
ಮಳೆಗಾಲ (rainy season) ಆರಂಭವಾಗಿದ್ದು ಈ ಸಮಯದಲ್ಲಿ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಇಲ್ಲದಿದ್ದರೆ, ಈ ಋತುಮಾನದಲ್ಲಿ ರೋಗಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದರಲ್ಲಿಯೂ ಶೀತ, ಕೆಮ್ಮು, ಗಂಟಲು ನೋವು ಮತ್ತು ವೈರಲ್ ಜ್ವರಗಳಂತಹ ಕಾಲೋಚಿತ ಕಾಯಿಲೆಗಳ ಅಪಾಯ ಹೆಚ್ಚು. ವಾಸ್ತವದಲ್ಲಿ, ಮಳೆಗಾಲದಲ್ಲಿ ತೇವಾಂಶ ಮತ್ತು ಧೂಳು ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ತ್ವರಿತ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಈ ಋತುವಿನಲ್ಲಿ ನಾವು ಸೇವಿಸುವ ಆಹಾರದ ಬಗ್ಗೆ ಸ್ವಲ್ಪ ಜಾಗರೂಕರಾಗಿರುವುದು ಒಳ್ಳೆಯದು. ಅದರಲ್ಲಿಯೂ ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಹಣ್ಣುಗಳು ಸೇವನೆ ಮಾಡುತ್ತೇವೆ. ಆದರೆ ತಜ್ಞರು ಮಳೆಗಾಲದಲ್ಲಿ ಕೆಲವು ಹಣ್ಣುಗಳನ್ನು ಸೇವಿಸಬಾರದು (Fruits to Avoid in Monsoon) ಎಂದು ಹೇಳುತ್ತಾರೆ. ಈ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಮಳೆಗಾಲದಲ್ಲಿ ನೀರಿನಿಂದ ಸಮೃದ್ಧವಾಗಿರುವ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಹೊಟ್ಟೆ ನೋವು, ವಾಂತಿ, ಅತಿಸಾರ, ಶೀತ ಮತ್ತು ಕೆಮ್ಮು ಮುಂತಾದ ಸಮಸ್ಯೆಗಳು ಉದ್ಭವಿಸಬಹುದು. ಹಾಗಾದರೆ ಮಳೆಗಾಲದಲ್ಲಿ ಯಾವ ಹಣ್ಣುಗಳನ್ನು ತಿನ್ನಬಾರದು? ಈ ಸಮಯದಲ್ಲಿ ಯಾವ ಹಣ್ಣುಗಳಿಂದ ದೂರವಿದಷ್ಟು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ಈ ಹಣ್ಣುಗಳನ್ನು ಹೆಚ್ಚಾಗಿ ಬೇಸಿಗೆಯಲ್ಲಿ ಲಭ್ಯವಿರುತ್ತವೆ. ಇವುಗಳಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಇದರಿಂದಾಗಿ ಮಳೆಗಾಲದ ಆರ್ದ್ರ ವಾತಾವರಣಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಇವು ಬ್ಯಾಕ್ಟೀರಿಯಾದೊಂದಿಗೆ ಬೇಗನೆ ಬೆರೆತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ. ನಿಮಗೆ ಈ ಹಣ್ಣು ತುಂಬಾ ಇಷ್ಟ ಎಂದಾದರೆ ಇವುಗಳನ್ನು ಸೇವನೆ ಮಾಡುವ ಮೊದಲು ಬಹಳ ಜಾಗರೂಕರಾಗಿರಿ. ಅವು ತಾಜಾವಾಗಿದ್ದಾಗ ಮಾತ್ರ ತಿನ್ನಿರಿ. ಇದನ್ನು ಕತ್ತರಿಸಿ ಅದನ್ನು ದಿನ ಪೂರ್ತಿ ತಿನ್ನಬೇಡಿ. ಅಥವಾ ಫ್ರಿಡ್ಜ್ ನಲ್ಲಿಟ್ಟು ಸೇವನೆ ಮಾಡಬೇಡಿ. ಇದು ಸೋಂಕುಗಳ ಅಪಾಯವನ್ನು ಹೆಚ್ಚಿಸಬಹುದು.
ಸಾಮಾನ್ಯವಾಗಿ, ಬೇಸಿಗೆಯಲ್ಲಿ ಮಾವಿನ ಹಣ್ಣುಗಳದ್ದೆ ರಾಜ್ಯಭಾರ. ಆದರೆ ಇವು ಮಳೆಗಾಲದಲ್ಲಿಯೂ ನಮಗೆ ತಿನ್ನುವುದಕ್ಕೆ ಲಭ್ಯವಿರುತ್ತದೆ. ಬಳಿಕ ಅವುಗಳಿಗೆ ಬರುಬರುತ್ತಾ ಬೇಡಿಕೆ ಕಡಿಮೆಯಾಗುತ್ತದೆ. ಆದರೆ ಮಾವಿನ ಹಣ್ಣುಗಳ ತಿನ್ನುವವರ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ. ಹಾಗಾಗಿ ಮಾರುಕಟ್ಟೆಗಳಲ್ಲಿ ಈ ಹಣ್ಣು ಯೆಥೇಚ್ಛವಾಗಿ ಲಭ್ಯವಿರುತ್ತದೆ. ಆದರೆ ನೆನಪಿಟ್ಟುಕೊಳ್ಳಿ, ಮಳೆಗಾಲದಲ್ಲಿ ಬರುವ ಮಾವಿನ ಹಣ್ಣುಗಳಲ್ಲಿ ಹೆಚ್ಚಿನ ಮಟ್ಟದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವಿರುತ್ತವೆ. ಈ ಕಾರಣಕ್ಕಾಗಿ, ಮಾವಿನ ಹಣ್ಣುಗಳನ್ನು ಸೇವಿಸುವುದು ಸುರಕ್ಷಿತವಲ್ಲ. ಅದಕ್ಕಾಗಿಯೇ ತಜ್ಞರು ಮಳೆಗಾಲದಲ್ಲಿ ಮಾವಿನ ಹಣ್ಣುಗಳನ್ನು ತಪ್ಪಿಸಲು ಶಿಫಾರಸು ಮಾಡುತ್ತಾರೆ.
ನಿಮಗೆ ಲಿಚಿ ಹಣ್ಣು ತುಂಬಾ ಇಷ್ಟವಿರಬಹುದು ಆದರೆ ಇವುಗಳನ್ನು ಮಳೆಗಾಲದಲ್ಲಿ ಸೇವನೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇವುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಇತರ ರೋಗಕಾರಕಗಳು ಇರಬಹುದು. ಅವು ಮಳೆಗಾಲದಲ್ಲಿ ಆಹಾರದಿಂದ ಹರಡುವ ರೋಗಗಳ ಅಪಾಯವನ್ನು ಹೆಚ್ಚಿಸುತ್ತವೆ. ಮಳೆಗಾಲದಲ್ಲಿ ಅವುಗಳನ್ನು ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಅವು ಹೊಟ್ಟೆ ನೋವು, ಅಜೀರ್ಣ ಮತ್ತು ಆಮ್ಲೀಯತೆಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಅದಕ್ಕಾಗಿಯೇ ಮಳೆಗಾಲದಲ್ಲಿ ಈ ಲಿಚಿಗಳನ್ನು ಅತಿಯಾಗಿ ಸೇವಿಸದಂತೆ ತಜ್ಞರು ಸಲಹೆ ನೀಡುತ್ತಾರೆ.
ಸ್ಟ್ರಾಬೆರಿ, ಬೆರಿಹಣ್ಣುಗಳು ಮತ್ತು ರಾಸ್ಪ್ಬೆರಿ ಹಣ್ಣುಗಳನ್ನು ಮಳೆಗಾಲದಲ್ಲಿ ತಿನ್ನಬಾರದು ಏಕೆಂದರೆ ಅವು ತೇವಾಂಶದಿಂದಾಗಿ ಬೇಗನೆ ಹಾಳಾಗುತ್ತವೆ. ಅವುಗಳಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ. ಅಂತಹ ಪರಿಸ್ಥಿತಿಗಳಲ್ಲಿ ಅವುಗಳನ್ನು ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.
ಹೆಚ್ಚಿನ ಆರ್ದ್ರತೆಯ ಮಟ್ಟದಿಂದಾಗಿ, ಪಪ್ಪಾಯಿ ಕೂಡ ಬೇಗನೆ ಹಾಳಾಗಬಹುದು. ಹಾಗಾಗಿ ತಾಜಾ ಮತ್ತು ಚೆನ್ನಾಗಿ ಮಾಗಿದಂತಿದ ಪಪ್ಪಾಯಿ ಹಣ್ಣುಗಳನ್ನು ಮಾತ್ರ ತಿನ್ನಿ. ಜೊತೆಗೆ ಮಳೆಗಾಲದಲ್ಲಿ ಅನಾನಸ್ ಹಣ್ಣಿನಲ್ಲಿ ತೇವಾಂಶ ಜಾಸ್ತಿಯಾಗಿದ್ದು ಬೇಗನೆ ಹುಳಿಯಾಗಬಹುದು. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ಉಂಟಾಗಬಹುದು. ಅದಕ್ಕಾಗಿಯೇ ತಜ್ಞರು ಅನಾನಸ್ ಹಣ್ಣನ್ನು ಕತ್ತರಿಸಿದ ತಕ್ಷಣ ಸೇವಿಸಲು ಶಿಫಾರಸು ಮಾಡುತ್ತಾರೆ.
ಇದನ್ನೂ ಓದಿ: ನೆಟ್ಟಿಗೆ ತೆಗೆಯುವ ಅಭ್ಯಾಸದಿಂದ ಈ ಸಮಸ್ಯೆಗಳು ಬರಬಹುದು ಎಚ್ಚರ!
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ