ಕಲ್ಲಂಗಡಿ ಹಣ್ಣುಗಳನ್ನು ತಿನ್ನುವುದು ದೇಹಕ್ಕೆ ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇದು ನಿಮಗೂ ತಿಳಿದಿರಬಹುದು. ಬಿಸಿಲಿನ ಬೆಗೆಯನ್ನು ಕಡಿಮೆ ಮಾಡುವುದರಲ್ಲಿ ಇದು ಅಗ್ರ ಸ್ಥಾನದಲ್ಲಿರುತ್ತದೆ. ಈಗ ಮಳೆಗಾಲವಾದರೂ ಬಿಸಿಲಿನ ತೀವ್ರತೆ ಕಡಿಮೆಯಾಗಿಲ್ಲ. ಹಾಗಾಗಿ ಬೇಸಿಗೆ ಮಾತ್ರವಲ್ಲ ಮಳೆಗಾಲದಲ್ಲಿಯೂ ಈ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ. ಇದರಲ್ಲಿರುವ ನೀರಿನ ಅಂಶ ನಿಮ್ಮ ದೇಹವನ್ನು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಆದರೆ ಈ ಹಣ್ಣು ಮಧುಮೇಹಿಗಳಿಗೆ ಕೆಟ್ಟದ್ದೇ? ಕಲ್ಲಂಗಡಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆಯೇ? ಮಧುಮೇಹದಿಂದ ಬಳಲುತ್ತಿರುವವರ ಮನಸ್ಸಿನಲ್ಲಿ ಮೂಡುವ ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಮಾಹಿತಿ.
ಈ ಬಗ್ಗೆ, ಹೆಲ್ತ್ಶಾಟ್ಸ್ ಕರ್ನಾಲ್ನ ಉಜಾಲಾ ಸಿಗ್ನಸ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಆಂತರಿಕ ಔಷಧ ಸಲಹೆಗಾರ ಡಾ. ಆಬಿದ್ ಅಮೀನ್ ಭಟ್ ಅವರು ಕೆಲವು ಮಾಹಿತಿ ಹಂಚಿಕೊಂಡಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ. ಕಲ್ಲಂಗಡಿ ಹೆಚ್ಚು ಪೌಷ್ಟಿಕಾಂಶ ಭರಿತವಾಗಿದ್ದು ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಕಲ್ಲಂಗಡಿಯಲ್ಲಿರುವ ಲೈಕೋಪೀನ್ ಮತ್ತು ಸಿಟ್ರುಲೈನ್, ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಡಾ. ಆಬಿದ್ ಅಮೀನ್ ಭಟ್ ಹೇಳಿದ್ದಾರೆ.
ಕಲ್ಲಂಗಡಿ ವಿಟಮಿನ್ ಸಿ ಮತ್ತು ಲೈಕೋಪೀನ್ ಸೇರಿದಂತೆ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ, ಇದು ಸೆಲ್ಯುಲಾರ್ ಹಾನಿಯಿಂದ ರಕ್ಷಿಸಲು ಮತ್ತು ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಅಜೀರ್ಣ, ಹೊಟ್ಟೆ ಉಬ್ಬರದಂತ ಸಮಸ್ಯೆ ಇರುವವರು ಕಲ್ಲಂಗಡಿಯನ್ನು ತಮ್ಮ ಆಹಾರದಲ್ಲಿ ಸೇರಿಸಬೇಕು ಏಕೆಂದರೆ ಇದರಲ್ಲಿ ಫೈಬರ್ ಸಮೃದ್ಧವಾಗಿದೆ. ಜೊತೆಗೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಕಲ್ಲಂಗಡಿಯಲ್ಲಿ ಹೆಚ್ಚಿನ ನೀರಿನ ಅಂಶ ಮತ್ತು ವಿಟಮಿನ್ ಸಿ ಇದ್ದು, ಇವು ಚರ್ಮವನ್ನು ಹೈಡ್ರೇಟ್ ಆಗಿಡಲು ಮತ್ತು ಅದರ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕಲ್ಲಂಗಡಿಯಲ್ಲಿ ಕಂಡು ಬರುವ ಅಮೈನೋ ಆಮ್ಲ ಸಿಟ್ರುಲೈನ್ ಸ್ನಾಯು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ತೀವ್ರವಾದ ವ್ಯಾಯಾಮದ ನಂತರ ಸ್ನಾಯು ಚೇತರಿಕೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ:ಆರೋಗ್ಯಕ್ಕೆ ಒಳ್ಳೆಯದು ಎಂದು ಅತಿಯಾಗಿ ಕಲ್ಲಂಗಡಿ ಹಣ್ಣು ಸೇವಿಸಬೇಡಿ
ಮಧುಮೇಹಿಗಳು ಕಲ್ಲಂಗಡಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹೌದು, ಇದು ಸಿಹಿ ಹಣ್ಣು, ಆದರೆ ಕಡಿಮೆ ಗ್ಲೈಸೆಮಿಕ್ ಅನ್ನು ಹೊಂದಿದೆ. ಹಾಗಾಗಿ ಆಹಾರದ ಸೇವೆಯಲ್ಲಿ ಕಾರ್ಬೋಹೈಡ್ರೇಟ್ ಸಮತೋಲನದಲ್ಲಿರಲು ಸಹಾಯ ಮಾಡುತ್ತದೆ. ಆದ್ದರಿಂದ, ಮಧುಮೇಹ ಹೊಂದಿರುವ ಜನರು ಕಲ್ಲಂಗಡಿಯನ್ನು ಸೇವಿಸಬಹುದು. ಆದರೆ ಸಮತೋಲಿತ ಆಹಾರದ ಭಾಗವಾಗಿ ಮಿತವಾಗಿ ಸೇವಿಸಬೇಕು ಎಂದು ಡಾ. ಆಬಿದ್ ಅಮೀನ್ ಭಟ್ ಹೇಳಿದ್ದಾರೆ. ಜೊತೆಗೆ ಮಧುಮೇಹ ಹೊಂದಿರುವ ಜನರು ಕಲ್ಲಂಗಡಿ ತಿಂದ ನಂತರ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡಬೇಕು. ಅಲ್ಲದೆ ಈ ಬಗ್ಗೆ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸುವುದು ಸಹ ಮುಖ್ಯವಾಗಿದೆ. ಆದ್ದರಿಂದ, ಕಲ್ಲಂಗಡಿ ಮಧುಮೇಹಿಗಳಿಗೆ ಕೆಟ್ಟದ್ದಲ್ಲ, ಆದರೆ ಮಧುಮೇಹ ಹೊಂದಿರುವ ಜನರು ಇದನ್ನು ಮಿತವಾಗಿ ಸೇವಿಸಬೇಕು ಮತ್ತು ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅವರ ಒಟ್ಟಾರೆ ಸೇವನೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು.
ತಜ್ಞರು ಆರೋಗ್ಯಕರ, ಸಮತೋಲಿತ ಆಹಾರದ ಭಾಗವಾಗಿ ಮಧುಮೇಹ ಹೊಂದಿರುವ ಜನರು ಆನಂದಿಸಬಹುದಾದ ಹಲವಾರು ಹಣ್ಣುಗಳ ಬಗ್ಗೆ ತಿಳಿಸಿದ್ದು, ಸ್ಟ್ರಾಬೆರಿ, ರಾಸ್ಪ್ಬೆರಿ, ಬ್ಲೂಬೆರಿ ಮತ್ತು ಬ್ಲ್ಯಾಕ್ಬೆರಿಗಳಂತಹ ಬೆರ್ರಿ ಹಣ್ಣುಗಳನ್ನು ಮಧುಮೇಹಿಗಳಿಗೆ ಸೂಚಿಸುತ್ತಾರೆ. ಇವುಗಳಲ್ಲಿ ಕಡಿಮೆ ಸಕ್ಕರೆ ಮತ್ತು ಹೆಚ್ಚಿನ ಫೈಬರ್ ಇದೆ. ಇದು ಮಧುಮೇಹಿಗಳಿಗೆ ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಪ್ಲಮ್ಸ್ ಕೂಡ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ ಮತ್ತು ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಅವು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಅದಲ್ಲದೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುವ ಕಿಣ್ವಗಳನ್ನು ಸಹ ಹೊಂದಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.