
ಖರ್ಜೂರ (Dates) ಸೇವನೆ ಮಾಡುವುದು ಆರೋಗ್ಯಕ್ಕೆ ವರದಾನವಿದ್ದಂತೆ. ಇವುಗಳಲ್ಲಿರುವ ಪೋಷಕಾಂಶಗಳು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುವುದಕ್ಕೆ ಸಹಾಯ ಮಾಡುತ್ತದೆ. ಮಾತ್ರವಲ್ಲ, ಈ ಖರ್ಜೂರ ಗಳನ್ನು ದಿನನಿತ್ಯ ಸೇವನೆ ಮಾಡುವ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಕ್ಯಾಲೋರಿ, ಕಾರ್ಬೋಹೈಡ್ರೇಟ್, ಫೈಬರ್, ಪ್ರೋಟೀನ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ತಾಮ್ರ, ಮ್ಯಾಂಗನೀಸ್, ಕಬ್ಬಿಣ, ವಿಟಮಿನ್ ಬಿ6 ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆದುಕೊಳ್ಳಬಹುದು. ಮಾತ್ರವಲ್ಲ, ಡಾ. ಮೇಧಾವಿ ಗೌತಮ್ (Dr. Medhavi Gautam) ಅವರು ಹೇಳುವ ಪ್ರಕಾರ, ಚಳಿಗಾಲದಲ್ಲಿ ಖರ್ಜೂರವನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಬೇರೆ ಸಮಯದಲ್ಲಿ ವಾರಕ್ಕೆ ಒಂದು, ಎರಡು ಸೇವನೆ ಮಾಡುತ್ತಿದ್ದರೆ ಚಳಿಗಾಲದಲ್ಲಿ ದಿನಕ್ಕೆ ಒಂದಾದರೂ ತಿನ್ನಬೇಕು ಇದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಹಾಗಾದರೆ ಖರ್ಜೂರಕ್ಕೂ ಚಳಿಗಾಲಕ್ಕೂ ಇರುವ ಸಂಬಂಧವೇನು, ಯಾಕೆ ಈ ಸಮಯದಲ್ಲಿ ಹೆಚ್ಚಾಗಿ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಡಾ. ಮೇಧಾವಿ ಗೌತಮ್ ಹೇಳುವ ಪ್ರಕಾರ, ಚಳಿಗಾಲದಲ್ಲಿ ಖರ್ಜೂರ ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕನಿಷ್ಠ ಪಕ್ಷ ನೀವು ವಾರದಲ್ಲಿ ಎರಡರಿಂದ ಮೂರು ಬಾರಿಯಾದರೂ ಖರ್ಜೂರವನ್ನು ಸೇವನೆ ಮಾಡಬೇಕು. ಇದು ಕೆಮ್ಮು ಮತ್ತು ಶೀತಗಳು ಬರದಂತೆ ತಡೆಯುತ್ತದೆ ಮತ್ತು ದೇಹವು ಬೆಚ್ಚಗಿರುವಂತೆ ಮಾಡುತ್ತದೆ. ಹಾಗಾಗಿ ರಾತ್ರಿ ಹಾಲಿನೊಂದಿಗೆ ಇವುಗಳನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅವುಗಳಲ್ಲಿ ಗ್ಲೂಕೋಸ್, ಸುಕ್ರೋಸ್ ಮತ್ತು ಫ್ರಕ್ಟೋಸ್ನಂತಹ ನೈಸರ್ಗಿಕ ಸಕ್ಕರೆಗಳಿದ್ದು, ಅವು ದೇಹಕ್ಕೆ ಶಕ್ತಿಯನ್ನು ಒದಗಿಸಲು ಕೂಡ ಸಹಾಯ ಮಾಡುತ್ತವೆ. ಮಾತ್ರವಲ್ಲ ರಾತ್ರಿ ಬಿಸಿ ಹಾಲಿನಲ್ಲಿ ಕುದಿಸಿದ ಖರ್ಜೂರ ತಿನ್ನುವುದು ಕೂಡ ಬಹಳ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸಾಧ್ಯವಾದಲ್ಲಿ ನೀವು ಹಗಲಿನಲ್ಲಿ 2 ರಿಂದ 3 ಖರ್ಜೂರ ತಿನ್ನಬಹುದು. ಅವು ನೈಸರ್ಗಿಕವಾಗಿ ಸಕ್ಕರೆಯನ್ನು ಹೊಂದಿರುವುದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.
ಖರ್ಜೂರದಲ್ಲಿ ಉತ್ತಮ ಪ್ರಮಾಣದ ಮೆಗ್ನೀಸಿಯಮ್ ಇದ್ದು ಸ್ನಾಯು ನೋವಿನಿಂದ ಪರಿಹಾರ ನೀಡುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಅಲ್ಲಲ್ಲಿ ನೋವುಗಳು ಕಂಡುಬರುವ ಪ್ರಮಾಣ ಹೆಚ್ಚಾಗಿರುವುದರಿಂದ, ಇದರಿಂದ ಪರಿಹಾರ ಪಡೆಯಲು ಖರ್ಜೂರ ಬಹಳ ಒಳ್ಳೆಯ ಆಯ್ಕೆ. ಇವುಗಳಲ್ಲಿರುವ ವಿಟಮಿನ್ ಎ ಅಂಶ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಹಕಾರಿಯಾಗಿದೆ. ನಿಮಗೆ ಖರ್ಜೂರವನ್ನು ಹಾಗೆ ತಿನ್ನಲು ಇಷ್ಟವಾಗದಿದ್ದಲ್ಲಿ ಹಾಲಿನಲ್ಲಿ ಕುದಿಸಿ, ಮಿಶ್ರಣ ಮಾಡಿ ಅಥವಾ ಸ್ಮೂಥಿ ಮಾಡಿಯೂ ಸೇವನೆ ಮಾಡಬಹುದು.
ಇದನ್ನೂ ಓದಿ: ಪ್ರತಿದಿನ ಒಂದೇ ಒಂದು ಖರ್ಜೂರ ತಿಂದರೆ ಏನಾಗುತ್ತೆ ಗೊತ್ತಾ? 99% ಜನರಿಗೆ ಈ ರಹಸ್ಯ ತಿಳಿದಿಲ್ಲ
ಸಾಮಾನ್ಯವಾಗಿ ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇರುವುದರಿಂದ ಮಧುಮೇಹ ಇರುವವರು ಇವುಗಳ ಸೇವನೆ ಮಾಡುವುದನ್ನು ತಪ್ಪಿಸಬೇಕು. ಹೆಚ್ಚುವರಿಯಾಗಿ, ಯಾರಿಗಾದರೂ ಈಗಾಗಲೇ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿದ್ದರೆ, ಅವರು ಖರ್ಜೂರ ಸೇವನೆ ಮಾಡುವ ಮೊದಲು ಆರೋಗ್ಯ ತಜ್ಞರನ್ನು ಸಂಪರ್ಕಿಸಬೇಕು. ಮಾತ್ರವಲ್ಲ ದಿನಕ್ಕೆ 4 ಕ್ಕಿಂತ ಹೆಚ್ಚು ಖರ್ಜೂರ ತಿನ್ನುವುದು ಒಳ್ಳೆಯದಲ್ಲ. ಯಾಕೆಂದರೆ ಇವುಗಳಲ್ಲಿ ಬಹಳಷ್ಟು ನೈಸರ್ಗಿಕ ಸಕ್ಕರೆ ಅಂಶ ಇರುವುದರಿಂದ ಮಿತ ಪ್ರಮಾಣದಲ್ಲಿ ಸೇವಿಸುವುದು ಬಹಳ ಒಳ್ಳೆಯದು. ಇದಲ್ಲದೆ, ಅತಿಯಾದ ಸೇವನೆಯು ವಾಂತಿ ಅಥವಾ ಅತಿಸಾರಕ್ಕೆ ಕಾರಣವಾಗಬಹುದು. ಆದ್ದರಿಂದ, ಇವುಗಳನ್ನು ಮಿತವಾಗಿ ಸೇವನೆ ಮಾಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ