
ಮಳೆಗಾಲದಲ್ಲಿ ಹವಾಮಾನ ಬದಲಾವಣೆ, ತೇವಾಂಶ ಮತ್ತು ಆಹಾರ ಪದ್ಧತಿಯಲ್ಲಿನ ವ್ಯತ್ಯಾಸದಿಂದ ಕೆಲವರಿಗೆ ಜೀರ್ಣಕ್ರಿಯೆ ನಿಧಾನವಾಗುವುದು, ಗ್ಯಾಸ್, ಹೊಟ್ಟೆ ಉಬ್ಬರ ಅಥವಾ ಅಜೀರ್ಣದಂತಹ ಸಮಸ್ಯೆಗಳು ಕಾಡಬಹುದು. ಇಂತಹ ಸಂದರ್ಭದಲ್ಲಿ ಕೆಲವರ ಮನೆಗಳಲ್ಲಿ ಸಾಮಾನ್ಯವಾಗಿ ಸೇವಿಸುವ ಪಾನೀಯವೆಂದರೆ ಅದು ಮಜ್ಜಿಗೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ಮಜ್ಜಿಗೆಯನ್ನು ಯಾವ ಸಮಯದಲ್ಲಿ, ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೇವೆ ಎಂಬುದೂ ಕೂಡ ಬಹಳ ಮುಖ್ಯವಾಗುತ್ತದೆ. ಮಜ್ಜಿಗೆಯಲ್ಲಿ ನೀರು, ಪ್ರೋಟೀನ್, ಕ್ಯಾಲ್ಸಿಯಂ ಸೇರಿದಂತೆ ಹಲವು ಪೋಷಕಾಂಶಗಳಿದ್ದು, ಹುದುಗಿಸಿದ ಮಜ್ಜಿಗೆಯಲ್ಲಿ ಪ್ರೋಬಯೋಟಿಕ್ ಬ್ಯಾಕ್ಟೀರಿಯಾಗಳು ಇರಬಹುದು. ಇವು ಕರುಳಿನ ಆರೋಗ್ಯಕ್ಕೆ ಸಹಾಯಕವಾಗಬಹುದು. ಇದರಿಂದ ಸಿಗುವ ಮತ್ತಷ್ಟು ಪ್ರಯೋಜನಗಳ ಬಗ್ಗೆ ಮಾಹಿತಿ ಸ್ಟೋರಿಯಲ್ಲಿದೆ.
ಹೌದು, ಸರಿಯಾದ ರೀತಿಯಲ್ಲಿ ತಯಾರಿಸಿದ ಮಜ್ಜಿಗೆ ಕೆಲವರಿಗೆ ಜೀರ್ಣಕ್ರಿಯೆಗೆ ಸಹಾಯ ಮಾಡಬಹುದು. ಹುದುಗಿಸಿದ ಹಾಲಿನಿಂದ ತಯಾರಿಸುವ ಮಜ್ಜಿಗೆಯಲ್ಲಿ ಇರುವ ಪ್ರೋಬಯೋಟಿಕ್ಗಳು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಸಹಾಯ ನೀಡಬಹುದು. ಇದರಿಂದ ಜೀರ್ಣಕ್ರಿಯೆ ಸುಗಮವಾಗಲು ಮತ್ತು ಕೆಲವರಲ್ಲಿ ಹೊಟ್ಟೆಯ ಅಸ್ವಸ್ಥತೆ ಕಡಿಮೆಯಾಗಲು ನೆರವಾಗಬಹುದು. ಆದರೆ ಗ್ಯಾಸ್ ಅಥವಾ ಆಸಿಡಿಟಿ ಇರುವ ಪ್ರತಿಯೊಬ್ಬರಿಗೂ ಮಜ್ಜಿಗೆ ಒಂದೇ ರೀತಿಯಲ್ಲಿ ಪ್ರಯೋಜನ ನೀಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಇದನ್ನೂ ಓದಿ: ತಣ್ಣೀರು ಕುಡಿದರೆ ನಿಜವಾಗಿಯೂ ಶೀತ- ಜ್ವರ ಬರುತ್ತಾ? ವೈದ್ಯರು ನೀಡಿರುವ ಸ್ಪಷ್ಟ ಉತ್ತರ ಇಲ್ಲಿದೆ
ಮಜ್ಜಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿರುವುದರಿಂದ ಇದು ದೇಹಕ್ಕೆ ದ್ರವಾಂಶ ಒದಗಿಸಲು ಸಹಾಯ ಮಾಡಬಹುದು. ಬಿಸಿಲಿರುವ ದಿನಗಳಲ್ಲಿ ಅಥವಾ ದೈಹಿಕ ಚಟುವಟಿಕೆಯ ನಂತರ ಮಜ್ಜಿಗೆ ಹಗುರವಾದ ಪಾನೀಯವಾಗಿರಬಹುದು. ಆದರೆ ನೀರಿನ ಬದಲಿಗೆ ಮಜ್ಜಿಗೆಯನ್ನೇ ಅವಲಂಬಿಸುವ ಅಗತ್ಯವಿಲ್ಲ. ದಿನವಿಡೀ ಸಾಕಷ್ಟು ನೀರು ಕುಡಿಯುವುದು ಮುಖ್ಯ.
ಮಳೆಗಾಲದಲ್ಲಿ ಮಜ್ಜಿಗೆಗೆ ಸಂಬಂಧಿಸಿದಂತೆ ಹಲವು ಮನೆಮದ್ದುಗಳ ಸಲಹೆಗಳು ಪ್ರಚಲಿತದಲ್ಲಿವೆ. ಆದರೆ ಸಂಜೆ 5 ಗಂಟೆಯ ನಂತರ ಮಜ್ಜಿಗೆ ಕುಡಿದರೆ ಕಫ, ಜ್ವರ ಅಥವಾ ಗಂಟಲಿಗೆ ಸಂಬಂಧ ಪಟ್ಟ ಸೋಂಕು ಉಂಟಾಗುತ್ತದೆ ಎಂಬುದಕ್ಕೆ ಬಲವಾದ ವೈಜ್ಞಾನಿಕ ಪುರಾವೆ ಇಲ್ಲ. ಆದರೆ ತಂಪು ಪಾನೀಯಗಳು ಅಥವಾ ಫ್ರಿಜ್ನಿಂದ ತೆಗೆದ ಮಜ್ಜಿಗೆ ಕೆಲವರಿಗೆ ಗಂಟಲಿನಲ್ಲಿ ಅಸ್ವಸ್ಥತೆ ಉಂಟುಮಾಡಬಹುದು. ನಿಮಗೆ ಅಂತಹ ಅನುಭವವಿದ್ದರೆ ಕೋಣೆಯ ಉಷ್ಣಾಂಶದಲ್ಲಿರುವ ತಾಜಾ ಮಜ್ಜಿಗೆಯನ್ನು ಸೇವಿಸುವುದು ಸೂಕ್ತ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ