
ಇಂಗ್ಲೆಂಡ್ನ ಪ್ರಸಿದ್ಧ ಸಿಲ್ವರ್ಸ್ಟೋನ್ ರೇಸ್ಟ್ರ್ಯಾಕ್ನಲ್ಲಿ ಇತ್ತೀಚೆಗೆ ನಡೆದ ‘ಲಿ ಮಾನ್ಸ್’ ಕಾರ್ ರೇಸಿಂಗ್ ಪಂದ್ಯಾವಳಿಯಲ್ಲಿ ತಮಿಳು ಚಿತ್ರರಂಗದ ಸ್ಟಾರ್ ನಟರ ಅಪರೂಪದ ಸಮಾಗಮ ಕಂಡುಬಂತು. ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ನಟ ಸಿ. ಜೋಸೆಫ್ ವಿಜಯ್ ಅವರು ಈ ರೇಸ್ಗೆ ಅಧಿಕೃತ ಚಾಲನೆ ನೀಡಿದ್ದು, ನಟ ಅಜಿತ್ ಕುಮಾರ್ ಅವರು ತಮ್ಮ ತಂಡದೊಂದಿಗೆ ರೇಸಿಂಗ್ನಲ್ಲಿ ಭಾಗವಹಿಸಿದ್ದರು. ಈ ಐತಿಹಾಸಿಕ ಕ್ಷಣದಲ್ಲಿ ವಿಜಯ್ ಜೊತೆ ನಟಿ ತ್ರಿಷಾ ಕೃಷ್ಣನ್ ಕೂಡ ಕಾಣಿಸಿಕೊಂಡಿದ್ದು ಈಗ ಚರ್ಚೆಗೆ ಕಾರಣ ಆಗಿದೆ.
ವಿಜಯ್ ಮತ್ತು ಅಜಿತ್ ಸಿಲ್ವರ್ಸ್ಟೋನ್ನಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ರೇಸ್ಟ್ರ್ಯಾಕ್ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ರೇಸ್ ಆರಂಭಕ್ಕೂ ಮುನ್ನ ವಿಜಯ್ ಮತ್ತು ಅಜಿತ್ ಟೆಂಟ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನಟಿ ತ್ರಿಷಾ ಕೃಷ್ಣನ್ ಕೂಡ ಅವರೊಂದಿಗೆ ಸೇರಿಕೊಂಡರು. ಈ ದೃಶ್ಯವನ್ನು ಕಂಡ ಅಭಿಮಾನಿಯೊಬ್ಬರು ವಿಡಿಯೋ ಮಾಡಿ, ‘ಅಜಿತ್ ಕುಮಾರ್ ಮತ್ತು ದಳಪತಿ ಟೆಂಟ್ನಲ್ಲಿ ತ್ರಿಷಾ ಪ್ರತ್ಯಕ್ಷ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ರೇಸ್ ನಡೆಯುತ್ತಿದ್ದ ಸಮಯದಲ್ಲಿ ವಿಜಯ್, ತ್ರಿಷಾ ಮತ್ತು ಆಧವ್ ಅರ್ಜುನ್ ಜೊತೆಯಾಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತು ಅಜಿತ್ ಅವರ ರೇಸಿಂಗ್ ಸಾಹಸವನ್ನು ವೀಕ್ಷಿಸಿದರು. ಈ ವೇಳೆ ವಿಜಯ್ ಜೀನ್ಸ್, ಕಪ್ಪು ಟೀ-ಷರ್ಟ್ ಹಾಗೂ ಬ್ರೌನ್ ಜಾಕೆಟ್ ಧರಿಸಿದ್ದರೆ, ತ್ರಿಷಾ ಜೀನ್ಸ್, ಬಿಳಿ ಟೀ-ಷರ್ಟ್ ಮತ್ತು ಬ್ರೌನ್ ಜಾಕೆಟ್ನಲ್ಲಿ ಮಿಂಚಿದರು. ವೈರಲ್ ಆಗಿರುವ ವಿಡಿಯೋಗೆ ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
CM Vijay, actress Trisha, and Minister Aadhav Arjuna watching the car race.. pic.twitter.com/jfwtHPRZoz
— Pokkiri_Victor (@Pokkiri_Victor) September 12, 2026
ಇಂಗ್ಲೆಂಡ್ನಲ್ಲಿ ವಿಜಯ್ ಮತ್ತು ಅಜಿತ್ ಪರಸ್ಪರ ಭೇಟಿಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ರೇಸಿಂಗ್ ಉಡುಪಿನಲ್ಲಿದ್ದ ಅಜಿತ್ ಅವರತ್ತ ನಗುತ್ತಾ ಓಡೋಡಿ ಬಂದ ವಿಜಯ್, ಅವರನ್ನು ತಬ್ಬಿಕೊಂಡು ಶುಭಾಶಯ ಕೋರಿದರು. ರೇಸ್ ಆರಂಭಕ್ಕೂ ಮುನ್ನ ಇಬ್ಬರೂ ನಟರು ಬಹಳ ಹೊತ್ತು ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾ ಹರಟಿದರು. ಈ ವೇಳೆ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಟಿವಿಕೆ ಎಂದು ಘೋಷಣೆ ಕೂಗಲು ಪ್ರಾರಂಭಿಸಿದಾಗ, ವಿಜಯ್ ಅವರು ‘ನನಗಲ್ಲ, ಅಜಿತ್ಗೆ ಪ್ರೋತ್ಸಾಹ ನೀಡಿ’ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ರೇಸ್ ಪೂರ್ಣಗೊಂಡ ನಂತರ ವಿಜಯ್ ಅವರು ತಮ್ಮ ಟಿವಿಕೆ ಪಕ್ಷದ ಹಳದಿ ಮತ್ತು ಕೆಂಪು ಬಣ್ಣದ ಕಸ್ಟಮೈಸ್ಡ್ ರೇಸಿಂಗ್ ಸೂಟ್ ಧರಿಸಿ, ಅಜಿತ್ ಕುಮಾರ್ ಅವರೊಂದಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಫೋಟೋಗಳಿಗೆ ಪೋಸ್ ನೀಡಿದರು.
ಇದನ್ನೂ ಓದಿ: ತ್ರಿಷಾಗೆ ವಿಜಯ್ ಸೆಲ್ಯೂಟ್? ಡಿಎಂಕೆ ಕಡೆಯಿಂದ ಬಂತು ವಾಗ್ದಾಳಿ
ಇದೇ ವೇಳೆ ವಿಜಯ್ ಆಗಮನದ ಬಗ್ಗೆ ಮಾತನಾಡಿದ ಅಜಿತ್ ಕುಮಾರ್, ‘ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಸಿಲ್ವರ್ಸ್ಟೋನ್ಗೆ ಆಗಮಿಸಿ ನಮಗೆ ಬೆಂಬಲ ನೀಡಿದ ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಾವು ಕಳೆದ 34 ವರ್ಷಗಳಿಂದ ಚಿತ್ರರಂಗದಲ್ಲಿ ಸಹೋದ್ಯೋಗಿಗಳಾಗಿದ್ದೇವೆ. ಅವರು ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ನನಗೆ ಅತ್ಯಂತ ಸಂತಸ ತಂದಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.