
ರಾಕಿಂಗ್ ಸ್ಟಾರ್ ಯಶ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ಅವರ ನಟನೆಯ ‘ರಾಮಾಯಣ’ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅವರು ರಾವಣನ ಪಾತ್ರ ಮಾಡುವುದರ ಜೊತೆಗೆ ಸಿನಿಮಾ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಕನ್ನಡದ ಹೀರೋ ಒಬ್ಬರು ಬಾಲಿವುಡ್ ಸಿನಿಮಾ ನಿರ್ಮಾಣ ಮಾಡುತ್ತಾರೆ ಎಂದರೆ ಅದು ನಿಜಕ್ಕೂ ಹೆಮ್ಮೆಯ ಸಂಗತಿ. ಯಶ್ ಅವರು ಕೇವಲ ಕಾಟಾಚಾರಕ್ಕೆ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿಲ್ಲ. ಈ ವಿಷಯವನ್ನು ಚಿತ್ರದ ಪ್ರಮುಖ ನಿರ್ಮಾಪಕ ನಮಿತ್ ಮಲ್ಹೋತ್ರ ಅವರು ವಿವರಿಸಿದ್ದಾರೆ.
‘ಯಶ್ ಅವರಲ್ಲಿರುವ ಶ್ರೇಷ್ಠ ಗುಣ ಏನೆಂದರೆ, ಅವರು ಕೇವಲ ಒಬ್ಬ ಅದ್ಭುತ ನಟ ಮಾತ್ರ ಅಲ್ಲ. ನಾವು ಹಾಕಿಕೊಂಡಿದ್ದ ಗುರಿ ಮತ್ತು ನಮ್ಮ ಆಕಾಂಕ್ಷೆಯನ್ನು ಅವರು ನೋಡಿದ ತಕ್ಷಣವೇ ನಮ್ಮೊಂದಿಗೆ ಕೈಜೋಡಿಸಿದರು. ಸಂಪೂರ್ಣ ಬೆಂಬಲವನ್ನು ನೀಡಿದ ಅವರು, ನಮಿತ್, ನಾವು ಇದನ್ನು ಒಟ್ಟಾಗಿ ಮಾಡಬೇಕು ಮತ್ತು ಇದನ್ನು ಸಾಧ್ಯವಾದಷ್ಟು ಅತ್ಯುತ್ತಮ ರೀತಿಯಲ್ಲಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು’ ಎಂಬುದಾಗಿ ನಮಿತ್ ವಿವರಿಸಿದ್ದಾರೆ.
Namit Malhotra talks about partnering with #Yash for #Ramayana . pic.twitter.com/rcBQoDyDQ9
— Deekshith Udupi (@Dixithh_Poojary) June 2, 2026
‘ಅವರ ಆ ಮಾತು ನನಗೆ ಅತ್ಯಂತ ಅಮೂಲ್ಯವಾದದ್ದು. ಏಕೆಂದರೆ, ಅವರಂತಹ ದೊಡ್ಡ ಮಟ್ಟದ ವ್ಯಕ್ತಿಯೊಬ್ಬರು ಕೇವಲ ಒಬ್ಬ ನಟನಾಗಿ ಮಾತ್ರ ಉಳಿಯದೆ, ನಮ್ಮೊಂದಿಗೆ ಜೊತೆಯಾಗಿ ನಿಂತು ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆ ಎರೆದಾಗ ತುಂಬಾ ದೂರದವರೆಗೆ ಸಾಗಲು ಸಹಾಯ ಮಾಡುತ್ತದೆ. ಅವರ ಆ ಧೃಢ ಸಂಕಲ್ಪವೇ ಇಂದು ಜನರ ಕಣ್ಣಮುಂದೆ ಕಾಣಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಅಂತಿಮವಾಗಿ ನಾವು ಭಾರತದಿಂದ ಇಡೀ ಜಗತ್ತಿಗಾಗಿ, ಈ ಹಿಂದೆ ಎಂದೂ ಮಾಡಿರದಂತಹ ಒಂದು ವಿಶಿಷ್ಟವಾದ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂಬುದು ನಮಿತ್ ಮಾತು.
ಇದನ್ನೂ ಓದಿ: ನನ್ನಲ್ಲಿದ್ದ ಕೆಟ್ಟ ಅಭ್ಯಾಸಗಳನ್ನು ರಾಮಾಯಣ ದೂರ ಮಾಡಿದೆ ಎಂದ ರಣಬೀರ್
‘ರಾಮಾಯಣ’ ಸಿನಿಮಾ ಎರಡು ಪಾರ್ಟ್ ಅಲ್ಲಿ ತೆರೆಗೆ ಬರುತ್ತಿದೆ. ಮೊದಲ ಭಾಗ ಈ ವರ್ಷ ದೀಪಾವಳಿಗೆ, ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.