
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಯೋಗಕ್ಕೆ ವಿಶೇಷ ಸ್ಥಾನವಿದೆ. ಅಂತಹ ಒಂದು ಮಹತ್ವದ ಯೋಗವೇ ಗುರು-ಕುಜ ಯೋಗ. ದೇವಗುರು ಬೃಹಸ್ಪತಿ ಮತ್ತು ನವಗ್ರಹಗಳ ಸೇನಾಪತಿ ಎಂದೇ ಕರೆಯಲ್ಪಡುವ ಮಂಗಳ. ಇಬ್ಬರೂ ಒಂದೇ ರಾಶಿಯಲ್ಲಿ ಅಥವಾ ಪರಸ್ಪರ ಶುಭ ಸಂಬಂಧದಲ್ಲಿ ಸೇರಿದಾಗ ಈ ಯೋಗ ರೂಪುಗೊಳ್ಳುತ್ತದೆ. ಇದು ಸಪ್ಟೆಂಬರ್ 18ರಿಂದ ಅಕ್ಟೋಬರ್28 ರವರೆಗೆ ಕರ್ಕಾಟಕ ರಾಶಿಯಲ್ಲಿ ಇರಲಿದೆ.
ಗುರು ಜ್ಞಾನ, ವಿವೇಕ, ಸಂಪತ್ತು ಮತ್ತು ಧರ್ಮದ ಕಾರಕ. ಮಂಗಳ ಶಕ್ತಿ, ಧೈರ್ಯ, ಆತ್ಮವಿಶ್ವಾಸ ಮತ್ತು ಭೂಮಿಯ ಅಧಿಪತಿ. ಈ ಎರಡು ಶಕ್ತಿಗಳು ಒಂದಾದಾಗ ಶಾಸ್ತ್ರೀಯವಾಗಿ ಒಂದು ಅಪರೂಪದ ಸಮತೋಲನ ಸೃಷ್ಟಿಯಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಕೆಲವು ರಾಶಿಗಳಲ್ಲಿ ಈ ಸಂಯೋಗ ವಿಶೇಷವಾಗಿ ಬಲಶಾಲಿಯಾಗುತ್ತದೆ. ಉದಾಹರಣೆಗೆ, ಕರ್ಕಾಟಕ ರಾಶಿ ಗುರುವಿಗೆ ಉಚ್ಛ ಸ್ಥಾನವಾದರೂ ಮಂಗಳನಿಗೆ ನೀಚ ಸ್ಥಾನ. ಆದರೆ ಇಲ್ಲಿ ಗುರುವಿನ ಸಾನ್ನಿಧ್ಯದಿಂದ ಮಂಗಳನ ನೀಚ ದೋಷ ಭಂಗವಾಗಿ, ನೀಚಭಂಗ ರಾಜಯೋಗ ಎಂಬ ಮತ್ತಷ್ಟು ಶ್ರೇಷ್ಠ ಯೋಗ ಸೃಷ್ಟಿಯಾಗುತ್ತದೆ.
ಗುರು-ಕುಜ ಯೋಗದ ಪ್ರಭಾವ ಇರುವವರಲ್ಲಿ ಧೈರ್ಯ ಮತ್ತು ವಿವೇಕ ಒಟ್ಟಿಗೆ ಕೆಲಸ ಮಾಡುತ್ತವೆ ಎಂದು ಶಾಸ್ತ್ರ ಹೇಳುತ್ತದೆ. ಕೇವಲ ಶಕ್ತಿ ಮಾತ್ರವಿದ್ದರೆ ಆತುರದ ನಿರ್ಧಾರಗಳಿಗೆ ಕಾರಣವಾಗಬಹುದು; ಕೇವಲ ಜ್ಞಾನ ಮಾತ್ರವಿದ್ದರೆ ಕಾರ್ಯರೂಪಕ್ಕೆ ತರಲು ಬಲ ಸಾಲದಿರಬಹುದು. ಆದರೆ ಎರಡೂ ಒಟ್ಟಿಗೆ ಸೇರಿದಾಗ ಇವೆರಡರ ಸಮತೋಲನ ಸಾಧ್ಯವಾಗುತ್ತದೆ. ಇದರಿಂದ ವೃತ್ತಿಜೀವನದಲ್ಲಿ ಬಡ್ತಿ, ವ್ಯವಹಾರದಲ್ಲಿ ವಿಸ್ತರಣೆ, ಆಸ್ತಿ ಖರೀದಿ ಮತ್ತು ಆರ್ಥಿಕ ಪ್ರಗತಿಯಂತಹ ಶುಭ ಫಲಗಳು ಸಿಗುತ್ತವೆ ಎಂದು ಸಾಂಪ್ರದಾಯಿಕ ನಂಬಿಕೆ. ನಾಯಕತ್ವ ಗುಣ ವೃದ್ಧಿಸುತ್ತದೆ, ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು ಸುಲಭವಾಗುತ್ತದೆ. ಸಹೋದರ, ಸಹೋದರಿಯರೊಂದಿಗಿನ ಸಂಬಂಧ ಗಟ್ಟಿಗೊಳ್ಳುತ್ತದೆ, ಮತ್ತು ಸ್ಥಿರಾಸ್ತಿ ಸಂಬಂಧಿತ ವಿಷಯಗಳಲ್ಲಿ ಅನುಕೂಲಕರ ಬೆಳವಣಿಗೆಗಳು ಕಂಡುಬರುತ್ತವೆ.
ಪ್ರತಿಯೊಂದು ಯೋಗಕ್ಕೂ ತನ್ನದೇ ಸವಾಲುಗಳಿವೆ. ಮಂಗಳನ ಪ್ರಭಾವ ಹೆಚ್ಚಾದಾಗ ಸಿಟ್ಟು, ಆತುರ ಮತ್ತು ಮೊಂಡುತನ ಮೂಡಬಹುದು. ಆದ್ದರಿಂದ ಗುರುವಿನ ವಿವೇಕವನ್ನು ಸ್ವೀಕರಿಸಿ ತಾಳ್ಮೆಯಿಂದ ನಡೆದುಕೊಳ್ಳುವುದು ಈ ಯೋಗದ ಪೂರ್ಣ ಫಲ ಪಡೆಯಲು ಅಗತ್ಯ ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಅತಿಯಾದ ಆತ್ಮವಿಶ್ವಾಸ ಅಹಂಕಾರವಾಗಿ ಪರಿವರ್ತನೆಯಾಗದಂತೆ ಎಚ್ಚರ ವಹಿಸಬೇಕು.
ಇದನ್ನೂ ಓದಿ: ಮನಿ ಪ್ಲಾಂಟ್ಗಿಂತಲೂ ಪವರ್ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!
ಈ ಯೋಗದ ಫಲ ಪ್ರತಿ ಜಾತಕದಲ್ಲೂ ಗುರು-ಮಂಗಳರ ಸ್ಥಾನ, ದೃಷ್ಟಿ ಮತ್ತು ಇತರ ಗ್ರಹಗಳ ಪ್ರಭಾವವನ್ನು ಅವಲಂಬಿಸಿ ಬದಲಾಗುತ್ತದೆ. ಸಾಮಾನ್ಯವಾಗಿ, ಮೇಷ, ಸಿಂಹ ಮತ್ತು ಧನಸ್ಸು ರಾಶಿಯವರಿಗೆ ಈ ಯೋಗ ನಾಯಕತ್ವ ಮತ್ತು ಸಾಹಸ ಕ್ಷೇತ್ರಗಳಲ್ಲಿ ವಿಶೇಷ ಬಲ ನೀಡುತ್ತದೆ. ಕರ್ಕಾಟಕ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಭಾವನಾತ್ಮಕ ಸ್ಥಿರತೆಯೊಂದಿಗೆ ಆರ್ಥಿಕ ಪ್ರಗತಿಯ ಅವಕಾಶ ಸಿಗುತ್ತದೆ. ವೃಷಭ, ಕನ್ಯಾ ಮತ್ತು ಮಕರ ರಾಶಿಯವರಿಗೆ ಸ್ಥಿರವಾದ, ನಿಧಾನಗತಿಯ ಆದರೆ ಭದ್ರವಾದ ಪ್ರಗತಿ ಸಿಗಬಹುದು. ಮಿಥುನ, ತುಲಾ ಮತ್ತು ಕುಂಭ ರಾಶಿಯವರಿಗೆ ಬೌದ್ಧಿಕ ಕ್ಷೇತ್ರಗಳಲ್ಲಿ, ಸಂವಹನ ಮತ್ತು ಪಾಲುದಾರಿಕೆ ವ್ಯವಹಾರಗಳಲ್ಲಿ ಅನುಕೂಲ ಕಂಡುಬರಬಹುದು.
ಗುರು, ಕುಜ ಯೋಗ ಒಂದು ರೀತಿಯಲ್ಲಿ ಶಕ್ತಿಗೆ ದಿಕ್ಕು ತೋರಿಸುವ, ವಿವೇಕಕ್ಕೆ ಬಲ ನೀಡುವ ಸಂಗಮ. ಧೈರ್ಯ ಮತ್ತು ಜ್ಞಾನ ಒಟ್ಟಿಗೆ ಸೇರಿದಾಗ ಮಾತ್ರ ದೀರ್ಘಕಾಲಿಕ ಯಶಸ್ಸು ಸಾಧ್ಯ ಎಂಬುದೇ ಈ ಯೋಗದ ಆಂತರ್ಯ ಸಂದೇಶ. ವೃತ್ತಿ, ವ್ಯವಹಾರ, ಆರ್ಥಿಕ ಸ್ಥಿರತೆ ಮತ್ತು ವೈಯಕ್ತಿಕ ಬೆಳವಣಿಗೆಯ ದೃಷ್ಟಿಯಿಂದ ಇದನ್ನು ಒಂದು ಶುಭ ಕಾಲಘಟ್ಟವೆಂದು ಸಾಂಪ್ರದಾಯಿಕ ಜ್ಯೋತಿಷ್ಯ ಪರಿಗಣಿಸುತ್ತದೆ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Tue, 8 September 26