
ತಮಿಳುನಾಡಿನ ಮೂಲ ಜನರ ಧಾರ್ಮಿಕ ಅಸ್ಮಿತೆಯ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. Tamils Are Not Hindu ಎಂಬ ವಾಕ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಈ ಸಮಯದಲ್ಲಿ ಖ್ಯಾತ ನಿರ್ದೇಶಕ ವೆಟ್ರಿಮಾರನ್ (Vetrimaaran) ಅವರು ನೀಡಿರುವ ಒಂದು ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ‘ರಾಜ ರಾಜ ಚೋಳ ಹಿಂದೂ ಆಗಿರಲಿಲ್ಲ’ ಎಂದು ಅವರು ಹೇಳಿದ್ದಾರೆ. ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಬಿಡುಗಡೆ ಆದ ಬೆನ್ನಲ್ಲೇ ವೆಟ್ರಿಮಾರನ್ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಮುಖಂಡ ಎಚ್. ರಾಜಾ (H Raja) ಅವರು ಇದನ್ನು ಖಂಡಿಸಿದ್ದಾರೆ. ಆದರೆ ಕಮಲ್ ಹಾಸನ್ (Kamal Haasan) ಅವರು ವೆಟ್ರಿಮಾರನ್ ಹೇಳಿಕೆಗೆ ಬೆಂಬಲ ನೀಡಿದ್ದಾರೆ.
‘ವಿಸಾರಣೈ’, ‘ಅಸುರನ್’ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ವೆಟ್ರಿಮಾರನ್ ಅವರು ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ, ಫಿಲ್ಮ್ ಫೇರ್ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ತಮಿಳು ಚಿತ್ರರಂಗದಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಪ್ರತಿ ಸಿನಿಮಾದಲ್ಲೂ ಅವರು ವಿಶೇಷವಾದ ಕಥಾವಸ್ತುವನ್ನು ತೆರೆಗೆ ತರುತ್ತಾರೆ. ಈಗ ಅವರು ತಮ್ಮ ಹೇಳಿಕೆಯ ಕಾರಣದಿಂದ ಸುದ್ದಿ ಆಗುತ್ತಿದ್ದಾರೆ.
‘ನಿರಂತರವಾಗಿ ನಮ್ಮ ಗುರುತುಗಳನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ. ವಳ್ಳುವರ್ ಅವರನ್ನು ಕೇಸರಿಕರಣ ಮಾಡುವುದು ಹಾಗೂ ರಾಜ ರಾಜ ಚೋಳನನ್ನು ಹಿಂದೂ ಅಂತ ಕರೆಯುವುದು ನಡೆದೇ ಇದೆ’ ಎಂದು ವೆಟ್ರಿಮಾರನ್ ಹೇಳಿದ್ದಾರೆ.
ಸೆಪ್ಟೆಂಬರ್ 30ರಂದು ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ಚಿಯಾನ್ ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ಜಯಂ ರವಿ, ಕಾರ್ತಿ ಮುಂತಾದವರು ನಟಿಸಿದ್ದಾರೆ. ಚೋಳರ ಇತಿಹಾಸವನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಆ ಚಿತ್ರ ಬಿಡುಗಡೆ ಆದ ಬಳಿಕ ವೆಟ್ರಿಮಾರನ್ ಅವರು ಹೀಗೆ ಹೇಳಿಕೆ ನೀಡಿದ್ದು, ಪರ-ವಿರೋಧದ ಚರ್ಚೆಗೆ ಕಾರಣ ಆಗಿದೆ.
ವೆಟ್ರಿಮಾರನ್ ಮಾತಿಗೆ ಬಿಜೆಪಿಯ ಎಚ್. ರಾಜಾ ಪ್ರತಿಕ್ರಿಯೆ ನೀಡಿದ್ದಾರೆ ‘ವೆಟ್ರಿಮಾರನ್ ರೀತಿ ನಾನು ಇತಿಹಾಸವನ್ನು ಚೆನ್ನಾಗಿ ಬಲ್ಲವನಲ್ಲ. ಆದರೆ ರಾಜ ರಾಜ ಚೋಳ ನಿರ್ಮಿಸಿದ ಎರಡು ಮಸೀದಿ ಅಥವಾ ಚರ್ಚ್ಗಳನ್ನು ಅವರು ತೋರಿಸಲಿ’ ಎಂದು ಎಚ್. ರಾಜಾ ಹೇಳಿದ್ದಾರೆ.
ಈ ಚರ್ಚೆಯಲ್ಲಿ ನಟ ಕಮಲ್ ಹಾಸನ್ ಅವರ ಎಂಟ್ರಿ ಕೂಡ ಆಗಿದೆ. ವೆಟ್ರಿಮಾರನ್ ಹೇಳಿಕೆಯನ್ನು ಕಮಲ್ ಬೆಂಬಲಿಸಿದ್ದಾರೆ. ‘ರಾಜ ರಾಜ ಚೋಳನ ಕಾಲದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ. ಹಿಂದೂ ಅಂತ ಕರೆದಿದ್ದು ಬ್ರಿಟಿಷರು’ ಎಂದಿರುವ ಕಮಲ್ ಹಾಸನ್ ಅವರು, ‘8ನೇ ಶತಮಾನದಲ್ಲಿ ಹಲವು ಧರ್ಮಗಳು ಇದ್ದವು’ ಎಂದು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.