ರಾಧಾ-ಕೃಷ್ಣರ ನಡುವೆ ಬಿರುಕು, ಭವ್ಯಾದು ಬರೀ ಸ್ವಾರ್ಥವಾ?

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11ರಲ್ಲಿ ಭವ್ಯಾ ಮತ್ತು ತ್ರಿವಿಕ್ರಮ್ ಬಹಳ ಆಪ್ತವಾಗಿದ್ದರು. ಇಬ್ಬರ ಆಪ್ತತೆ ಬಗ್ಗೆ ಮನೆ ಮಂದಿ ಮತ್ತು ಸುದೀಪ್ ಕಾಲೆಳೆಯುತ್ತಿದ್ದರು. ತ್ರಿವಿಕ್ರಮ್ ಅವರ ಅಮ್ಮನಂತೂ ಇವರನ್ನು ರಾಧೆ-ಕೃಷ್ಣನಿಗೆ ಹೋಲಿಸಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಇವರಿಬ್ಬರು ದೂರಾಗಿದ್ದಾರೆ.

ರಾಧಾ-ಕೃಷ್ಣರ ನಡುವೆ ಬಿರುಕು, ಭವ್ಯಾದು ಬರೀ ಸ್ವಾರ್ಥವಾ?
Bigg Boss Kannada

Updated on: Jan 05, 2025 | 10:12 AM

ಬಿಗ್​ಬಾಸ್ ಮನೆಯಲ್ಲಿ ಪ್ರತಿ ಬಾರಿಯೂ ಒಂದು ಲವ್ ಸ್ಟೋರಿ ನಡೆಯುತ್ತದೆ. ಯಾರೋ ಇಬ್ಬರ ನಡುವೆ ಆಪ್ತ ಗೆಳೆತನ ಏರ್ಪಡುತ್ತದೆ. ಕಳೆದ ಬಾರಿ ಕಾರ್ತಿಕ್-ಸಂಗೀತ, ಮೈಖಲ್-ಇಶಾನಿ, ಈ ಬಾರಿ ತ್ರಿವಿಕ್ರಮ್ ಮತ್ತು ಭವ್ಯಾ ಬಹಳ ಆಪ್ತವಾಗಿದ್ದಾರೆ. ತ್ರಿವಿಕ್ರಮ್ ಬಗ್ಗೆ ಭವ್ಯಾ ಅವಕಾಶ ಸಿಕ್ಕಾಗೆಲ್ಲ ಹೊಗಳಿ ಅಟ್ಟಕ್ಕೇರಿಸುತ್ತಾರೆ. ತ್ರಿವಿಕ್ರಮ್ ಅಂಥಹಾ ವ್ಯಕ್ತಿಯನ್ನೇ ಈ ವರೆಗೆ ನಾನು ನೋಡಿಲ್ಲ ಎಂದಿದ್ದಾರೆ. ತ್ರಿವಿಕ್ರಮ್ ಸಹ ಭವ್ಯಾ ಅನ್ನು ಬಿಟ್ಟುಕೊಟ್ಟದ್ದಿಲ್ಲ. ಭವ್ಯಾಗೆ ಸದಾ ಸಹಾಯ ಮಾಡುತ್ತಲೇ ಇರುತ್ತಾರೆ. ಹಲವು ವಾರಗಳಿಂದಲೂ ಆತ್ಮೀಯರಾಗಿದ್ದ ಇವರ ನಡುವೆ ಈಗ ಬಿರುಕು ಮೂಡಿದೆ.

ಕೆಲ ದಿನಗಳ ಹಿಂದಷ್ಟೆ ಬಿಗ್​ಬಾಸ್ ಮನೆಗೆ ಬಂದಿದ್ದ ತ್ರಿವಿಕ್ರಮ್ ಅವರ ತಾಯಿ, ತ್ರಿವಿಕ್ರಮ್ ಮತ್ತು ಭವ್ಯಾ ಅವರನ್ನು ರಾಧೆ-ಕೃಷ್ಣರಿಗೆ ಹೋಲಿಸಿದ್ದರು. ಭವ್ಯಾ ಎದುರೇ ಈ ಬಗ್ಗೆ ಮಾತನಾಡಿದ್ದು, ಇಬ್ಬರೂ ಚೆನ್ನಾಗಿರಿ ಎಂದಿದ್ದರು. ಆದರೆ ಅದಾದ ಕೆಲವೇ ದಿನದಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಅವರ ನಡುವೆ ಬಿರುಕು ಮೂಡಿದೆ. ಅದರಲ್ಲೂ ತ್ರಿವಿಕ್ರಮ್ ಅಂತೂ ಭವ್ಯಾ ಅವರನ್ನು ಸ್ವಾರ್ಥಿಯೆಂದು ಜರಿದಿದ್ದಾರೆ.

ನಿನ್ನೆಯ ಎಪಿಸೋಡ್​ನಲ್ಲಿ ಸುದೀಪ್, ಮನೆ ಮಂದಿಯಿಂದ ಆಕ್ಟಿವಿಟಿ ಒಂದನ್ನು ಮಾಡಿಸಿದರು. ಯಾವ ಒಬ್ಬ ಸ್ಪರ್ಧಿಯನ್ನು ತೆಗೆದು ಹಾಕಿದರೆ ನಿಮ್ಮ ಬಿಗ್​ಬಾಸ್ ಜರ್ನಿ ಸುಲಭ ಆಗುತ್ತದೆ ಎಂಬ ಪ್ರಶ್ನೆ ಕೇಳಿದರು. ಆಗ ಭವ್ಯಾ, ತ್ರಿವಿಕ್ರಮ್ ಚಿತ್ರವನ್ನು ಕತ್ತಿರಿಸಿ ನೆಲಕ್ಕೆ ಎಸೆದರು. ಇವರಿಂದಲೇ ನನ್ನ ಆಟ ಸ್ಲೋ ಆಗುತ್ತಿದೆ. ಇವರು ಇಲ್ಲ ಎಂದಾದರೆ ನನ್ನ ಆಟ ಸ್ಪೀಡ್ ಆಗಿರುತ್ತದೆ ಎಂದರು.

ಇದನ್ನೂ ಓದಿ:ತ್ರಿವಿಕ್ರಮ್ ಕೊಬ್ಬಿನ ಮಾತಿಗೆ ತಕ್ಕ ಪಾಠ ಕಲಿಸಿದ ಸುದೀಪ್

ವಿಶೇಷವೆಂದರೆ ತ್ರಿವಿಕ್ರಮ್ ಸಹ ಭವ್ಯಾ ಗೌಡ ಅವರ ಫೋಟೊ ಕಟ್ ಮಾಡಿದರು. ‘ನನ್ನನ್ನು ಯಾರೂ ಸಹ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ನನಗೆ ಇಷ್ಟ ಇಲ್ಲ’ ಎಂದರು. ಆ ಮೂಲಕ ಭವ್ಯಾ ಗೌಡ ತಮ್ಮನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು. ಕಳೆದ ಇಷ್ಟು ವಾರಗಳಿಂದ ಭವ್ಯಾ ಹಾಗೂ ತ್ರಿವಿಕ್ರಮ್ ಬಹಳ ಆಪ್ತರು. ಭವ್ಯಾಗಾಗಿ ತ್ರಿವಿಕ್ರಮ್ ತ್ಯಾಗ ಮಾಡಬಲ್ಲರು ಎಂದೆಲ್ಲ ಹೇಳಲಾಗಿತ್ತು. ಆದರೆ ಈಗ ತ್ರಿವಿಕ್ರಮ್ ನೇರವಾಗಿ ಭವ್ಯಾ ಅನ್ನು ಸ್ವಾರ್ಥಿ ಎಂದು ಕರೆದಿದ್ದಾರೆ. ತನ್ನನ್ನು ಬಳಸಿಕೊಂಡು ಭವ್ಯಾ ಬಿಗ್​ಬಾಸ್ ಮನೆಯಲ್ಲಿ ಮೇಲಕ್ಕೆ ಏರುತ್ತಿದ್ದಾರೆ ಎಂದಿದ್ದಾರೆ.

ಭಾನುವಾರದಿಂದ ಬಹುಷಃ ತ್ರಿವಿಕ್ರಮ್ ಮತ್ತು ಭವ್ಯಾ ಮೊದಲಿನಂತೆ ಆಪ್ತ ಗೆಳೆಯರಾಗಿರುವುದಿಲ್ಲ ಅನಿಸುತ್ತದೆ. ಸುದೀಪ್ ಸಹ ಕಳೆದ ಹಲವು ವಾರಗಳಿಂದಲೂ ಇದನ್ನೇ ಹೇಳುತ್ತಾ ಬಂದಿದ್ದಾರೆ. ಭವ್ಯಾ-ತ್ರಿವಿಕ್ರಮ್ ಗೆಳೆತನ ಮಾತ್ರವೇ ಅಲ್ಲದೆ, ಗೌತಮಿ ಹಾಗೂ ಉಗ್ರಂ ಮಂಜು ಗೆಳೆತನವೂ ಸಹ ಮುರಿದು ಬಿದ್ದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us