ನನ್ನಲ್ಲಿದ್ದ ಕೆಟ್ಟ ಅಭ್ಯಾಸಗಳನ್ನು ರಾಮಾಯಣ ದೂರ ಮಾಡಿದೆ ಎಂದ ರಣಬೀರ್
ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ'ದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿರುವ ರಣಬೀರ್ ಕಪೂರ್, ಈ ಚಿತ್ರ ತಮ್ಮ ಜೀವನವನ್ನು ಬದಲಿಸಿದೆ ಎಂದಿದ್ದಾರೆ. ಪಾತ್ರದ ಆರಂಭಿಕ ಆತಂಕದ ನಂತರ, ರಾಮನ ಗುಣಗಳು ತಮ್ಮ ಯೋಚನೆ, ಮೌಲ್ಯಗಳು ಹಾಗೂ ಧರ್ಮದ ಮೇಲಿನ ದೃಷ್ಟಿಕೋನವನ್ನು ಪರಿವರ್ತಿಸಿದವು. ಮಗಳು ರಾಹಾಳಿಗಾಗಿ ಉತ್ತಮ ತಂದೆಯಾಗಲು ಈ ಪಾತ್ರ ಪ್ರೇರಣೆ ನೀಡಿದೆ ಎಂದು ಅವರು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ‘ರಾಮಾಯಣ’ ಚಿತ್ರದಲ್ಲಿ (Ramayana Movie) ಪ್ರಭು ಶ್ರೀರಾಮನ ಪಾತ್ರ ನಿರ್ವಹಿಸುತ್ತಿರುವ ನಟ ರಣಬೀರ್ ಕಪೂರ್, ಈ ಚಿತ್ರವು ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ಮೇಲೆ ಬೀರಿದ ಆಳವಾದ ಪ್ರಭಾವವನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಈ ಐತಿಹಾಸಿಕ ಪಾತ್ರಕ್ಕೆ ತಾವು ನ್ಯಾಯ ಒದಗಿಸಬಲ್ಲರೇ ಎಂಬ ಆತಂಕ ತಮಗಿತ್ತೆಂದು ಅವರು ಒಪ್ಪಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ರಣಬೀರ್, ‘ರಾಮಾಯಣ ಸಿನಿಮಾ ನನ್ನ ಜೀವನವನ್ನೇ ಬದಲಾಯಿಸಿದೆ. ಶ್ರೀರಾಮನ ಪಾತ್ರ ನನ್ನ ಯೋಚನಾ ಲಹರಿ, ಮೌಲ್ಯಗಳು ಹಾಗೂ ಧರ್ಮವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿತು. ಇದು ನನ್ನಲ್ಲಿದ್ದ ಕೆಟ್ಟ ಅಭ್ಯಾಸಗಳನ್ನು ದೂರವಾಗಿಸಿ, ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದೆ. ಮಗಳು ರಾಹಾ ನನ್ನ ಜೀವನಕ್ಕೆ ಬಂದ ಮೇಲೆ ನಾನು ಒಳ್ಳೆಯ ತಂದೆಯಾಗಬೇಕೆಂದು ಬಯಸಿದ್ದೆ, ಅದಕ್ಕೆ ಸರಿಯಾಗಿ ರಾಮಾಯಣ ಚಿತ್ರ ನನ್ನನ್ನು ರಾಹಾಳಿಗಾಗಿ ಮತ್ತಷ್ಟು ಉತ್ತಮ ಮಾನವನನ್ನಾಗಿ ಬದಲಾಯಿಸಿತು’ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಶ್ರೀರಾಮನ ಗುಣಗಳನ್ನು ಕೊಂಡಾಡಿದ ಅವರು, ‘ರಾಮನ ಅಸಲಿ ಶಕ್ತಿ ಅವನ ಸ್ನಾಯುಬಲ ಅಥವಾ ಅತಿಮಾನುಷ ಶಕ್ತಿಯಲ್ಲ; ಬದಲಿಗೆ ಅವನ ಶಾಂತತೆ, ಸಂಯಮ, ಕ್ಷಮಾಗುಣ ಮತ್ತು ಧರ್ಮಪಾಲನೆ. ಇಂದಿನ ಉದ್ವೇಗದ ಜಗತ್ತಿನಲ್ಲಿ ಅಹಂಕಾರ ಬದಿಗಿಟ್ಟು ಕರುಣೆಯಿಂದ ಪ್ರತಿಕ್ರಿಯಿಸುವ ಶ್ರೀರಾಮನ ಗುಣ ನಮಗೆ ದೊಡ್ಡ ಪಾಠ’ ಎಂದಿದ್ದಾರೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಅತ್ಯಂತ ಅಧಿಕೃತವಾಗಿ ತೆರೆಗೆ ತರುತ್ತಿರುವ ಈ ಚಿತ್ರದ ಭಾಗವಾಗಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಅಂದುಕೊಂಡಿದ್ದಕ್ಕಿಂತ ಮೊದಲೇ ಬರಲಿದೆ ‘ರಾಮಾಯಣ’ ಸಿನಿಮಾ; ‘ಟಾಕ್ಸಿಕ್’ ಮೇಲೆ ಒತ್ತಡ?
ಭಾರಿ ಬಜೆಟ್ನ ಈ ‘ರಾಮಾಯಣ’ ಚಿತ್ರ ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗವು ಅಕ್ಟೋಬರ್ 2026ರಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಸಿದ್ಧ ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಈ ಚಿತ್ರಕ್ಕೆ ಒಟ್ಟಾಗಿ ಸಂಗೀತ ನೀಡುತ್ತಿರುವುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





