
ಕಾಲಿವುಡ್ ನಟ ದಳಪತಿ ವಿಜಯ್ (Thalapathy Vijay) ಅವರು ಈಗ ಸಿನಿಮಾಗಿಂತಲೂ ರಾಜಕೀಯದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಈಗಾಗಲೇ ಅವರು ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇರುವುದರಿಂದ ಹೋದಲ್ಲೆಲ್ಲ ಜನರು ಸೇರುತ್ತಿದ್ದಾರೆ. ಇನ್ನು, ಅವರನ್ನು ಹತ್ತಿರದಿಂದ ನೋಡಬೇಕು ಎಂಬ ಆಸೆ ಇರುವ ಹುಚ್ಚು ಅಭಿಮಾನಿಗಳು (Thalapathy Vijay Fans) ಪ್ರಾಣವನ್ನೇ ಪಣಕ್ಕಿಟ್ಟು ಸಾಹಸ ಮಾಡುತ್ತಿದ್ದಾರೆ. ಅದಕ್ಕೆ ಇಲ್ಲೊಂದು ಲೇಟೆಸ್ಟ್ ಉದಾಹರಣೆ ಇದೆ. ವಿಜಯ್ ಅವರನ್ನು ನೋಡಲು ಅಭಿಮಾನಿಯೊಬ್ಬ ಮರದಿಂದ ಜಿಗಿದಿದ್ದಾನೆ!
ದಳಪತಿ ವಿಜಯ್ ಅವರು ಶನಿವಾರ (ಏಪ್ರಿಲ್ 26) ಕೊಯಮತ್ತೂರಿನಲ್ಲಿ ತಮ್ಮ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ವ್ಯಾನ್ ಮೇಲೆ ನಿಂತು ಅವರು ಜನರತ್ತ ಕೈ ಬೀಸುತ್ತಿದ್ದರು. ಆ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಮರದಿಂದ ಜಿಗಿದು ವಾನ್ ಏರಿದ್ದಾನೆ. ಆತನ ವರ್ತನೆಯಿಂದ ವಿಜಯ್ ಅವರಿಗೆ ಒಂದು ಕ್ಷಣ ಶಾಕ್ ಆಯಿತು. ಬಳಿಕ ಪಕ್ಷದ ಸ್ಕಾರ್ಫ್ ನೀಡಿ, ಆತನನ್ನು ಸಮಾಧಾನ ಮಾಡಿ ಕಳಿಸಲಾಯಿತು.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಅನೇಕರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರಿಗೆ ಇದು ಸಂಪೂರ್ಣ ನಾಟಕ ಎನಿಸಿದೆ. ‘ಈ ರೀತಿ ಮೊದಲೇ ಪ್ಲ್ಯಾನ್ ಮಾಡಿಕೊಂಡು ಕಾರ್ಯರೂಪಕ್ಕೆ ತರಲಾಗಿದೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇದು ಗಿಮಿಕ್ ಎಂದು ಕೂಡ ಜನರು ಹೇಳುತ್ತಿದ್ದಾರೆ.
#WATCH | திடீரென மரத்தில் இருந்து தாவிய தொண்டர்.. பதறிப் போன தவெக தலைவர் விஜய்#SunNews | #TVKVijay | #Coimbatore pic.twitter.com/kMMeznkNaE
— Sun News (@sunnewstamil) April 26, 2025
ಇನ್ನೂ ಕೆಲವು ನೆಟ್ಟಿಗರು ವಿಜಯ್ ಅಭಿಮಾನಿಯ ಈ ಕೆಲಸವನ್ನು ಟೀಕಿಸಿದ್ದಾರೆ. ‘ಇದೊಂಥ ಹುಚ್ಚಾಟ. ನಟ, ರಾಜಕಾರಣಿ ವಿಜಯ್ ಅವರನ್ನು ನೋಡಲು ಮರದಿಂದ ಜಿಗಿಯಲಾಗಿದೆ. ವಿಜಯ್ ಅಭಿಮಾನಿಗಳಿಗೆ ಬುದ್ಧಿ ಇದೆಯೇ? ಇಂಥ ಮೂರ್ಖತನವನ್ನು ನಾನು ದ್ವೇಷಿಸುತ್ತೇನೆ’ ಎಂಬ ಕಮೆಂಟ್ ಕೂಡ ಬಂದಿದೆ.
ಇದನ್ನೂ ಓದಿ: ‘ಸಿನಿಮಾದಲ್ಲಿ ಮುಸ್ಲಿಮರನ್ನು ಉಗ್ರರನ್ನಾಗಿ ತೋರಿಸಿದ ನಿಮಗೆ ಈಗ ನಮ್ಮ ವೋಟ್ ಬೇಕೇ?’; ದಳಪತಿ ವಿಜಯ್ಗೆ ಮುಸ್ಲಿಮರ ಪ್ರಶ್ನೆ
ಸಿನಿಮಾ ವಿಚಾರಕ್ಕೆ ಬರುವುದಾದರೆ, ವಿಜಯ್ ನಟನೆಯ ಕೊನೇ ಸಿನಿಮಾ ‘ಜನ ನಾಯಗನ್’ ಮೇಲೆ ಅಭಿಮಾನಿಗಳು ನಿರೀಕ್ಷೆ ಹೊಂದಿದ್ದಾರೆ. ಈ ಸಿನಿಮಾಗೆ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಬಂಡವಾಳ ಹೂಡುತ್ತಿದೆ. ಎಚ್. ವಿನೋದ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಜೊತೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:11 am, Sun, 27 April 25