ಸೆನ್ಸಾರ್ ಕಟ್ ಇಲ್ಲದೆ ‘ಜನ ನಾಯಗನ್’ ಸಿನಿಮಾ ನೋಡಲು ವಿಜಯ್ ಅಭಿಮಾನಿಗಳಿಗೆ ಸುವರ್ಣಾವಕಾಶ

ತಮಿಳುನಾಡು ಮುಖ್ಯಮಂತ್ರಿ ಹಾಗೂ ಸ್ಟಾರ್ ನಟ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಬಿಡುಗಡೆಗೆ ಸಜ್ಜಾಗಿದೆ. ಭಾರತದಲ್ಲಿ ಸೆನ್ಸಾರ್ ಮಂಡಳಿಯ ಹಲವು ಕಟ್‌ಗಳು ಮತ್ತು 'A' ಸರ್ಟಿಫಿಕೇಟ್‌ನೊಂದಿಗೆ ಸಿನಿಮಾ ರಿಲೀಸ್ ಆಗುತ್ತಿದ್ದರೆ, ವಿದೇಶಗಳಲ್ಲಿ ಯಾವುದೇ ಕತ್ತರಿ ಇಲ್ಲದೆ ಒರಿಜಿನಲ್ ವರ್ಷನ್ ಪ್ರದರ್ಶನಗೊಳ್ಳಲಿದೆ. ವಿಜಯ್ ಅವರ ರಾಜಕೀಯ ಪಕ್ಷ 'TVK' ಕುರಿತಾದ ಡೈಲಾಗ್ಸ್ ಹಾಗೂ ಹಲವು ದೃಶ್ಯಗಳಿಗೆ ಭಾರತದಲ್ಲಿ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ.

ಸೆನ್ಸಾರ್ ಕಟ್ ಇಲ್ಲದೆ ಜನ ನಾಯಗನ್ ಸಿನಿಮಾ ನೋಡಲು ವಿಜಯ್ ಅಭಿಮಾನಿಗಳಿಗೆ ಸುವರ್ಣಾವಕಾಶ
ವಿಜಯ್
Edited By:

Updated on: Jul 13, 2026 | 11:12 AM

ಮುಖ್ಯಾಂಶಗಳು

  • ದಳಪತಿ ವಿಜಯ್ 'ಜನ ನಾಯಗನ್' ಚಿತ್ರಕ್ಕೆ ಹೊಸ ಟ್ವಿಸ್ಟ್
  • ರಾಜಕೀಯ ಪಕ್ಷ 'TVK' ಡೈಲಾಗ್‌ಗೆ ಬಿದ್ದಿತು ಬ್ರೇಕ್
  • ವಿಜಯ್ ಸಿನಿಮಾದಲ್ಲಾದ ಪ್ರಮುಖ ಬದಲಾವಣೆಗಳೇನು?

ತಮಿಳುನಾಡು ಮುಖ್ಯಮಂತ್ರಿ ಹಾಗೂ ಸ್ಟಾರ್ ನಟ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಿದೆ. ಸುಮಾರು 7 ತಿಂಗಳ ವಿಳಂಬದ ನಂತರ ಸಿನಿಮಾ ಥಿಯೇಟರ್‌ಗೆ ಬರುತ್ತಿದೆ. ಭಾರತದಲ್ಲಿ ರಿಲೀಸ್ ಆಗುವ ಸಿನಿಮಾಗೆ ಸೆನ್ಸಾರ್ ಮಂಡಳಿ ಹಲವು ಕಟ್‌ಗಳನ್ನು ಮಾಡಿದೆ. ಆದರೆ ವಿದೇಶಗಳಲ್ಲಿ ಯಾವುದೇ ಕಟ್ ಇಲ್ಲದೆ ಒರಿಜಿನಲ್ ಸಿನಿಮಾ ಬಿಡುಗಡೆಯಾಗುತ್ತಿದೆ. ವಿದೇಶದಲ್ಲಿರುವ ವಿಜಯ್ ಅಭಿಮಾನಿಗಳು ಚಿತ್ರದ ರಾ ಮತ್ತು ಅನ್‌ಕಟ್ ವರ್ಷನ್ ನೋಡಬಹುದು.

ವಿದೇಶಿ ವಿತರಕರಿಂದ ಅಧಿಕೃತ ಪ್ರಕಟಣೆ

ಯುಕೆಯಲ್ಲಿ ಈ ಚಿತ್ರವನ್ನು ‘ಅಹಿಂಸಾ ಎಂಟರ್‌ಟೈನ್‌ಮೆಂಟ್’ ಸಂಸ್ಥೆ ವಿತರಣೆ ಮಾಡುತ್ತಿದೆ. ಜುಲೈ 24 ರಂದು ಯುಕೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ವಿತರಕರು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ಅಲ್ಲಿ ಈ ಚಿತ್ರಕ್ಕೆ 15+ ರೇಟಿಂಗ್ ಸಿಕ್ಕಿದೆ. ಯಾವುದೇ ಸೀನ್ ಅಥವಾ ಡೈಲಾಗ್‌ಗೆ ಕತ್ತರಿ ಹಾಕಲಾಗಿಲ್ಲ. ವಿಜಯ್ ಅವರ ಮಾಸ್ ಆಕ್ಷನ್ ಇಡೀ ಸಿನಿಮಾವನ್ನು ಒರಿಜಿನಲ್ ಆಗಿಯೇ ನೋಡಬಹುದು ಎಂದು ವಿತರಕರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಸೆನ್ಸಾರ್ ಪ್ರಕ್ರಿಯೆ ಪೂರ್ಣ: ಸಿಎಂ ವಿಜಯ್ ಚಿತ್ರಕ್ಕೆ ‘A’ ಪ್ರಮಾಣಪತ್ರ

ಭಾರತದ ವರ್ಷನ್‌ನಲ್ಲಿ ಆದ ಪ್ರಮುಖ ಬದಲಾವಣೆಗಳು

ಈ ಸಿನಿಮಾದಲ್ಲಿ ವಿಜಯ್ ಅವರ ಪಾತ್ರದ ಹೆಸರು ‘ದಳಪತಿ ವೆಟ್ರಿ ಕೊಂಡಾನ್’. ಇದರ ಮೊದಲ ಅಕ್ಷರಗಳನ್ನು ಸೇರಿಸಿದರೆ ‘TVK’ ಎಂದಾಗುತ್ತದೆ. ಇದು ವಿಜಯ್ ಅವರ ರಾಜಕೀಯ ಪಕ್ಷದ (ತಮಿಳಗ ವೆಟ್ರಿ ಕಳಗಂ) ಹೆಸರೂ ಹೌದು. ಸಿನಿಮಾದಲ್ಲಿದ್ದ ‘ಅಂಬೇಡ್ಕರ್ ಸಟಮ್… ಟು… TVK ಸಟಮ್’ ಎಂಬ ಡೈಲಾಗ್‌ ಅನ್ನು ಸೆನ್ಸಾರ್ ಮಂಡಳಿ ತೆಗೆದುಹಾಕಿದೆ. ಆಡಿಯೋ ಮತ್ತು ವಿಡಿಯೋ ಎರಡರಲ್ಲೂ ಈ ಬದಲಾವಣೆ ಮಾಡಲಾಗಿದೆ.

ಸೆನ್ಸಾರ್ ಕತ್ತರಿಗೆ ಸಿಲುಕಿದ ಇತರ ದೃಶ್ಯಗಳು

ಸಿನಿಮಾದಲ್ಲಿ ಬರುವ ‘ಓಂ’ ಮತ್ತು ‘ನ್ಯೂ ಇಂಡಿಯಾ’ ಎಂಬ ಪದಗಳನ್ನು ಮ್ಯೂಟ್ ಮಾಡಲಾಗಿದೆ. ಸದ್ದಾಂ ಹುಸೇನ್ ಗಲ್ಲು ಶಿಕ್ಷೆಗೆ ಸಂಬಂಧಿಸಿದ ಡೈಲಾಗ್‌ಗಳನ್ನು ಬದಲಾಯಿಸಲಾಗಿದೆ. ಪೊಲೀಸ್ ಅಧಿಕಾರಿಯ ಬ್ಯಾಡ್ಜ್‌ಗೆ ಗೌರವ ನೀಡದ ದೃಶ್ಯವನ್ನು ತೆಗೆಯಲಾಗಿದೆ. ‘ಭಾಗವತಂ’ ಮತ್ತು ‘ರಂಗನಾಥರ್’ ಎಂಬ ಪದಗಳನ್ನು ಕೂಡ ಸೈಲೆನ್ಸ್ ಮಾಡಲಾಗಿದೆ. ಕೆಲವು ಅಶ್ಲೀಲ ಬೈಗುಳದ ಪದಗಳನ್ನು ಮ್ಯೂಟ್ ಮಾಡಲಾಗಿದೆ. ಮಗುವನ್ನು ಸುಡುವ ದೃಶ್ಯ ಮತ್ತು ಭಾರತದ ರಾಷ್ಟ್ರಧ್ವಜ ನೆಲಕ್ಕೆ ಬೀಳುವ ದೃಶ್ಯಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us