ಬಿಗ್ಬಾಸ್: ‘ಆಪ್ತಮಿತ್ರ’ರಿಗೆ ಜಂಟಿಯಾಗಿ ವಾರ್ನಿಂಗ್ ಕೊಟ್ಟ ಸುದೀಪ್
ಬಿಗ್ಬಾಸ್ ಕನ್ನಡ ಸೀಸನ್ 13ರ ಮೊದಲ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಅವರು ಹಲವರ ಬೆವರಿಳಿಸಿದರು. ಮೊದಲ ವಾರದಲ್ಲೇ ಮನೆಯಲ್ಲಿ ಸಾಕಷ್ಟು ಸಂಗತಿಗಳು ನಡೆದಿದ್ದವು. ಸಾಕಷ್ಟು ಆರೋಪ-ವ್ಯಂಗ್ಯ, ತಪ್ಪುಗಳು ನಡೆದಿದ್ದವು. ಹಲವು ವಿಷಯಗಳನ್ನು ಸುದೀಪ್ ಅವರು ಚರ್ಚಿಸಿದರು. ತಮ್ಮದೇ ರೀತಿಯಲ್ಲಿ ತೀರ್ಪು ನೀಡಿದರು. ವಿಶೇಷವಾಗಿ ಗಗನ್ ಮತ್ತು ತಾಂಡವ್ ಅವರು ಮಾಡಿದ ತಪ್ಪುಗಳಿಗೆ ಸರಿಯಾಗಿ ಚಾಟಿ ಬೀಸಿದರು.

ಕಿಚ್ಚ ಸುದೀಪ್, ಬಿಗ್ಬಾಸ್ ಕನ್ನಡ ಸೀಸನ್ 13ರ ಮೊದಲ ಕಿಚ್ಚನ ಪಂಚಾಯ್ತಿ ನಡೆಸಿದರು. ಮೊದಲ ಪಂಚಾಯ್ತಿಯಲ್ಲೇ ಕೆಲ ಸ್ಪರ್ಧಿಗಳಿಗೆ ಬೆವರಿಳಿಸಿದರು ಸುದೀಪ್. ವಾರವೆಲ್ಲ ಸಖತ್ ‘ಮೆರೆದಿದ್ದ’ ಗಗನ್ ಮತ್ತು ತಾಂಡವ್ ಅವರಿಗಂತೂ ಸುದೀಪ್ ತುಸು ಹೆಚ್ಚೇ ಚಾಟಿ ಬೀಸಿದರು. ಅವರು ಮಾತ್ರವೇ ಅಲ್ಲದೆ, ಶಾಸ್ತ್ರಿ, ಮಂಜು, ಸೌಂದರ್ಯಾ ಇನ್ನೂ ಹಲವರು ಸುದೀಪ್ ಅವರ ವಿಮರ್ಶೆಗಳಿಗೆ ಗುರಿ ಆದರು. ಆದರೆ ವಿಶೇಷವಾಗಿ ಗಮನ ಸೆಳೆದಿದ್ದು, ವಾರದಲ್ಲಿ ಹಲವು ತಪ್ಪುಗಳನ್ನು ಮಾಡಿದ್ದ ಗಗನ್ ಮತ್ತು ತಾಂಡವ್ ಅವರಿಗೆ ಸುದೀಪ್ ಬುದ್ಧಿವಾದ ಹೇಳಿದ ರೀತಿ.
ತಾಂಡವ್ ಕ್ಷಮೆ ಯಾಚನೆ
ಜಗ್ಗು ಮಮ್ಮಿಯನ್ನು ‘ಹೋಗೆ-ಬಾರೆ, ಅವಳು, ಇವಳು’ ಎಂದು ಹೆಣ್ಣಿನ ರೀತಿ ಸಂಬೋಧಿಸುತ್ತಿದ್ದ ತಾಂಡವ್ ಅವರಿಗೆ ಸುದೀಪ್ ಸಖತ್ ಕ್ಲಾಸ್ ತೆಗೆದುಕೊಂಡರು. ಜಗ್ಗುಗೆ ಒಂದು ಮಗು ಇದೆ, ಒಬ್ಬ ಹೆಂಡತಿ, ತಾಯಿ ಇದ್ದಾಳೆ. ಅವರ ಕುಟುಂಬಕ್ಕೆ ಅವರು ಹೀರೋ, ನೀವು ಅವರನ್ನು ‘ಹೋಗೆ-ಬಾರೆ’ ಎಂದು ವ್ಯಂಗ್ಯ ಮಾಡಿದರೆ ಅವರ ಕುಟುಂಬಕ್ಕೆ ನೋವಾಗುವುದಿಲ್ಲವೇ?, ಇದೇನಾ ನೀವು ತಮಾಷೆ ಮಾಡುವ ರೀತಿ?’ ಎಂದು ಖಡಕ್ ಆಗಿ ಗದರಿದರು ಸುದೀಪ್. ಅಷ್ಟಕ್ಕೆ ಸುಮ್ಮನಾಗದೆ, ತಾಂಡವ್ ಕೈಯಲ್ಲಿ ಜಗ್ಗು ಮಮ್ಮಿಗೆ ಕ್ಷಮೆ ಸಹ ಕೇಳಿಸಿದರು.
ಪಕ್ಷಪಾತ ಮಾಡಿದ ಗಗನ್
ವಿಐಪಿ ಆಗಿದ್ದ ಗಗನ್ ಟಾಸ್ಕ್ನ ಉಸ್ತುವಾರಿ ವೇಳೆ ಪಕ್ಷಪಾತ ಮಾಡಿದ್ದನ್ನು ಸುದೀಪ್ ಎತ್ತಿ ತೋರಿಸಿದರು. ಸ್ವಿಮ್ಮಿಂಗ್ ಪೂಲ್ನಲ್ಲಿ ರಿಂಗ್ ಹಾಕುವ ಆಟದ ವೇಳೆ ತನ್ನ ತಂಡಕ್ಕೆ ಸಹಾಯ ಮಾಡಿದ್ದನ್ನು ವಿಡಿಯೋ ಹಾಕಿ ತೋರಿಸಿದರು. ಹಾಗೆಯೇ ಗೇಮ್ ಶುರು ಆಗುವ ಮುಂಚೆ ತಮ್ಮ ತಂಡಕ್ಕೆ ಪ್ರಾಕ್ಟಿಸ್ ಮಾಡಲು ಅವಕಾಶ ಕೊಟ್ಟಿದ್ದನ್ನು ವಿಡಿಯೋ ಹಾಕಿ ತೋರಿಸಿ, ಗಗನ್ ಅವರ ಪಕ್ಷಪಾತತನವನ್ನು ಬಹಿರಂಗ ಮಾಡಿದರು. ಜೊತೆಗೆ ನೀವು ಮಾಡಿದ್ದು ತಪ್ಪು ಎಂದರು.
ನಿಯಮ ಮುರಿದ ಗೆಳೆಯರಿಗೆ ವಾರ್ನಿಂಗ್
ಗಗನ್ ಮತ್ತು ತಾಂಡವ್ ಒಳ್ಳೆಯ ಗೆಳೆಯರಾಗಿ ಮನೆಯಲ್ಲಿ ಇದ್ದಾರೆ. ಮೊದಲ ದಿನವೇ ಈ ಇಬ್ಬರೂ ಟೀಮ್ ಮಾಡಿಕೊಂಡಿದ್ದಾರೆ. ಆದರೆ ಈ ಗೆಳೆತನದ ನಡುವೆ ಕೆಲವು ನಿಯಮಗಳನ್ನು ಮುರಿದಿದ್ದಾರೆ. ನಾಮಿನೇಷನ್ ಅನ್ನು ಚರ್ಚೆ ಮಾಡುವಂತಿಲ್ಲ ಆದರೆ ಅವರು ಚರ್ಚೆ ಮಾಡಿದ್ದರು. ಗುಟ್ಟಾಗಿ ಮಾತನಾಡುವಂತಿಲ್ಲ ಅದನ್ನೂ ಮಾಡಿದ್ದರು. ಇದನ್ನು ಕಟುವಾಗಿ ವಿರೋಧಿಸಿದ ಸುದೀಪ್, ಮುಂದಿನ ದಿನಗಳಲ್ಲಿ ಹೀಗೆ ನಿಯಮ ಮುರಿದರೆ ಮನೆಯಿಂದಲೇ ಹೊರಗೆ ಕಳಿಸುವುದಾಗಿ ಇಬ್ಬರಿಗೂ ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ:ಗಗನ್-ತಾಂಡವ್ ರಾಮ್ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಜಗ್ಗು ಮಮ್ಮಿ ಕೆಲಸದ ಆಳ?
ತಾಂಡವ್ ರಾಮ್ ಮತ್ತು ಗಗನ್ ಅವರು ಜಗ್ಗ ಮಮ್ಮಿಯನ್ನು ಕೆಲಸದ ಆಳಿನ ರೀತಿ ಬಳಸಿಕೊಳ್ಳುವುತ್ತಿರುವದನ್ನು ಸಹ ಸುದೀಪ್ ಟೀಕೆ ಮಾಡಿದರು. ತಾಂಡವ್ ರಾಮ್ ಕೆಲಸವನ್ನೇ ಮಾಡುತ್ತಿಲ್ಲ, ಎಲ್ಲವನ್ನೂ ಜಗ್ಗು ಮಮ್ಮಿಗೆ ಹೇಳುತ್ತಾರೆ ಎಂಬ ವಿಷಯವೂ ಸಹ ಚರ್ಚೆ ಆಯ್ತು. ಸುದೀಪ್ ಅವರು, ‘ನೀವೇನು ಆಡಲು ಹೋಗಿರುವುದಾ ಅಥವಾ ಆಳಾಗಿ ಹೋಗಿರುವುದಾ?’ ಎಂದು ಕಟುವಾಗಿಯೇ ಜಗ್ಗು ಅನ್ನು ಪ್ರಶ್ನೆ ಮಾಡಿದರು. ‘ನಿಮಗೆ ಫ್ರೀ ಆಗಿ ಕೆಲಸ ಮಾಡಲು ವ್ಯಕ್ತಿ ಸಿಕ್ಕಿದ್ದಾರೆ, ನಾನು ಸಂಬಳ ಕೊಟ್ಟು ಇರಿಸಿಕೊಂಡಿದ್ದೀನಿ’ ಎಂದು ತಾಂಡವ್ ಗೆ ಪರೋಕ್ಷವಾಗಿ ಕಾಲೆಳೆದರು.
ಇಬ್ಬರೂ ಒಳ್ಳೆಯ ಗೆಳೆಯರಾಗಿದ್ದೀರಿ, ಆದರೆ ಪರಸ್ಪರರ ಗೆಳೆತನದ ಲಾಭವನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡಬೇಡಿ ಎಂದರು. ಒಳ್ಳೆಯ ಗೆಳೆಯರಾಗಿರಿ, ಆದರೆ ಒಬ್ಬರ ಆಟವನ್ನು ಇನ್ನೊಬ್ಬರು ಹಾಳು ಮಾಡುವಷ್ಟು ಸಲುಗೆ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದರು. ಇಬ್ಬರಿಗೂ ಸಹ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದರು ಸುದೀಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




