಡ್​ ಕಾರ್ಡ್​ ಸ್ಪರ್ಧಿ ರಜತ್ ಆಡಿದ ಮಾತುಗಳಿಂದ ಸುರೇಶ್ ನೊಂದುಕೊಂಡಿದ್ದಾರೆ. ಹಾಗಾಗಿ ಆಟ ನಿಲ್ಲಿಸಲು ನಿರ್ಧರಿಸಿದರು.

ಅಶ್ಲೀಲ ಮಾತು ಕೇಳಲಾಗದೇ ಬಿಗ್ ಬಾಸ್​ನಿಂದ ಹೊರಗೆ ಬರಲು ಸುರೇಶ್ ನಿರ್ಧಾರ
ಗೋಲ್ಡ್ ಸುರೇಶ್​

Updated on: Nov 21, 2024 | 10:25 PM

ಹೊರ ಜಗತ್ತಿನಲ್ಲಿ ಎಲ್ಲರಿಗೂ ಒಂದು ಗೌರವ ಇರುತ್ತದೆ. ಅನೇಕ ವರ್ಷಗಳ ಕಾಲ ಕಷ್ಟಪಟ್ಟು ಆ ಗೌರವವನ್ನು ಸಂಪಾದಿಸಲಾಗಿರುತ್ತದೆ. ಆದರೆ ಬಿಗ್ ಬಾಸ್​ ಮನೆಯ ಒಳಗೆ ಯಾರೋ ಬಂದು ಅಸಭ್ಯವಾಗಿ ಬೈಯ್ದರೆ ಆ ಗೌರವಕ್ಕೆ ಧಕ್ಕೆ ಆಗುತ್ತದೆ. ಗೋಲ್ಡ್​ ಸುರೇಶ್ ಅವರ ಪರಿಸ್ಥಿತಿ ಹೀಗೆಯೇ ಆಗಿದೆ. ಕಷ್ಟಪಟ್ಟು ಬೆಳೆದ ವ್ಯಕ್ತಿ ಎಂಬ ಕಾರಣಕ್ಕೆ ಹೊರಗೆ ಅವರಿಗೆ ಎಲ್ಲರೂ ಗೌರವ ಕೊಡುತ್ತಾರೆ. ಆದರೆ ಬಿಗ್ ಬಾಸ್​ ಮನೆಯ ಒಳಗೆ ಅವರನ್ನು ‘ವೇಸ್ಟ್​ ನನ್​ ಮಗ’ ಎಂದು ರಜತ್​ ಬೈಯ್ದಿದ್ದಾರೆ. ಅಲ್ಲದೇ, ಕೆಲವು ಅವಾಚ್ಯ ಪದಗಳಿಂದಲೂ ನಿಂದಿಸಿದ್ದಾರೆ.

ಟಾಸ್ಕ್ ಆಡುವಾಗ ಗೋಲ್ಡ್ ಸುರೇಶ್ ಮತ್ತು ರಜತ್ ನಡುವೆ ಕಿರಿಕ್ ಆಯಿತು. ಇಬ್ಬರೂ ಪರಸ್ಪರ ಬೈಯ್ದುಕೊಂಡರು. ಆದರೆ ರಜತ್ ಅವರ ಗಡಿ ಮೀರಿ, ಅವಾಚ್ಯ ಪದಗಳನ್ನು ಬಳಸಿದರು. ಇದರಿಂದ ಸುರೇಶ್​ ಅವರು ಕೆರಳಿದರು. ಕ್ಯಾಮೆರಾ ಎದುರು ಬಂದು ಬಿಗ್​ ಬಾಸ್​ಗೆ ಈ ಬಗ್ಗೆ ಸುರೇಶ್ ದೂರು ನೀಡಿದರು. ‘ಇಂಥ ಅಶ್ಲೀಲ ಮಾತುಗಳನ್ನು ಹೇಳಿಸಿಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ. ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಹೊರಗೆ ಹೋಗುತ್ತೇನೆ’ ಎಂದು ಸುರೇಶ್ ಹಠ ಮಾಡಿದರು.

ಗೋಲ್ಡ್ ಸುರೇಶ್​ ಅವರು ಅರ್ಧಕ್ಕೆ ಟಾಸ್ಕ್​ ನಿಲ್ಲಿಸಿದರು. ‘ನಾನು ಆಡುವುದಿಲ್ಲ’ ಎಂದು ಖಡಕ್​ ಆಗಿ ನಿರ್ಧಾರ ತೆಗೆದುಕೊಂಡರು. ಅಲ್ಲದೇ, ತಮ್ಮ ಬಟ್ಟೆಗಳನ್ನು ಪ್ಯಾಕ್​ ಮಾಡಿಕೊಂಡು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿದರು. ಕೆಟ್ಟ ಪದಗಳಿಂದ ಬೈಯ್ಯಿಸಿಕೊಂಡು ನೋವಾಗಿದ್ದರಿಂದ ಸುರೇಶ್ ಅವರು ಕಣ್ಣೀರು ಹಾಕಿದರು.

ಇದನ್ನೂ ಓದಿ: ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು

52 ದಿನಗಳ ಕಾಲ ಕಷ್ಟಪಟ್ಟು ಆಡಿದ ಗೋಲ್ಡ್ ಸುರೇಶ್ ಅವರು ಈಗ ಅರ್ಧಕ್ಕೆ ಹೊರಟು ಹೋಗುತ್ತಾರೆ ಎಂದರೆ ಇಷ್ಟು ದಿನಗಳ ಶ್ರಮ ವ್ಯರ್ಥ ಆದಂತೆ ಆಗುತ್ತದೆ. ಹಾಗಾಗಿ ಇನ್ನುಳಿದ ಸದಸ್ಯರು ಸುರೇಶ್​ಗೆ ಬುದ್ಧಿ ಹೇಳಲು ಪ್ರಯತ್ನಿಸಿದರು. ರಜತ್​ಗೆ ಆಟದ ಮೂಲಕವೇ ಉತ್ತರ ನೀಡಿ, ಮತ್ತೆ ಉತ್ತಮ ಎನಿಸಿಕೊಳ್ಳಿ ಎಂದು ತ್ರಿವಿಕ್ರಮ್ ಹೇಳಿದರು. ಎಲ್ಲರೂ ಸಮಾಧಾನ ಮಾಡಿದ್ದರಿಂದ ಸುರೇಶ್​ ಅವರು ಬಿಗ್ ಬಾಸ್ ಮನೆಯಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಆಟ ಹೇಗಿರಲಿದೆ ಎಂಬುದನ್ನು ನೋಡುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us