ಅಂಡಾಣು ಸಂರಕ್ಷಿಸಿ: ಉಪಾಸನಾ ಹೇಳಿಕೆಗೆ ವಿರೋಧ, ರಾಮ್ ಚರಣ್ ಪತ್ನಿ ಸ್ಪಷ್ಟನೆ ಏನು?
Upasana Konidela: ಪ್ಯಾನ್ ಇಂಡಿಯಾ ಸ್ಟಾರ್ ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕಮ್ಮಿನೇನಿ ಕೋನಿಡೆಲ ಖ್ಯಾತ ಉದ್ಯಮಿ. ವಿಶ್ವ ವಿಖ್ಯಾತ ಅಪೋಲೊ ಆಸ್ಪತ್ರೆ ಗ್ರೂಪ್ನ ಸಂಸ್ಥಾಪಕ ಮಂಡಳಿ ಸದಸ್ಯೆ. ಇತ್ತೀಚೆಗೆ ಅವರು ಯುವತಿಯರಿಗೆ ತಮ್ಮ ಅಂಡಾಣುವನ್ನು ಸಂಸ್ಕರಿಸುವಂತೆ ಸಲಹೆ ನೀಡಿದ್ದರು. ಆದರೆ ಉಪಾಸನಾ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಷ್ಟಕ್ಕೂ ನಟಿ ಹೇಳಿದ್ದೇನು?

ಪ್ಯಾನ್ ಇಂಡಿಯಾ (Pan India) ಸ್ಟಾರ್ ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕಮ್ಮಿನೇನಿ ಕೋನಿಡೇಲ ಖ್ಯಾತ ಉದ್ಯಮಿ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಜನಪ್ರಿಯವಾಗಿರುವ ಅಪೋಲೊ ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್ ಚೈನ್ನ ಮಾಲಕರ ಕುಟುಂಬದ ಕುಡಿ ಉಪಾಸನಾ ಕಮ್ಮಿನೇನಿ. ರಾಮ್ ಚರಣ್ ಅವರ ಪತ್ನಿಯೂ ಆಗಿರುವ ಉಪಾಸನಾ ಆಧುನಿಕ ಆಲೋಚನೆಗಳನ್ನು ಹೊಂದಿರುವ ಮಹಿಳೆ. ಮಕ್ಕಳು ಹೊಂದುವ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದ ಉಪಾಸನಾ ಮದುವೆಯಾದ ದಶಕದ ಬಳಿಕ ಮಗುವನ್ನು ಪಡೆದರು. ಇದೀಗ ಮತ್ತೊಂದು ಮಗುವಿಗೆ ಜನ್ಮ ನೀಡಲು ಸಿದ್ಧವಾಗಿದ್ದಾರೆ. ಆದರೆ ಇತ್ತೀಚೆಗೆ ಉಪಾಸನಾ ಯುವತಿಯರಿಗೆ ನೀಡಿರುವ ಸಲಹೆಯೊಂದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಐಐಟಿ ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿ ಆಗಿದ್ದ ಉಪಾಸನಾ ಅವರು, ಯುವತಿಯರು ತಮ್ಮ ವೃತ್ತಿಯ ಬಗ್ಗೆ ಹೆಚ್ಚು ಗಮನ ಕೊಡಬೇಕು, ಮಹಿಳೆಯರಿಗೆ ಇರುವ ದೊಡ್ಡ ವಿಮೆ ಎಂದರೆ ಅವರು ತಮ್ಮ ಅಂಡಾಣುಗಳನ್ನು ಸಂಸ್ಕರಿಸಿ ಇಡಬಹುದು. ಇದರಿಂದಾಗಿ ನೀವು ಯಾವಾಗ ಮದುವೆ ಆಗಬೇಕು, ಯಾವಾಗ ಮಕ್ಕಳು ಹೊಂದಬೇಕು ಎಂಬುದನ್ನು ನೀವೇ ಯೋಜನೆ ಮಾಡಿ ನಿರ್ಧಾರ ಮಾಡಬಹುದು. ಹಾಗಾಗಿ ನೀವು ನಿಮ್ಮ ಕರಿಯರ್ ಮೇಲೆ ಫೋಕಸ್ ಮಾಡಬಹುದು, ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಎಂದಿದ್ದರು ಉಪಾಸನಾ ಕೋನಿಡೆಲ.
ಆದರೆ ಉಪಾಸನಾ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ವೈದ್ಯರು ಸಹ ಉಪಾಸನಾ ಅವರ ಹೇಳಿಕೆ ಪೂರ್ಣ ಸರಿಯಿಲ್ಲ ಎಂದಿದ್ದಾರೆ. ಅಂಡಾಣುಗಳನ್ನು ಸಂಸ್ಕರಿಸಿ ಇಡಬಹುದು ಆದರೆ ಅದು ಯಶಸ್ವಿಯಾಗಿ ಗರ್ಭ ಧಾರಣೆಗೆ ಸಹಕರಿಸುತ್ತದೆ ಎಂಬ ಖಾತ್ರಿ ಇಲ್ಲ ಎಂದಿದ್ದಾರೆ. ಇನ್ನು ಕೆಲವರು ಎಗ್ ಫ್ರೀಜ್ ಮಾಡುವುದು ಬಹಳ ಖರ್ಚಿನ ವಿಷಯ ಅಲ್ಲದೆ, ಎಗ್ ಫ್ರೀಜ್ ಮಾಡಲು ಲಕ್ಷಾಂತರ ಮುಂಗಡ ಹಣ ಕೊಡಬೇಕು ಅದರ ಬಳಿಕ ಸಂಸ್ಕರಿಸಲು ವರ್ಷಕ್ಕೆ ಇಷ್ಟೆಂದು ಬಾಡಿಗೆ ಕಟ್ಟಬೇಕು. ಅದಾದ ಬಳಿಕ ಐವಿಎಫ್ನ ಪ್ರತಿ ಹಂತಕ್ಕೂ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಬೇಕು. ಬ್ಯಾಂಕ್ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಇದ್ದರಷ್ಟೆ ಇದೆಲ್ಲ ಸಾಧ್ಯ ಎಂದಿದ್ದಾರೆ ಕೆಲ ನೆಟ್ಟಿಗರು.
ಇದನ್ನೂ ಓದಿ:ರಾಮ್ ಚರಣ್ ಮೇಲೆ ಜಾನ್ಹವಿಗೆ ಭಾರಿ ನಂಬಿಕೆ, ಕೈ ಹಿಡಿಯುತ್ತಾ ‘ಪೆದ್ದಿ’?
‘ನಮ್ಮ ದೇಹ ಮತ್ತು ಅದರ ಜೈವಿಕ ಸೈಕಲ್ ಕರಿಯರ್, ಆರ್ಥಿಕ ಸಬಲತೆ, ಸಮಾನತೆ ಇವುಗಳನ್ನೆಲ್ಲ ಕೇರ್ ಮಾಡುವುದಿಲ್ಲ. ಅದು ನೈಸರ್ಗಿಕವಾಗಿ ಕೆಲಸ ಮಾಡುತ್ತದೆ. ಮನುಷ್ಯರಲ್ಲಿ 20ರಿಂದ 30ರ ವರೆಗೆ ಹೆಚ್ಚು ಫಲವತ್ತತೆ ಇರುತ್ತದೆ. 30ರ ಬಳಿಕ ಫಲವತ್ತತೆ ಕಡಿಮೆ ಆಗಲು ಆರಂಭವಾಗುತ್ತದೆ. 35ರ ಬಳಿಕ ತೀವ್ರವಾಗಿ ಕುಸಿತ ಕಾಣುತ್ತದೆ’ ಎಂದಿದ್ದಾರೆ ವೈದ್ಯರೊಬ್ಬರು. ಅಂಡಾಣು ಸಂಸ್ಕರಿಸಿದರೂ ಸಹ ವಯಸ್ಸಾದ ಬಳಿಕ ಆ ಅಂಡಾಣುವನ್ನು ಕ್ಯಾರಿ ಮಾಡುವ ಕ್ಷಮತೆಯನ್ನು ದೇಹ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪಾಸನಾ, ‘ಹೆಣ್ಣು ಕೇವಲ ಮದುವೆ, ಮಕ್ಕಳು ಎಂದು ಯೋಚನೆ ಮಾಡುತ್ತಿರಬೇಕೆ, ಅದರ ಬದಲಿಗೆ ವೃತ್ತಿ, ಆರ್ಥಿಕ ಸಬಲತೆ ಬಗ್ಗೆ ಯೋಚಿಸುವುದು ತಪ್ಪೆ? ಹೆಣ್ಣು ಆಕೆಗೆ ಇಷ್ಟವಾಗುವ ವರನಿಗಾಗಿ ಕಾಯುವುದು ತಪ್ಪೆ? ಹೆಣ್ಣು ಆಕೆಯ ಪರಿಸ್ಥಿತಿಗೆ ಅನುಗುಣವಾಗಿ ಮಗು ಯಾವಾಗ ಹೊಂದಬೇಖು ಎಂದು ನಿರ್ಧರಿಸುವುದು ತಪ್ಪೆ? ನಾನು 29ರ ವಯಸ್ಸಿನಲ್ಲಿದ್ದಾಗ ಅಂಡಾಣು ಸಂಸ್ಕರಿಸಿದೆ. 37ರಲ್ಲಿ ಮಗುವನ್ನು ಪಡೆದೆ, ಈಗ 39ರಲ್ಲಿ ಅವಳಿ ಮಕ್ಕಳ ತಾಯಿ ಆಗಲಿದ್ದೇನೆ. ನಾನು ಸದಾ ಕುಟುಂಬದ ಜೊತೆಗೆ ವೃತ್ತಿಯನ್ನೂ ನಿರ್ವಹಿಸಿಕೊಂಡು ಬಂದಿದ್ದೇನೆ. ಅದು ಸಾಧ್ಯವಾಗಿದ್ದು ಯಾವಾಗ ಬೇಕಾದರೂ ತಾಯಿ ಆಗಬಹುದು ಎಂಬ ಸ್ವಾತಂತ್ರ್ಯ ಇದ್ದಿದ್ದರಿಂದ’ ಎಂದಿದ್ದಾರೆ ಉಪಾಸನಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:11 am, Thu, 20 November 25




