
ತಮಿಳುನಾಡು ಮುಖ್ಯಮಂತ್ರಿ, ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರ ವಿಚ್ಛೇದನ ಪ್ರಕರಣಕ್ಕೆ ತೆರೆಬಿದ್ದಿದೆ. ಸಂಗೀತಾ ಅವರು ತಮ್ಮ ವಿಚ್ಛೇದನ (Divorce) ಅರ್ಜಿಯನ್ನು ಹಿಂಪಡೆದುಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ಪ್ರಕರಣವನ್ನು ವಜಾಗೊಳಿಸಿ ಆದೇಶಿಸಿದೆ. ಶುಕ್ರವಾರದಂದು (ಆಗಸ್ಟ್ 7) ನಡೆದ ವಿಚಾರಣೆ ವೇಳೆ ಸಂಗೀತಾ (Sangeetha Sornalingam) ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅರ್ಜಿಯನ್ನು ಹಿಂಪಡೆಯಲು ಇರುವ ಕಾರಣಗಳನ್ನು ಕೋರ್ಟ್ಗೆ ವಿವರಿಸಿ ತಮ್ಮ ನಿರ್ಧಾರವನ್ನು ತಿಳಿಸಿದರು. ಇದನ್ನು ಆಲಿಸಿದ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯವು ಪ್ರಕರಣವನ್ನು ಅಧಿಕೃತವಾಗಿ ರದ್ದುಗೊಳಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ ಸಂಗೀತಾ ಅವರು ತಮಿಳುನಾಡಿನ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ದಂಪತಿಗಳ ನಡುವೆ ಸರಿಪಡಿಸಲಾಗದ ಭಿನ್ನಾಭಿಪ್ರಾಯಗಳಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಅಲ್ಲದೆ, ಶಾಶ್ವತ ಜೀವನಾಂಶ ಹಾಗೂ ಚೆನ್ನೈನ ನೀಲಂಕರೈನಲ್ಲಿರುವ ನಿವಾಸದಲ್ಲೇ ವಾಸಿಸಲು ಅನುಮತಿ ನೀಡಬೇಕೆಂದು ಕೋರಿದ್ದರು.
ಈ ವಿಚ್ಛೇದನ ಪ್ರಕರಣದ ವಿಚಾರಣೆ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಜೂನ್ 15ರಂದು ನಡೆದ ವಿಚಾರಣೆಯಲ್ಲೇ ಸಂಗೀತಾ ಅವರು ಅರ್ಜಿಯನ್ನು ಹಿಂಪಡೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆಗಲೂ ವೀಡಿಯೋ ಕಾನ್ಫರೆನ್ಸ್ ಮೂಲಕವೇ ಹಾಜರಾಗಿದ್ದ ಅವರು ತಮ್ಮ ನಿರ್ಧಾರ ತಿಳಿಸಿದ್ದರು. ತದನಂತರ ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ನಿಗದಿಪಡಿಸಲಾಗಿತ್ತು.
ಕಳೆದ ತಿಂಗಳು ನಡೆದ ವಿಚಾರಣೆಗೆ ವಿಜಯ್ ಹಾಗೂ ಸಂಗೀತಾ ಇಬ್ಬರೂ ಹಾಜರಾಗಿರಲಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಇಬ್ಬರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಈಗ ಪ್ರಕರಣ ರದ್ದಾಗಿರುವ ಬಗ್ಗೆ ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ವಿಜಯ್ ಅವರಾಗಲಿ, ಸಂಗೀತಾ ಅವರಾಗಲೀ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ಕದ್ದುಮುಚ್ಚಿ ‘ಜನ ನಾಯಗನ್’ ನೋಡಲು ಚಿತ್ರಮಂದಿರಕ್ಕೆ ಬಂದ ವಿಜಯ್ ಪತ್ನಿ ಸಂಗೀತಾ?
ವಿಜಯ್ ಹಾಗೂ ಸಂಗೀತಾ ಅವರದ್ದು ಸುಮಾರು ಮೂರು ದಶಕಗಳ ಸುದೀರ್ಘ ದಾಂಪತ್ಯ. 1999ರ ಆಗಸ್ಟ್ 25ರಂದು ಇಬ್ಬರೂ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಈ ದಂಪತಿಗೆ 2000ರಲ್ಲಿ ಜನಿಸಿದ ಮಗ ಹಾಗೂ 2005ರಲ್ಲಿ ಜನಿಸಿದ ಮಗಳಿದ್ದಾರೆ. ವಿಜಯ್ ಅವರು ಸಿಎಂ ಆದಾಗ ಅವರ ಪತ್ನಿ ಮತ್ತು ಮಕ್ಕಳು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.
2023ರಲ್ಲಿ ಸಂಗೀತಾ ಅವರು ವಿಜಯ್ ಪಾಲ್ಗೊಳ್ಳುತ್ತಿದ್ದ ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾದಾಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವದಂತಿಗಳು ಹರಡಿದ್ದವು. 2025ರಲ್ಲಿ ಟಿವಿಕೆ ಪಕ್ಷದ ಪ್ರಮುಖ ರಾಜ್ಯ ಸಮಾವೇಶದಲ್ಲೂ ಅವರು ಭಾಗವಹಿಸಿರಲಿಲ್ಲ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ದಶಕಗಳ ರಾಜಕೀಯ ಪ್ರಾಬಲ್ಯಕ್ಕೆ ತೆರೆ ಎಳೆದಿತ್ತು. ಕಾಂಗ್ರೆಸ್ ಸೇರಿದಂತೆ ಹಲವು ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚಿಸಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.