
ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಆಯಾಸ, ನಿಶಕ್ತಿ ಹೆಚ್ಚಾಗಿ ಕಂಡುಬರುತ್ತಿದೆ. ಬೆಳಿಗ್ಗೆ ಎದ್ದ ತಕ್ಷಣ ಈ ಸಮಸ್ಯೆ ಆರಂಭವಾದರೆ ಮಲಗಿ ನಿದ್ರೆ ಮಾಡುವ ವರೆಗೂ ನಮ್ಮ ಉತ್ಸಾಹವನ್ನು ಕುಂದಿಸಿಬಿಡುತ್ತದೆ. ಇದಕ್ಕೆ ಕಾರಣಗಳು ಹಲವಾರಾದರೂ ಕೂಡ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸುಲಭವಾದ ಮಾರ್ಗ ಕಂಡುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ರೀತಿ ಕಂಡುಬರುವ ಆಯಾಸದಿಂದ ಮುಕ್ತಿ ಕಂಡುಕೊಳ್ಳಲು ಜೊತೆಗೆ ವ್ಯಾಯಾಮ ಅಥವಾ ಇನ್ನಿತರ ಕೆಲಸ ಮಾಡಲು ತ್ವರಿತ ಶಕ್ತಿ ಪಡೆಯಲು ಅನೇಕರು ಬಾಳೆಹಣ್ಣು (Bananas) ಅಥವಾ ಖರ್ಜೂರವನ್ನು ಸೇವನೆ ಮಾಡುತ್ತಾರೆ. ಆದರೆ ಇವುಗಳಲ್ಲಿ ಯಾವುದು ಉತ್ತಮ ಮತ್ತು ಯಾವ ಸಮಯಕ್ಕೆ ಯಾವುದನ್ನು ಸೇವನೆ ಮಾಡಬೇಕು ಎಂದು ತಿಳಿದಿದ್ದರೆ ಇದರಿಂದ ದ್ವಿಗುಣ ಪ್ರಯೋಜನ ಪಡೆಯಬಹುದು. ಹಾಗಾದರೆ ಈ ಎರಡು ಆಹಾರಗಳ ನಡುವೆ ಇರುವ ವ್ಯತಾಸವೇನು, ಯಾವುದು ಆರೋಗ್ಯಕ್ಕೆ ಒಳ್ಳೆಯದು ತಿಳಿದುಕೊಳ್ಳಿ.
ಒಂದು ಬಾಳೆಹಣ್ಣು ಸುಮಾರು 105 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್, ಪೊಟ್ಯಾಸಿಯಮ್, ವಿಟಮಿನ್ ಬಿ6 ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಬಾಳೆಹಣ್ಣಿಗೆ ಹೋಲಿಸಿದರೆ, ಖರ್ಜೂರವು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಕೇವಲ ಮೂರು ಅಥವಾ ನಾಲ್ಕು ಖರ್ಜೂರ ತಿನ್ನುವುದರಿಂದ ನಿಮಗೆ 90 ರಿಂದ 120 ಕ್ಯಾಲೋರಿಗಳಷ್ಟು ಶಕ್ತಿ ಸಿಗುತ್ತದೆ. ಅಷ್ಟೇಅಲ್ಲ, ಇವು ಫೈಬರ್, ಕಬ್ಬಿಣ ಮತ್ತು ಮೆಗ್ನೀಸಿಯಮ್ನಿಂದಲೂ ಸಮೃದ್ಧವಾಗಿದೆ. ದೀರ್ಘಕಾಲ ವ್ಯಾಯಾಮ ಮಾಡಲು ಅಥವಾ ದಿನವಿಡೀ ಚೈತನ್ಯಶೀಲರಾಗಿ ಕೆಲಸ ಮಾಡಲು ಬಯಸುವವರಿಗೆ, ಬಾಳೆಹಣ್ಣು ಒಳ್ಳೆಯದು. ಅವುಗಳಲ್ಲಿರುವ ನಾರು ಸಕ್ಕರೆಯನ್ನು ನಿಧಾನವಾಗಿ ರಕ್ತಕ್ಕೆ ಬಿಡುಗಡೆ ಮಾಡುತ್ತದೆ, ಹಾಗಾಗಿ ದೀರ್ಘಕಾಲದವರೆಗೆ ಶಕ್ತಿ ಒದಗಿಸಲು ಸಹಾಯ ಮಾಡುತ್ತದೆ.
ವ್ಯಾಯಾಮ ಮಾಡಿ ಬಂದ ನಂತರ ನೀವು ತುಂಬಾ ದಣಿದಿದ್ದರೆ ಅಥವಾ ಆಲಸ್ಯ ಕಾಡುತ್ತಿದ್ದರೆ ಖರ್ಜೂರ ಸೇವನೆ ಮಾಡುವುದು ಒಳ್ಳೆಯದು. ಏಕೆಂದರೆ ಅವುಗಳಲ್ಲಿ ಹೆಚ್ಚಿನ ಪ್ರಮಾಣದ ನೈಸರ್ಗಿಕ ಸಕ್ಕರೆ ಅಂಶವಿದ್ದು ದೇಹಕ್ಕೆ ತಕ್ಷಣದ ಗ್ಲೂಕೋಸ್ ಅನ್ನು ಒದಗಿಸುತ್ತದೆ. ಅದಕ್ಕಾಗಿಯೇ ಉಪವಾಸ ಮಾಡುವವರು ಖರ್ಜೂರಕ್ಕೆ ಆದ್ಯತೆ ನೀಡುತ್ತಾರೆ. ಆದರೆ ಮಧುಮೇಹ ಇರುವವರು ಖರ್ಜೂರ ಸೇವನೆ ಮಾಡುವುದನ್ನು ಆದಷ್ಟು ನಿಯಂತ್ರಿಸಬೇಕು. ಸ್ನಾಯು ಸೆಳೆತದಿಂದ ಬಳುತ್ತಿರುವವರು ಕೂಡ ಖರ್ಜೂರ ಸೇವನೆ ಮಾಡಬಹುದು. ಇದು ಮೆಗ್ನೀಸಿಯಮ್ ಅಂಶದಿಂದ ಸಮೃದ್ಧವಾಗಿದ್ದು ಸ್ನಾಯುಗಳು ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬಾಳೆಹಣ್ಣನ್ನು ಈ ಸಮಯದಲ್ಲಿ ತಿನ್ನುವುದರಿಂದ ಸಿಗುತ್ತೆ ಊಹಿಸಲೂ ಸಾಧ್ಯವಾಗದ ಪ್ರಯೋಜನ!
ಎರಡೂ ಕೂಡ ದೇಹದ ಅಗತ್ಯಗಳಿಗೆ ಅನುಗುಣವಾಗಿ ಒಳ್ಳೆಯದು. ನೀವು ದೀರ್ಘಕಾಲ ಕೆಲಸ ಮಾಡಲು ಬಯಸಿದಲ್ಲಿ ಬಾಳೆ ಹಣ್ಣುಗಳನ್ನು ಸೇವನೆ ಮಾಡಿ. ತಕ್ಷಣ ಶಕ್ತಿ ಪಡೆಯಲು ಖರ್ಜೂರ ಸೇವನೆ ಮಾಡಿ. ಆದರೆ ಎಲ್ಲವೂ ಮಿತವಾಗಿರಲಿ. ಯಾವುದೇ ಆಗಲಿ ಅತಿಯಾದರೆ ಒಳ್ಳೆಯದಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ