ಬಿಡುಗಡೆ ಆಯ್ತು ‘ರುದ್ರಾಭಿಷೇಕಂ’ ಸಿನಿಮಾ ಟೀಸರ್

ನಟ ವಿಜಯ್ ರಾಘವೇಂದ್ರ ಅವರು ಹಲವು ಭಿನ್ನ ಲುಕ್​​ಗಳಲ್ಲಿ ಕಾಣಿಸಿಕೊಂಡಿರುವ ಕೌಟುಂಬಿಕ ಥ್ರಿಲ್ಲರ್ ಸಿನಿಮಾ ‘ರುದ್ರಾಭಿಷೇಕಂ’ ಟೀಸರ್ ರಿಲೀಸ್ ಆಗಿದೆ. ಕೌಟುಂಬಿಕ ಕತೆಯ ಜೊತೆಗೆ ಹಾರರ್ ಅಂಶಗಳನ್ನು ಸೇರಿಸಿರುವ ಜೊತೆಗೆ ದೈವಿಕ ಕತೆಯನ್ನು ಸಹ ಒಳಗೊಂಡಿರುವ ಸಿನಿಮಾ ‘ರುದ್ರಾಭಿಷೇಕಂ’ ಆಗಿದ್ದು, ಈ ಸಿನಿಮಾ ಸೆಪ್ಟೆಂಬರ್ 25ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗಲಿದೆ. ಸಿನಿಮಾದ ಟೀಸರ್ ಇಲ್ಲಿದೆ ನೋಡಿ...

ಬಿಡುಗಡೆ ಆಯ್ತು ‘ರುದ್ರಾಭಿಷೇಕಂ’ ಸಿನಿಮಾ ಟೀಸರ್
Rudrabhishekam

Updated on: Sep 13, 2026 | 8:19 PM

ಮುಖ್ಯಾಂಶಗಳು

  • ವಿಜಯ್ ರಾಘವೇಂದ್ರ ನಟನೆಯ ‘ರುದ್ರಾಭಿಷೇಕಂ’ ಸಿನಿಮಾ
  • ‘ರುದ್ರಾಭಿಷೇಕಂ’ ಸಿನಿಮಾದ ಟೀಸರ್ ರಿಲೀಸ್
  • ‘ರುದ್ರಾಭಿಷೇಕಂ’ ಸಿನಿಮಾ ಸೆಪ್ಟೆಂಬರ್ 25ಕ್ಕೆ ರಿಲೀಸ್

ವಿಜಯ್ ರಾಘವೇಂದ್ರ ಅವರು ಹಲವು ಭಿನ್ನ ಲುಕ್​​ಗಳಲ್ಲಿ ಕಾಣಿಸಿಕೊಂಡಿರುವ ಕೌಟುಂಬಿಕ ಥ್ರಿಲ್ಲರ್ ಸಿನಿಮಾ ‘ರುದ್ರಾಭಿಷೇಕಂ’ ಈಗಾಗಲೇ ಪೋಸ್ಟರ್, ಹಾಡುಗಳಿಂದ ಗಮನ ಸೆಳೆದಿದೆ. ಇದೀಗ ಸಿನಿಮಾದ ಟೀಸರ್ ಸಹ ರಿಲೀಸ್ ಆಗಿದೆ. ಸೆಪ್ಟೆಂಬರ್ 12ರಂದು ಚಿತ್ರತಂಡ ಟೀಸರ್ ರಿಲೀಸ್ ಮಾಡಿದ್ದು, ಈ ಸಿನಿಮಾ ಕೌಟುಂಬಿಕ, ದೈವಿಕ, ಹಾರರ್, ಥ್ರಿಲ್ಲರ್ ಇನ್ನೂ ಕೆಲವು ಅಂಶಗಳನ್ನು ಒಳಗೊಂಡ ಸಿನಿಮಾ ಎಂಬುದನ್ನು ಸೂಚ್ಯಗೊಳಿಸುತ್ತಿದೆ. ಅನ್ವಿಕಾ ಆಡಿಯೋಸ್ ಯೂಟ್ಯೂಬ್ ಚಾನೆಲ್ಲಿನಲ್ಲಿ ಬಿಡುಗಡೆ ಆಗಿರುವ ಟೀಸರ್ ಅನ್ನು ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿದ್ದು, ಟೀಸರ್ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ.

‘ರುದ್ರಾಭಿಷೇಕಂ’ ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ಮೂರು ವಿಭಿನ್ನ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕತೆಯು ಗ್ರಾಮ್ಯ ಭಾಗದ ಸರಳ ಕತೆಯ ಜೊತೆಗೆ ಸಾಕಷ್ಟು ಥ್ರಿಲ್ಲರ್ ಅಂಶಗಳನ್ನು ಸಹ ಒಳಗೊಂಡಿದೆ. ಟೀಸರ್​​ನಲ್ಲಿ ಕತೆಯ ಸಣ್ಣ ಎಳೆಯನ್ನು ಬಿಟ್ಟುಕೊಡಲಾಗಿದ್ದು, ವಿಜಯ್ ರಾಘವೇಂದ್ರ ಅವರ ಕೆಲ ಭಿನ್ನ ಲುಕ್​​ಗಳ ಪರಿಚಯ ಮಾಡಿಸಲಾಗಿದೆ. ಜೊತೆಗೆ ಸಿನಿಮಾದ ಕೆಲವು ಹೈಲೆಟ್ ಅಂಶಗಳನ್ನು ಸಹ ಟೀಸರ್​​ನಲ್ಲಿ ಅಡಕಗೊಳಿಸಲಾಗಿದೆ. 53 ಸೆಕೆಂಡುಗಳ ಟೀಸರ್ ಸಿನಿಮಾದ ಕುರಿತು ಕುತೂಹಲ ಕೆರಳಿಸುತ್ತಿದೆ.

#rudrabhishekam Official Teaser | Vijay Raghavendra,Priyanka Thimmesh | Vasanth KumarK | VManohar|

‘ರುದ್ರಾಭಿಷೇಕಂ’ ಸಿನಿಮಾವು ಆಧುನಿಕ ಮತ್ತು ಪೌರಾಣಿಕ ಕತೆಗಳ ಬೆಸುಗೆ. ಸಿನಿಮಾ ಆಧುನಿಕ ಕಾಲದ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತದೆಯಾದರೂ ಸಿನಿಮಾನಲ್ಲಿ ಪೌರಾಣಿಕ ಕತೆಗಳ ಛಾಯೆ ಇದೆ, ವಿಶೇಷವಾಗಿ ಅಪಾರ ಭಕ್ತಗಣವನ್ನು ಹೊಂದಿರುವ ವೀರಭದ್ರ ಸ್ವಾಮಿಯ ಮಹಿಮೆಯನ್ನು ತೋರಿಸಲಾಗಿದೆ ಎಂದು ಕತೆಯ ಬಗ್ಗೆ ವಿವರಿಸಿದ್ದಾರೆ ನಿರ್ದೇಶಕ ವಸಂತ್ ಕುಮಾರ್. ಸಿನಿಮಾದ ಕತೆಯಲ್ಲಿ ಹಲವು ತಿರುವುಗಳಿದ್ದು, ಪ್ರೇಕ್ಷಕ ನಿರಾಶರಾಗದಂತೆ ಸಿನಿಮಾದ ಚಿತ್ರಕತೆಯನ್ನು ಹೆಣೆಯಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ:‘ವೀರಭದ್ರ ಸ್ವಾಮಿ ಮಹಿಮೆ’: ‘ರುದ್ರಾಭಿಷೇಕಂ’ ಸಿನಿಮಾಕ್ಕೆ ರಂಭಾಪುರಿ ಶ್ರೀ ಶುಭ ಹಾರೈಕೆ

‘ರುದ್ರಾಭಿಷೇಕಂ’ ಸಿನಿಮಾವು ಕೆಲ ವಿಶೇಷತೆಗಳನ್ನು ಒಳಗೊಂಡಿದೆ. ಈ ಸಿನಿಮಾಕ್ಕೆ ಬರೋಬ್ಬರಿ ಒಂಬತ್ತು ಮಂದಿ ನಿರ್ಮಾಪಕರು. ರೈತರುಗಳು ಒಟ್ಟು ಸೇರಿ ಈ ಸಿನಿಮಾಕ್ಕೆ ಬಂಡವಾಳ ಹೂಡಿರುವುದು ವಿಶೇಷ. ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ಜೊತೆಗೆ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ವಿ ಮನೋಹರ್. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಅನ್ನು ದೇವಹನಳ್ಳಿ ಸಮೀಪದ ಹಳ್ಳಿಗಳಲ್ಲಿ ಚಿತ್ರೀಕರಿಸಲಾಗಿದೆ. ಜೊತೆಗೆ ಚಿಕ್ಕಮಗಳೂರು ಹಾಗೂ ಇನ್ನಿತರೆ ಕರಾವಳಿ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ‘ರುದ್ರಾಭಿಷೇಕಂ’ ಸಿನಿಮಾ ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದೆ.

ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ಎದುರು ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟನೆ ಮಾಡಿದ್ದಾರೆ. ಅವರ ಜೊತೆಗೆ ರಾಜು ಬಾಲವಾಡಿ, ವಿ ಮನೋಹರ್, ಶಂಕರ್ ನಾರಾಯಣ್, ಮಮತಾ ತುರುವೇಕೆರೆ, ನವನೀತ ಶೆಟ್ಟಿ, ಮನು ಬುಲೆಟ್, ವಿನು ವಿನಯ್ ರಾಜ್, ಸನತ್ ಕುಮಾರ್, ವಸಂತ್ ಕುಮಾರ್, ಶಿವಕುಮಾರ್ ಮುಂತಾದವರು ನಟಿಸಿದ್ದಾರೆ. ಸಿನಿಮಾಕ್ಕೆ ವಿ ಮನೋಹರ್ ಸಂಗೀತ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:17 pm, Sun, 13 September 26

Loading...
Unable to load recommendations.
Follow Us