ಕಿರಣ್ ರಾಜ್ ಅವರು ‘ಕನ್ನಡತಿ’ (Kannadati) ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡವರು.. ಅವರಿಗೆ ಸಾಕಷ್ಟು ಖ್ಯಾತಿಯನ್ನು ಈ ಧಾರಾವಾಹಿ ತಂದುಕೊಟ್ಟಿತ್ತು. ಆ ಬಳಿಕ ಅವರಿಗೆ ಸಿನಿಮಾ ರಂಗದಿಂದ ಆಫರ್ಗಳು ಬಂದಿದ್ದು ಗೊತ್ತೇ ಇದೆ. ಅವರು ಈಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ಬಾರಿ ಅವರು ಕಲರ್ಸ್ ಕನ್ನಡದ ಬದಲು ಜೀ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೌದು, ಜೀ ಕನ್ನಡದಲ್ಲಿ ಆರಂಭ ಆಗುತ್ತಿರುವ ಹೊಸ ಧಾರಾವಾಹಿಯಲ್ಲಿ ಕಿರಣ್ ರಾಜ್ ಅವರು ನಟಿಸುತ್ತಿದ್ದಾರೆ. ಇದರ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ.
ಜೀ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಲೇ ಇರುತ್ತವೆ. ಈಗ ಈ ಸಾಲಿಗೆ ‘ಕರ್ಣ’ ಹೆಸರು ಸೇರ್ಪಡೆ ಆಗಿದೆ. ಈ ಮೊದಲು ‘ಕರ್ಣ’ ಹೆಸರಿನ ಸಿನಿಮಾ ಪ್ರಸಾರ ಕಂಡಿತ್ತು. ಅದೇ ಶೀರ್ಷಿಕೆಯಲ್ಲಿ ಧಾರಾವಾಹಿ ಬರುತ್ತಿದೆ. ಹಾಗಾದರೆ ಧಾರಾವಾಹಿಯ ಕಥೆ ಏನು? ಕಿರಣ್ ರಾಜ್ ಪಾತ್ರವೇನು ಎಂಬುದಕ್ಕೂ ಉತ್ತರ ಇದೆ.
ಕರ್ಣ ಎಂಬುದು ಕಥಾ ನಾಯಕ ಕಿರಣ್ ರಾಜ್ ಅವರ ಹೆಸರು. ಕರ್ಣ ದೊಡ್ಡ ಸ್ತ್ರೀರೋಗ ತಜ್ಞ. ಅವನಿಗೆ ಅವಾರ್ಡ್ ಕೂಡ ಬಂದಿದೆ. ಅವನು ಹೊರಗೆ ದೊಡ್ಡ ವೈದ್ಯನಾಗಿರಬಹುದು, ಆದರೆ, ಮನೆಯಲ್ಲಿ ಆತ ಕೆಲಸ ಮಾಡುವ ವ್ಯಕ್ತಿಯಷ್ಟೇ! ಹೌದು, ಆತನನ್ನು ಮನೆಯಲ್ಲಿ ಎಲ್ಲರೂ ಕೆಲಸದವರಂತೆ ನೋಡುತ್ತಾರೆ. ಏನೇ ಬೇಕಿದ್ದರೂ ಆತನ ಬಳಿ ಹೇಳುತ್ತಾರೆ. ಚಪ್ಪಲಿ ಹೊಲಸಿಕೊಂಡು ಬರುವ ಕೆಲಸವೂ ಆತನದ್ದೇ. ಇದಕ್ಕೆ ಕಾರಣವೂ ಇದೆ.
ಕರ್ಣನ ತಂದೆ ಈತ ಮಗ ಎಂದು ಒಪ್ಪಿಕೊಳ್ಳಲು ರೆಡಿ ಇಲ್ಲ. ಆತನನ್ನು ತಿಪ್ಪೆಯಿಂದ ಎತ್ತಿಕೊಂಡು ಬಂದಿದ್ದು ಎಂದು ಹೇಳುತ್ತಾನೆ. ಮನೆಯಲ್ಲಿ ಯಾವುದೇ ಕೆಲಸ ಆಗಬೇಕಿದ್ದರೂ ಆತನಿಗೆ ಹೇಳಲಾಗುತ್ತದೆ. ಈ ರೀತಿಯಲ್ಲಿ ಧಾರಾವಾಹಿ ಮೂಡಿ ಬರುತ್ತಿದೆ. ಸದ್ಯ ಧಾರಾವಾಹಿ ಯಾವಾಗ ಬರುತ್ತದೆ ಎಂದು ಇನ್ನೂ ರಿವೀಲ್ ಮಾಡಿಲ್ಲ.
ಇದನ್ನೂ ಓದಿ: ಸನಾತನ ಧರ್ಮದ ಕಥೆ ಇರುವ ಸೂಪರ್ ಹೀರೋ ಸಿನಿಮಾದಲ್ಲಿ ಕಿರಣ್ ರಾಜ್ ನಟನೆ
‘ಕನ್ನಡತಿ’ ಧಾರಾವಾಹಿಯಲ್ಲಿ ಅವರು ಸ್ಟೈಲಿಶ್ ಹೀರೋ ಆಗಿದ್ದರು. ಇಲ್ಲಿಯೂ ಅದು ಮುಂದುವರಿದಿದೆ. ಇಲ್ಲಿಯೂ ಕರ್ಣ ಶ್ರೀಮಂತ ಕುಟುಂಬದವನೇ ಆಗಿದ್ದಾನೆ. ಅವರು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ನಾಯಕಿ ಯಾರು ಎಂಬುದು ಇನ್ನಷ್ಟೇ ರಿವೀಲ್ ಆಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.