AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aniruddha Birthday: ಸ್ಯಾಂಡಲ್​ವುಡ್​ನಿಂದ ಕಿರುತೆರೆಯ ‘ಸೆನ್ಸೇಶನ್ ಸ್ಟಾರ್’ವರೆಗೆ; ಇಲ್ಲಿದೆ ಅನಿರುದ್ಧ ಜೀವನ ಪಯಣ

Aniruddha Jatkar Birthday: ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಅನಿರುದ್ಧ ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನದ ಸಂಭ್ರಮ. ಸ್ಯಾಂಡಲ್​ವುಡ್​ನಲ್ಲಿ ಕಾಣಿಸಿಕೊಂಡು ನಂತರ ಕಿರುತೆರೆಯಲ್ಲಿ ಸ್ಟಾರ್ ಆದ ಅವರ ಸಾಧನೆಗಳು ಒಂದೆರಡಲ್ಲ.. ಇಲ್ಲಿದೆ ಕುತೂಹಲಕರ ಮಾಹಿತಿ.

Aniruddha Birthday: ಸ್ಯಾಂಡಲ್​ವುಡ್​ನಿಂದ ಕಿರುತೆರೆಯ ‘ಸೆನ್ಸೇಶನ್ ಸ್ಟಾರ್’ವರೆಗೆ; ಇಲ್ಲಿದೆ ಅನಿರುದ್ಧ ಜೀವನ ಪಯಣ
ನಟ ಅನಿರುದ್ಧ
TV9 Web
| Updated By: shivaprasad.hs|

Updated on:Feb 16, 2022 | 12:30 PM

Share

ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟ ಅನಿರುದ್ಧ (Aniruddha Jatkar) ಅವರದ್ದು ದೊಡ್ಡ ಹೆಸರು. ಮೊದಲಿಗೆ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದ ಅನಿರುದ್ಧ ನಂತರ ಕಿರುತೆರೆಯೆಡೆಗೆ ಹೊರಳಿದರು. ಸಿನಿಮಾಗಳ ಮೂಲಕ ಜನರಿಗೆ ಪರಿಚಿತರಾಗಿದ್ದ ಅವರು, ಧಾರಾವಾಹಿಯ ಮೂಲಕ ಕನ್ನಡಿಗರ ಮನೆ-ಮನ ತಲುಪಿದರು. ಇಂದು (ಫೆಬ್ರವರಿ 16) ಅನಿರುದ್ಧ ಅವರಿಗೆ 47ನೇ ಜನ್ಮದಿನದ ಸಂಭ್ರಮ. ಪ್ರಸ್ತುತ ಕನ್ನಡ ಕಿರುತೆರೆಯಲ್ಲಿ ಬಹುಬೇಡಿಕೆಯ ನಟರಾಗಿರುವ ಅವರ ವೃತ್ತಿಜೀವನದ ಆರಂಭ ಹೇಗಿತ್ತು? ಧಾರಾವಾಹಿ ಅವರ ಬದುಕಿಗೆ ಹೊಸ ತಿರುವು ನೀಡಿದ್ದು ಹೇಗೆ? ನಟನೆಯಾಚೆಗೆ ಅನಿರುದ್ಧ ಮಾಡಿರುವ ಸಾಧನೆಗಳೆಷ್ಟು? ಈ ಎಲ್ಲವುಗಳ ಕುರಿತು ಕುತೂಹಲಕರ ವಿಚಾರಗಳು ಇಲ್ಲಿವೆ.

ಮೊದಲಿಗೆ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅನಿರುದ್ಧ್:

ಅನಿರುದ್ಧ ಅವರು ವ್ಯಾಸಂಗ ಮಾಡಿದ್ದು ಆರ್ಕಿಟೆಕ್ಟ್. ಮೊದಲಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅವರು, ಕೆಲಸದ ನಂತರ ನಾಟಕಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದೇ ಸಮಯದಲ್ಲಿ ಅವರ ಸಿನಿಮಾ ಪಯಣವೂ ಆರಂಭವಾಯಿತು. 2001ರಲ್ಲಿ ದಿನೇಶ್ ಬಾಬು ನಿರ್ದೇಶನದ ‘ಚಿಟ್ಟೆ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಅನಿರುದ್ಧ ಪದಾರ್ಪಣೆ ಮಾಡಿದರು. ಈ ಚಿತ್ರ ವೀಕ್ಷಕರ ಗಮನಸೆಳೆದಿತ್ತು. ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ತುಂಟಾಟ’, ದಿನೇಶ್ ಬಾಬು ನಿರ್ದೇಶನದ ‘ನೀನೆಲ್ಲೋ ನಾನಲ್ಲೇ’ ಮೊದಲಾದ ಚಿತ್ರಗಳು ಅನಿರುದ್ಧ್​ಗೆ ಖ್ಯಾತಿ ತಂದುಕೊಟ್ಟವು. ‘ಇಜ್ಜೋಡು’ ಚಿತ್ರದ ಪಾತ್ರ ಪೋಷಣೆ ಅನಿರುದ್ಧ ಅವರಲ್ಲಿದ್ದ​ ಅಭಿನಯ ಪ್ರತಿಭೆಗೆ ಸಾಕ್ಷಿ ಒದಗಿಸಿತ್ತು.

ಮುಖ್ಯಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಲ್ಲದೇ ‘ರಾಮ ಶಾಮ ಭಾಮ’, ‘ಸತ್ಯವಾನ್ ಸಾವಿತ್ರಿ’ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಅನಿರುದ್ಧ, ಜನರ ಮನಗೆದ್ದಿದ್ದರು. ಕನ್ನಡವಲ್ಲದೇ ತಮಿಳು, ಹಿಂದಿ, ಮರಾಠಿ, ತೆಲುಗು ಚಿತ್ರರಂಗಗಳಲ್ಲೂ ಅವರು ಕೆಲಸ ಮಾಡಿದ್ದಾರೆ. ಚಿತ್ರರಂಗದಲ್ಲಿ ಇಷ್ಟೆಲ್ಲಾ ಗುರುತಿಸಿಕೊಂಡರೂ ಕೂಡ ಅನಿರುದ್ಧ ಅವರಿಗೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ ಎಂದೇ ಹೇಳಬೇಕು. ಅಂತಹ ದೊಡ್ಡ ಯಶಸ್ಸನ್ನು, ಸ್ಟಾರ್ ಪಟ್ಟವನ್ನು ನೀಡಿದ್ದು, ಕನ್ನಡ ಕಿರುತೆರೆ ಕ್ಷೇತ್ರ.

ಜೊತೆ ಜೊತೆಯಲಿ ಮೂಲಕ ವೀಕ್ಷಕರ ಮನೆ-ಮನ ತಲುಪಿದ ಅನಿರುದ್ಧ:

ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅನಿರುದ್ಧ ಅವರು ‘ಜೊತೆ ಜೊತೆಯಲಿ’ ಮೂಲಕ ಕಿರುತೆರೆಗೆ ಹೊರಳಿದರು. ಕನ್ನಡದಲ್ಲಿ ಬಹಳಷ್ಟು ಹೊಸತನವನ್ನು ಹೊತ್ತುತಂದಿದ್ದ ಆ ಧಾರಾವಾಹಿಯಲ್ಲಿ ಅನಿರುದ್ಧ 45 ವರ್ಷದ ಉದ್ಯಮಿ ಆರ್ಯವರ್ಧನ್ ಪಾತ್ರದಲ್ಲಿ ಕಾಣಿಸಿಕೊಂಡರು. ಎಲ್ಲಾ ಸಿದ್ಧಮಾದರಿಗಳನ್ನು ಒಡೆದು, ಹೊಸತನ್ನು ಕಟ್ಟಿಕೊಟ್ಟ ಈ ಧಾರಾವಾಹಿ ಎಲ್ಲೆಡೆ ಜನಪ್ರಿಯವಾಯಿತು. ಭಾರತ ಹಾಗೂ ವಿದೇಶದಲ್ಲೂ ವೀಕ್ಷಕರನ್ನು ಹೊಂದಿದ್ದ ಇದು ಅನಿರುದ್ಧ ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತು.

2019ರ ಸೆಪ್ಟೆಂಬರ್​ನಲ್ಲಿ ಮೊದಲಿಗೆ ಬಿತ್ತರವಾದ ಈ ಧಾರಾವಾಹಿ ಆರಂಭಿಕ ವಾರದಲ್ಲಿ ಅತ್ಯಂತ ಹೆಚ್ಚು ಟಿಆರ್​ಪಿ ಪಡೆದ ಧಾರಾವಾಹಿಯಾಗಿ ದಾಖಲೆ ಬರೆಯಿತು. ದೀರ್ಘ ಕಾಲದವರೆಗೆ ಮೊದಲ ಸ್ಥಾನವನ್ನು ಉಳಿಸಿಕೊಂಡಿತ್ತು. ಇದುವರೆಗೆ ಸುಮಾರು 615ಕ್ಕೂ ಹೆಚ್ಚು ಎಪಿಸೋಡ್​ ಪ್ರಸಾರವಾಗಿರುವ ಇದರ ಕ್ರೇಜ್ ಜನರಿಗೆ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಈಗಲೂ ಟಾಪ್ 5ರೊಳಗೆ ಈ ಧಾರಾವಾಹಿ ಪ್ರತಿ ವಾರ ಕಾಣಿಸಿಕೊಳ್ಳುತ್ತಿದೆ..

‘ಜೊತೆ ಜೊತೆಯಲಿ’ಯ ಅನಿರುದ್ಧ ಅವರ ಪಾತ್ರ ಎಷ್ಟು ಜನಪ್ರಿಯವಾಗಿದೆಯೆಂದರೆ ಜನರು ಅವರನ್ನು ‘ಆರ್ಯವರ್ಧನ್’ ಹೆಸರಿನಿಂದ ಗುರುತಿಸುತ್ತಾರೆ. ಈ ಪಾತ್ರ ಎಲ್ಲೆಡೆ ಟ್ರೆಂಡ್ ಹುಟ್ಟುಹಾಕಿದ್ದಲ್ಲದೇ, ಪ್ರೀತಿಯನ್ನು ಮರುವ್ಯಾಖ್ಯಾನಿಸಿತ್ತು. ಶೀರ್ಷಿಕೆ ಗೀತೆಯಂತೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದನ್ನು ಗಮನಿಸಿದ ಜೀ ವಾಹಿನಿ ಅನಿರುದ್ಧ ಅವರಿಗೆ ‘ಸೆನ್ಸೇಶನ್ ಸ್ಟಾರ್’ ಎಂಬ ಬಿರುದನ್ನೂ ನೀಡಿ ಗೌರವಿಸಿತ್ತು.

ಸೀರಿಯಲ್, ಸಿನಿಮಾದಾಚೆಗೆ ಅನಿರುದ್ಧ ಬರೆದಿರುವ ದಾಖಲೆಗಳು ಒಂದೆರಡಲ್ಲ!

ಅನಿರುದ್ಧ ಅವರಿಗೆ ಬರವಣಿಗೆ ಬಹಳ ಪ್ರಿಯವಾದುದು. ಕಿರುಚಿತ್ರಗಳು ಅವರ ಮತ್ತೊಂದು ಅಸಕ್ತಿಯ ಕ್ಷೇತ್ರ. 2018ರ ವಿಷ್ಣುವರ್ಧನ್ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ 6 ಕಿರುಚಿತ್ರಗಳನ್ನು ಅನಿರುದ್ಧ ತೆರೆಗೆ ತಂದಿದ್ದರು. ಎಲ್ಲವೂ ಸಾಮಾಜಿಕ ಕಳಕಳಿಯ ವಿಚಾರಗಳನ್ನು ಹೊಂದಿದ್ದವು. ವಿಶೇಷವೆಂದರೆ ಈ ಕಿರುಚಿತ್ರಗಳಲ್ಲಿ ಯಾವುದೇ ರೀತಿಯ ಸಂಭಾಷಣೆಗಳಿರಲಿಲ್ಲ. ಮಾತುಗಳಿಲ್ಲದ, ಸಾಮಾಜಿಕ ಕಳಕಳಿ ಸಾರುವ, ವಿವಿಧ ಬಗೆಯ, ಒಂದೇ ದಿನ ಅತಿ ಹೆಚ್ಚು ಕಿರುಚಿತ್ರ ಬಿಡುಗಡೆ ಮಾಡಿದ ಅನಿರುದ್ಧ ಅವರ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಕಲಾಂ ಅವರ ವರ್ಲ್ಡ್ ರೆಕಾರ್ಡ್ಸ್​ನಲ್ಲಿ ದಾಖಲಾಗಿದೆ.

ಡಾ.ಭಾರತಿ ವಿಷ್ಣುವರ್ಧನ್ ಅವರ ಜೀವನವನ್ನು ಕಟ್ಟಿಕೊಡುವ ‘ಬಾಳೆ ಬಂಗಾರ’ ಎಂಬ ಸಾಕ್ಷ್ಯಚಿತ್ರವನ್ನು ಅನಿರುದ್ಧ ನಿರ್ದೇಶಿಸಿದ್ದಾರೆ. ಇದರ ವಿಷಯ, ವಸ್ತು ಸಂಗ್ರಹ, ಚಿತ್ರಕತೆ ಮತ್ತು ನಿರೂಪಣೆಯಲ್ಲೂ ಅವರು ತೊಡಗಿಸಿಕೊಂಡಿದ್ದರು. ಬದುಕಿರುವ ಮೇರು ನಟಿಯೊಬ್ಬರ ಕುರಿತು ಭಾರತದಲ್ಲಿ ತಯಾರಾದ ಅತ್ಯಂತ ದೀರ್ಘ ಕಾಲಾವಧಿಯ (141 ನಿಮಿಷ) ಸಾಕ್ಷ್ಯಚಿತ್ರ ಎಂಬ ಖ್ಯಾತಿಯನ್ನು ಇದು ಪಡೆದಿದೆ. ಇದೂ ಕೂಡ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಕಲಾಂ ಅವರ ವರ್ಲ್ಡ್ ರೆಕಾರ್ಡ್ಸ್​ನಲ್ಲಿ ದಾಖಲಾಗಿದೆ. ಇದುವರೆಗೆ ಒಟ್ಟು 20 ದಾಖಲೆಗಳನ್ನು ಬರೆದು ವಿಶಿಷ್ಟ ಛಾಪು ಮೂಡಿಸಿದ್ದಾರೆ ಅನಿರುದ್ಧ.

‘ಸೆನ್ಸೇಶನ್ ಸ್ಟಾರ್​’ಗೆ ಹುಟ್ಟುಹಬ್ಬದ ಶುಭಾಶಯ..

ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ಭಾರತಿ ವಿಷ್ಣುವರ್ಧನ್ ಪುತ್ರಿ ಕೀರ್ತಿ ವಿಷ್ಣುವರ್ಧನ್ ಅವರನ್ನು ಅನಿರುದ್ಧ್ ವಿವಾಹವಾಗಿದ್ದಾರೆ. ದಂಪತಿಗೆ ಜ್ಯೇಷ್ಠವರ್ಧನ್ ಹಾಗೂ ಶ್ಲೋಕ ಎಂಬ ಮಕ್ಕಳಿದ್ದಾರೆ. ನಟನೆಯೊಂದಿಗೆ ಬರವಣಿಗೆ, ಅಂಕಣ ಬರಹ, ಗಾಯನ, ಸಾಮಾಜಿಕ ಕಾರ್ಯಗಳಲ್ಲಿ ಅನಿರುದ್ಧ ಅವರು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಜನ-ಮನ ಗೆದ್ದು, ಅಪಾರ ಖ್ಯಾತಿ ಪಡೆದಿದ್ದರೂ ಸರಳತೆಯಿಂದ, ವಿನಯದಿಂದ ಗುರುತಿಸಿಕೊಂಡಿರುವ ‘ಸೆನ್ಸೇಶನ್​ ಸ್ಟಾರ್​’ಗೆ ಹುಟ್ಟುಹಬ್ಬದ ಶುಭಾಶಯ..

ಇದನ್ನೂ ಓದಿ:

ನಟಿ ಭಾರತಿ ವಿಷ್ಣುವರ್ಧನ್​ ಕುರಿತ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರದಿಂದ ದಾಖಲೆ ಬರೆದ ಅನಿರುದ್ಧ

Bappi Lahiri: ಚಿತ್ರರಂಗದ ದಿಗ್ಗಜರೊಂದಿಗೆ ಕೆಲಸ ಮಾಡಿದ್ದ ಬಪ್ಪಿ ಲಹಿರಿ; ಇಲ್ಲಿವೆ ಅಪರೂಪದ ಫೋಟೋಗಳು

Published On - 12:21 pm, Wed, 16 February 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ