ಅಂದವರಿಗೆ, ಆಡಿಕೊಂಡವರಿಗೆ ವರ್ತೂರು ಸಂತೋಷ್ ಖಡಕ್ ಉತ್ತರ

Bigg Boss Kannada: ಬಿಗ್​ಬಾಸ್​ ಮನೆಯಲ್ಲಿ ಏಳು-ಬೀಳಿನ ಜರ್ನಿ ಮಾಡಿದ ವರ್ತೂರು ಸಂತೋಷ್, ಹೊರಗೆ ಬಂದ ಬಳಿಕ ಬಿಗ್​ಬಾಸ್ ಮಾತ್ರವಲ್ಲದೆ, ಹಲವು ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಅಂದವರಿಗೆ, ಆಡಿಕೊಂಡವರಿಗೆ ವರ್ತೂರು ಸಂತೋಷ್ ಖಡಕ್ ಉತ್ತರ

Updated on: Jan 30, 2024 | 10:54 PM

ಬಿಗ್​ಬಾಸ್ (BiggBoss) ಮನೆಯಲ್ಲಿ ಹಲವು ಏಳು-ಬೀಳುಗಳನ್ನು ಕಂಡ ವರ್ತೂರು ಸಂತೋಷ್ ಫಿನಾಲೆ ದಿನದಂದು ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ಅವರ ಬಿಗ್​ಬಾಸ್ ಜರ್ನಿಯ ಬಗ್ಗೆ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಹೆಮ್ಮೆ ಇದೆ. ಬಿಗ್​ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಮಾತನಾಡಿರುವ ವರ್ತೂರು ಸಂತೋಷ್, ‘ಬಿಗ್ ಬಾಸ್ ಮನೆಯಲ್ಲಿ ನಾನಂತೂ ಮುಖವಾಡ ಹಾಕಿ ಬದುಕಿಲ್ಲ, ಕೆಲವರು ಇದು ಸ್ಕ್ರಿಪ್ಟೆಟ್ ಹಾಗೇ ಹೀಗೆ ಅಂತಿದ್ದರು. ಆದರೆ ನನ್ನ ಮನಸ್ಸಲ್ಲಿ ಏನಿತ್ತು ಅದೇ ರೀತಿ ಆಟ ಆಡಿದ್ದೇನೆ, ಮಾತಾಡಿದ್ದೇನೆ’ ಎಂದಿದ್ದಾರೆ.

‘ಹೋದ ವರ್ಷ ರೇಸ್ ಮಾಡಿ ಸಕ್ಸಸ್ ಆಗಿದ್ದೇನೆ. ಈಗ ಮಾರ್ಚ್​ನಲ್ಲಿ ಇನ್ನೊಂದು ರೇಸ್ ಮಾಡಲು ಯೋಜನೆ ಹಾಕಿಕೊಂಡಿದ್ದೇನೆ. ಕೆಲವರು ಅಂತಾರೆ ಗೋಣಿಚೀಲದಲ್ಲಿ ಹಣ ತುಂಬಿಕೊಂಡು ಬಂದರು ಅಂತಾ, ಅವರ್ಯಾರೋ ಮಾತಾಡೋರು ಬಂದು ಅವತ್ತು ನೋಡಲಿ, ಈ ಬಾರೀ ಬಿಗ್ ಬಾಸ್ ಗೆ ಹೋಗಿ ಬಂದಿದ್ದೇನೆ. ಹ್ಯಾಪಿ ಬಿಗ್ ಬಾಸ್ ತರ ಹ್ಯಾಪಿಯಾಗೇ ರೇಸ್ ಮಾಡ್ತೀನಿ, ‘ಹ್ಯಾಪಿ ರೇಸ್’ ಈ ಬಾರಿಯದ್ದು. ನನ್ನ ಅಭಿಮಾನಿಗಳಿಗೆ ನಾನು ಯಾವಾಗಲೂ ಚಿರಋಣಿಯಾಗಿರ್ತೀನಿ, ಬಿಗ್ ಬಾಸ್ ಗೆ ಹೋಗಿ ಬಂದ ಮೇಲೆ ಸಿಗಲ್ಲ ಅಂತಾ ಕೆಲವರು ಅಂದುಕೊಂಡಿದ್ದಾರೆ, ನಾನು ಯಾವಾಗಲೂ ನಿಮಗೆ ಸಿಗ್ತೀನಿ, ನಿಮ್ಮಜೊತೆಗೆ ಇರ್ತೀನಿ’ ಎಂದು ಭರವಸೆ ಕೊಟ್ಟಿದ್ದಾರೆ ವರ್ತೂರು ಸಂತೋಷ್.

‘ನಾನು ಯಾರಿಗೂ ಮೋಸ ಮಾಡಿಲ್ಲ,ಯಾರ ಬಳಿಯೂ ಏನೂ ಕಿತ್ತುಕೊಂಡಿಲ್ಲ. ನಾನು ಆ ಬಸಪ್ಪ, ನನ್ನ ಜನರನ್ನು ನಂಬಿದ್ದೇನೆ, ಮುಂದೆಯೂ ನಂಬುತ್ತೇನೆ. ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ವಿಷಯ ಕಲಿತಿದ್ದೇನೆ, ಬಿಗ್ ಬಾಸ್ ಮನೆ ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು ಅವಕಾಶ ಕೊಟ್ಟಿತು. ಬಿಗ್ ಬಾಸ್ ಮನೆಯಲ್ಲಿ ಸಂಬಂಧಗಳ ಬೆಲೆಯನ್ನು ತುಂಬ ಕಲಿತೆ. ಜನರು, ಅಭಿಮಾನಿಗಳ ಬೆಂಬಲವನ್ನು ಯಾವತ್ತೂ ಮರೆಯಲ್ಲ. ನನಗೆ ಪ್ರತಿಬಾರಿಯೂ ಜನರು, ಅಭಿಮಾನಿಗಳು ಕಾದಿದ್ದಾರೆ, ಶಿವನನ್ನು ನಂದಿ ಕಾವಲು ಅನ್ನೋ ಹಾಗೇ ಜನರು ನನಗೆ ಕಾವಲಾಗಿ ಇದ್ದರು’ ಎಂದಿದ್ದಾರೆ.

‘ಹಳ್ಳಿಕಾರ್ ಹೋರಿಗಳ ಹೆಸರಲ್ಲಿ ದುಡ್ಡು ಮಾಡಿದ ಅಂತಾ ಕೆಲವರು ಟೀಕೆ ಮಾಡಿದ್ದಾರೆ. ಹಳ್ಳಿಕಾರ್ ಬಗ್ಗೆ ಧ್ವನಿ ಎತ್ತಿದವರು ಯಾರು ಅಂದರೆ ಒಂದು ಮಗು ಕೂಡ ನ್ನ ಹೆಸರೇ ಹೇಳುತ್ತೆ. ಆದ್ರೆ ಆತ್ಶಸಾಕ್ಷಿಯಾಗಿ ಹಳ್ಳಿಕಾರ್ ಬಸಪ್ಪನನ್ನ ನಂಬಿದ್ದೇನೆ, ನಾನು ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಕೆಲವರು ಏನೇನೋ ಮಾತಾಡಿದ್ರಂತೆ, ಅವರ ಹೆಸರುಗಳನ್ನು ಹೇಳಿ ಬಾಯಿಗೆ ಗಂಜಲ ತಗೊಂಡು ತೊಳೆದುಕೊಳ್ಳೋಕೆ ಹೋಗಲ್ಲ. ನನ್ನ ಜೀವ ಒಂದು ಕಡೆ ಇಟ್ಟು, ಹಳ್ಳಿಕಾರ್ ಒಂದ್ ಕಡೆ ಇಟ್ಟರೆ ಹಳ್ಳಿಕಾರ್ ಒಂದು ಕಡೆ ಇರುತ್ತೆ’ ಎಂದರು ವರ್ತೂರು ಸಂತು.

ಇದನ್ನೂ ಓದಿ:ಬಿಗ್​ಬಾಸ್ ವೋಟಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತದೆ? ವಿವರಿಸಿದ ಕಿಚ್ಚ ಸುದೀಪ್

‘ನಮ್ಮನೆ ದುಡ್ಡಲ್ಲಿ ರೇಸ್ ಮಾಡಿದರೆ ರೇಸ್ ಮಾಡಿ ದುಡ್ಡು ಬಾಚಿಕೊಂಡ ಅಂದರು. ಹಳ್ಳಿಕಾರ್ ಹಸುಗಳಿಗೆ ಜಾತ್ರೆಯಲ್ಲಿ ಚಿನ್ನದ ಪದಕ ತೊಡಿಸಿದ್ದು ನಾವು, ಹಳ್ಳಿಕಾರ್ ಒಡೆಯ ಅಂತಾ ಜನ ಬಿರುದು ಕೊಟ್ಟರು, ಆ ಬಿರುದು ನನಗೆ ನಾನು ಕೊಟ್ಟುಕೊಂಡಿಲ್ಲ, ಇದು ಹರಿಯೋ ನೀರು, ಇನ್ನೊಬ್ಬ ಬೇಕಿದ್ರೆ ಪ್ರಚಾರ ಮಾಡಲಿ, ಇಡೀ ಕರ್ನಾಟಕದಲ್ಲಿ ಎಲ್ಲೇ ಕರೀರಿ ಒಂದು ರೂಪಾಯಿ ಇಲ್ಲದೇ ಬರ್ತೀನಿ, ಮಾಡ್ತೀನಿ. ಯಾರೋ 50 ಸಾವಿರ ಕೊಟ್ಟರು, ಅದನ್ನು ಎತ್ತಿಗೆ ಪದಕ ಮಾಡಿ ಹಾಕಿದ್ದೀನಿ, ವಿಧಾನಸೌಧದಲ್ಲಿ ಬಂದು ಸಿಎಂ ಹತ್ತಿರ ರೇಸ್ ಗೆ ಪರ್ಮಿಷನ್ ಪಡಿದಿದ್ದೇನೆ’ ಎಂದಿದ್ದಾರೆ ವರ್ತೂರು ಸಂತೋಷ್.

‘ನನ್ನ, ತನಿಷಾ ಸ್ನೇಹಕ್ಕೆ ಬೇರೆ ಬೇರೆ ಬಣ್ಣ ಕಟ್ಟಿದರು. ಕಾಮಾಲೆ ಕಣ್ಣಿನವರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತೆ. ಅದು ನೋಡುವವರ ಕಣ್ಣಲ್ಲಿ ಆ ರೀತಿ ಬೇರೆ ಬೇರೆ ಇರುತ್ತೆ. ಅದಕ್ಕೆ ಅಂತವರ ಕಣ್ಣಿಗೆ ಟ್ರೀಟ್ ಮೆಂಟ್ ಕೊಡಬೇಕು, ನಾನೇನ್ ಮಾಡೋಕೆ ಆಗಲ್ಲ, ಹುಲಿ ಉಗುರಿನ ಪ್ರಕರಣ ಆದಾಗ ನನ್ನ ತಾಯಿ, ಊರಿನ ಜನ ಬೆನ್ನೆಲುಬಾಗಿ ನಿಂತರು, ರ್ಯಾಲಿಗಳ ಮೂಲಕ ನನಗೆ ಧೈರ್ಯ ತುಂಬಿ ಹಾರೈಸಿದರು. ಪ್ರತಿಯೊಂದು ಊರಲ್ಲಿ ಜನರು ನನಗೆ ಬೆಂಬಲ ಸೂಚಿಸಿದರು. ನಾವಿದ್ದೀವೆ ಅಂತಾ ಬೆನ್ನೆಲುಬಾಗಿ ನಿಂತರು’ ಎಂದು ಜನರ ಸಹಾಯ ನೆನಪಿಸಿಕೊಂಡರು.

ವಿವಾದ ಸೃಷ್ಟಿಸಿದ್ದ ಮದುವೆ ವಿಚಾರದ ಬಗ್ಗೆ ಮಾತನಾಡಿದ ವರ್ತೂರು ಸಂತೋಷ್, ‘ನಾನು ಬಿಚ್ಚಿಟ್ಟ ತೆರೆದ ಪುಸ್ತಕ, ಯಾರು ಬೇಕಾದರೂ ವಿಮರ್ಶೆ ಮಾಡಬಹುದು. ನಾನೇನಾದರೂ ತಪ್ಪು ಮಾಡಿದ್ದರೆ ನಾನು ಓಡಿಹೋಗಬೇಕಿತ್ತು. ಅಂತ ಕೆಲಸಗಳನ್ನು ಮಾಡಿಕೊಂಡು ಯಾರೂ ಅಂತಾ ಶೋ ಗಳಿಗೆ ಬರಲ್ಲ. ವೈಯಕ್ತಿಕ ವಿಚಾರವನ್ನು ಪಬ್ಲಿಕ್ ಆಗಿ ಹೇಳಿಕೊಳ್ಳೋದಕ್ಕೆ ನನಗೆ ಇಷ್ಟ ಇಲ್ಲ, ಈಗಾಗಲೇ ಅದನ್ನ ಹಿರಿಯರು, ಮುಖಂಡರ ಗಮನಕ್ಕೆ ತಂದಿದ್ದೇನೆ, ದೊಡ್ಡವರೆಲ್ಲ ಏನು ನಿರ್ಧಾರ ತಗೋತಾರೋ ಅದಕ್ಕೆ ಬದ್ಧನಾಗಿರ್ತೀನಿ’ ಎಂದರು.

ಇದನ್ನೂ ಓದಿ:‘ಸಾಮರ್ಥ್ಯ ಇದ್ರೆ ಮೂರು ಮದುವೆ ಆಗಲಿ’; ವರ್ತೂರು ಸಂತೋಷ್​ ಬಗ್ಗೆ ತಾಯಿ ಮಾತು..

ಬಿಗ್​ಬಾಸ್ ಸ್ಪರ್ಧಿಗಳ ಬಗ್ಗೆ ಮಾತನಾಡುತ್ತಾ, ‘ಬಿಗ್ ಬಾಸ್ ಮನೆಯಲ್ಲಿ ನನಗೆ ಯಾರು ಟಫ್ ಕಾಂಪಿಟೇಟರ್ ಅನ್ನಿಸಲಿಲ್ಲ, ನಮ್ರತಾಗೆ ಕೋಪ ಬಂದರೆ ಅದನ್ನ ನೋಡೋಕೆ ಆಗತಿರಲಿಲ್ಲ. ಕಣ್ಣುಗಳನ್ನ ಒಂದು ರೀತಿ ಬಿಟ್ಟು ಮಾಡ್ತಿದ್ದರು. ನನಗೆ ಟಾಸ್ಕ್ ಅಂತಾ ಏನಿತ್ತು ಅದನ್ನ ಮಾಡ್ತಿದ್ದೆ’ ಎಂದರು. ಸುದೀಪ್ ಬಗ್ಗೆ ಮಾತನಾಡಿ, ‘ಸುದೀಪ್ ಅವರು ಒಂದು ದಿನ ಕೂಡ ರೆಡಿಯಾಗದೇ ಶೋಗೆ ಬರ್ತಿರಲಿಲ್ಲ, ಅವರಿಗೆ ದೊಡ್ಡ ಹ್ಯಾಟ್ಸಾಫ್, ಅವರ ಮಾತು ಸ್ಫೂರ್ತಿದಾಯಕ ಮಾತು ನಮ್ಮ ತಪ್ಪುಗಳನ್ನ ತಿದ್ದಲು ಸಹಾಯ ಆಯ್ತು’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us